ಬೆಂಗಳೂರು, ಡಿ. 16: ಬ್ಯಾಂಕ್ ಗಳ ಬಡ್ಡಿ ತುಂಬಲಾಗದೇ ಸುಸ್ತಿದಾರನಾಗಿರುವ ವಿಜಯ್ ಮಲ್ಯ ಅಪಾರ ಹಣ ಉಳಿಸಿದ್ದಾರೆ! ತಮ್ಮ ಒಡೆತನದ ಆರ್ ಸಿಬಿಯಿಂದ ದಶಕೋಟಿ ವೀರ ಯುವರಾಜ್ ಸಿಂಗ್ ಅವರನ್ನು ಕೈ ಬಿಟ್ಟು 14 ಕೋಟಿ ರೂ. ಲಾಭ ಮಾಡಿಕೊಂಡಿದ್ದಾರೆ.
ಕಳೆದ ಐಪಿಎಲ್ ನಲ್ಲಿ ಅತಿ ದುಬಾರಿ ಮೊತ್ತಕ್ಕೆ(14 ಕೋಟಿ ರೂ.)ಹರಾಜಾಗಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಅವರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ ಈ ಬಾರಿ ಕೈ ಬಿಟ್ಟಿದೆ.[ಮತ್ತೆ ಸುಸ್ತಿದಾರನಾದರೂ ಸುಸ್ತಾಗದ ಮಲ್ಯ]
ಬೆಂಗಳೂರು ತಂಡ 2014 ರ ಐಪಿಎಲ್ ನಲ್ಲಿ ಅಂಥ ಸಾಧನೆಯನ್ನೇನೂ ಮಾಡಿರಲಿಲ್ಲ. ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಎಬಿ ಡೆವಿಲಿಯರ್ಸ್ ಅಂಥವರನ್ನು ತಂಡ ಒಳಗೊಂಡಿದ್ದರೂ ವಿಫಲವಾಗಿತ್ತು. ಯುವರಾಜ್ ಸಿಂಗ್ 2014ರ ಐಪಿಎಲ್ನಲ್ಲಿ ತಮ್ಮ ಮೌಲಕ್ಕೆ ತಕ್ಕ ಸಾಧನೆಯನ್ನೇನೂ ತೋರಿರಲಿಲ್ಲ. 34ರ ಸರಾಸರಿಯಲ್ಲಿ, 3 ಅರ್ಧ ಶತಕಗಳ ಸಹಿತ 376 ರನ್ ಗಳಿಸಿದ್ದರು. ಇದು ಆರ್ಸಿಬಿಯ ದ್ವಿತೀಯ ಸರ್ವಾಧಿಕ ವೈಯಕ್ತಿಕ ಮೊತ್ತವಾಗಿತ್ತು.
9 ಪಂದ್ಯಗಳಲ್ಲಿ ಸೋತು ಐದನ್ನಷ್ಟೇ ಗೆದ್ದಿದ್ದ್ ತಂಡ ಏಳನೇ ಸ್ಥಾನ ಗಳಿಸಿತ್ತು. ವಿಶ್ವಕಪ್ ಗೂ ಆಯ್ಕೆಯಾಗದ ಯುವರಾಜ್ ಸಿಂಗ್ ಗೆ ಆರ್ ಸಿಬಿ ಮತ್ತೊಂದು ಶಾಕ್ ನೀಡಿದೆ.[ಬೋಲ್ಟ್ 'ಸಿಕ್ಸರ್' ಕಿಂಗ್, ಯುವಿ 'ಸ್ಪೀಡ್' ಕಿಂಗ್]
ಜಹೀರ್ ಖಾನ್ ಮತ್ತು ಪ್ರಗ್ಯಾನ್ ಓಜಾ ಅವರನ್ನು ಮುಂಬೈ ತಂಡ ಕೈ ಬಿಟ್ಟಿದ್ದರೆ , ದೊಡ್ಡ ಮೊತ್ತ ಕೊಟ್ಟು ಖರೀದಿಸಿದ್ದ ದಿನೇಶ್ ಕಾರ್ತಿಕ್ ಅವರನ್ನು ಡೆಲ್ಲಿ ಡೆರ್ ಡೆವಿಲ್ಸ್ ಬೇಡ ಎಂದಿದೆ. ತಮ್ಮ ತಮ್ಮ ತಂಡಗಳ ವರದಿ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು.