ದುಬೈ, ಜನವರಿ 18: ಎರಡೇರಡು ಟೆಸ್ಟ್ ಸೋಲಿನಿಂದ ಬೇಸರಗೊಂಡಿದ್ದ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿಯೊಂದು ಬಂದಿದೆ. ಭಾರತ ಅಂಧರ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸಿದೆ ಅಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಅದು ಎದುರಿಸಲಿದೆ.
ನಿನ್ನೆ ನಡೆದ ಅಂಧರ ಕ್ರಿಕೆಟ್ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಾಗ್ಲಾದೇಶವನ್ನು ಎದುರಿಸಿದ್ದ ಭಾರತ ಅಂಧರ ಕ್ರಿಕೆಟ್ ತಂಡ ಭಾರಿ ಅಂತರದಲ್ಲಿ ಜಯ ಗಳಿಸುವ ಮೂಲಕ ಫೈನಲ್ಗೆ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 39 ಓವರ್ಗಳಲ್ಲಿ 256 ರನ್ ಗಳಿಸಿ ಆಲ್ ಔಟ್ ಆಯಿತು, ಆ ನಂತರ ಗುರಿ ಬೆನ್ನತ್ತಿದ್ದ ಭಾರತದ ಆಟಗಾರರು ಕೇವಲ 23 ಓವರ್ಗಳಲ್ಲಿ ಗುರಿ ಮುಟ್ಟಿ ವಿಜಯ ಮಾಲೆ ಕೊರಳಿಗೇರಿಸಿಕೊಂಡರು.
ಬಾಂಗ್ಲಾದೇಶದ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಅಬ್ದುಲ್ ಮಲ್ಲಿಕ್ 108 ರನ್ ಗಳಿಸಿ ಅಜೇಯರಾಗುಳಿದರು. ಭಾರತದ ಪರ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ದುರ್ಗಾ ರಾವ್ ಕೇವಲ 20 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಪಂದ್ಯ ಪುರುಷೋತ್ತಮ ಗೌರವಕ್ಕೆ ಭಾಜನರಾದ ಗಣೇಶ್ಭಾಯ್ ಮುಹುದ್ಕರ್ ಅವರು ಕೇವಲ 69 ಬಾಲಿನಲ್ಲಿ 112 ರನ್ ಗಳಿಸಿ ಭಾರತ ಅಂಧರ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರ ಜೊತೆ ಉತ್ತಮ ಜೊತೆಯಾಟ ನಿರ್ವಹಿಸಿದ ದೀಪಕ್ ಮಹೇಶ್ 53 ಮತ್ತು ನರೇಶ್ 40 ರನ್ ಭಾರಿಸಿದರು.
ಅಂಧರ ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟದಲ್ಲಿ ಭಾರತ ತಂಡ ಅಜೇಯ ನಾಗಲೋಟ ಮಾಡುತ್ತಿದ್ದು, ಇಲ್ಲಿಯವರೆಗೂ ಒಂದೂ ಪಂದ್ಯವನ್ನು ಸೋಲದೆ ಅಂತಿಮ ಘಟಕ್ಕೆ ತಲುಪಿದೆ. ಜನವರಿ 20ರಂದು ಅತಿಥೇಯ ತಂಡ ಪಾಕಿಸ್ತಾನವನ್ನು ಎದುರಿಸಲಿದ್ದು, ಪಂದ್ಯವು ಶಾರ್ಜಾ ಮೈದಾನದಲ್ಲಿ ನಡೆಯಲಿದೆ.