
ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದರೂ ಅಕ್ಷರ್ ಆಟಕ್ಕೆ ಭಾರತೀಯ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ಈ ಬಗ್ಗೆ ಮಾತನಾಡಿದ್ದು ಪುಣೆಯ ಎಂಸಿಎನಲ್ಲಿ ಅಕ್ಷರ್ ಆಡಿದ ಪ್ರದರ್ಶನ ಬಹಳ ಆನಂದವುಂಟು ಮಾಡಿತು ಎಂದಿದ್ದಾರೆ.
ಶ್ರೀಲಂಕಾ ವಿರುದ್ಧದ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಅಂಚಿಗೆ ತಲುಪಿದ್ದರೂ ಹೋರಾಟ ನಡೆಸಿದ ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ. "ಇದು ಭಾರತ ಕ್ರಿಕೆಟ್ ಹೊಂದಿರುವ ಸ್ಪಿರಿಟ್. ಇದರ ಬಗ್ಗೆ ನಾವು ಮಾತನಾಡಬೇಕಿದೆ. ಇಂಥಾ ಸಂದರ್ಭದಲ್ಲಿ ಈ ರೀತಿಯ ಪ್ರದರ್ಶನ ನೀಡಲು ಬಲಿಷ್ಠ ಮಾನಸಿಕ ಸ್ಐರ್ಯದ ಅಗತ್ಯವಿದೆ. ಇದು ಎರಡನೇ ಪಂದ್ಯದಲ್ಲಿ ಪ್ರದರ್ಶನವಾಗಿದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.
ಆರ್ಸಿಬಿ ತಂಡದ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಶ್ರೀಲಂಕಾ ವಿರುದ್ಧ ಅಕ್ಸರ್ ಪಟೇಲ್ ರೋಮಾಂಚನಕಾರಿ ಇನ್ನಿಂಗ್ಸ್ ಆಡಿದ್ದಾರೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಬಹಳ ಕಾಲದ ಬಳಿಕ ನೋಡಿದ ಎರಡು ಮನರಂಜನಾತ್ಮಕ ಪಂದ್ಯವಾಗಿತ್ತು ಎಂದು ಕೂಡ ಡಿಕೆ ಅಭಿಪ್ರಾಯಪಟ್ಟಿದ್ದಾರೆ.
"ಸೂರ್ಯ ಇಂದು ಎಂದಿನ ಶೈಲಿಯಲ್ಲಿ ಆಡಿಲ್ಲ. ಆದರೆ ಅಕ್ಷರ್ ಪಟೇಲ್ ನೀಡಿದ ಪ್ರದರ್ಶನ ವಿಶೇಷವಾಗಿ ಹಸರಂಗಾ ಅವರನ್ನು ದಂಡಿಸಿದ ರೀತಿ ಬಹಳ ಮನರಂಜನೆ ಒದಗಿಸಿತು. ಇದನ್ನು ನಾವು ಸುಲಭವಾಗಿ ಬಹಳ ಕಾಲದ ಬಳಿಕ ಆನಂದಿಸಿದ ಎರಡು ಪಂದ್ಯಗಳು ಎಂದು ಹೇಳಬಹುದು" ಎಂದಿದ್ದಾರೆ ದಿನೇಶ್ ಕಾರ್ತಿಕ್.
ಇನ್ನು ಈ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಅವರ ಈ ಪ್ರದರ್ಶನ ಭಾರತ ತಂಡದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಲು ಸಹಾಯಕವಾಗಲಿದೆ ಎಂದಿದ್ದಾರೆ. ಮುಂದಿನ ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನ ತಂಡಲ್ಲಿ ಅಕ್ಷರ್ ಸ್ಥಾನ ಪಡೆಯಲು ಕೂಡ ಇಂಥಾ ಇನ್ನಿಂಗ್ಸ್ಗಳು ನೆರವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುಣೆಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಮೊದಲಿಗೆ ಅಬ್ಬರದ ಬ್ಯಾಟಿಂಗ್ ನಡೆಸಿ 206 ರನ್ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆರಂಭದಲ್ಲಿಯೇ ಭಾರೀ ಕುಸಿತ ಕಂಡಿತು. ಒಂದು ಹಂತದಲ್ಲಿ 57 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಪರಿಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಜೋಡಿ ಆಸರೆಯಾದರು.
ತಲಾ ಅರ್ಧ ಶತಕ ಬಾರಿಸಿದ ಸೂರ್ಯಕುಮಾರ್ ಹಾಗೂ ಅಕ್ಷರ್ ಪಟೇಲ್ ಕೊನೆಯ ಕ್ಷಣದವರೆಗೂ ಹೋರಾಡಿದರು. ಸೂರ್ಯಕುಮಾರ್ ವಿಕೆಟ್ ಕಳೆದುಕೊಂಡ ಬಳಿಕ ಶಿವಂ ಮಾವಿ ಜೊತೆಗೂಡಿ ಅಕ್ಷರ್ ಪಟೇಲ್ ಗೆಲುವಿನ ಆಸೆ ಜೀವಂತವಾಗಿಸಿದರಾದರೂ ಅಂತಿಮವಾಗಿ ಟೀಮ್ ಇಂಡಿಯಾ 16 ರನ್ಗಳ ಸೋಲು ಅನುಭವಿಸಿದೆ. ಈ ಮೂಲಕ ಶ್ರೀಲಂಕಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.