
ಬೆಂಗಳೂರು, ಏಪ್ರಿಲ್ 10: ತಮಿಳುನಾಡಿನಲ್ಲಿ ಕಾವೇರಿ ವಿವಾದ ಭುಗಿಲೇಳುತ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯದ ಕೆಲವು ಗಂಟೆಗಳಿಗೂ ಮುನ್ನ ಕೆಲವು ತಮಿಳು ಸಂಘಟನೆಗಳ ಕಾರ್ಯಕರ್ತರು ಎಂಎ ಚಿದಂಬರಂ ಕ್ರೀಡಾಂಗಣದ ಮುಂಭಾಗದ ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು.
ತಮಿಳಿಗ ವಳುರಿಮೈ ಕಚ್ಚಿ (ಟಿವಿಕೆ) ಸಂಘಟನೆಯ ಮುಖಂಡ ಟಿ. ವೇಲುಮುರುಗನ್ ನೇತೃತ್ವದಲ್ಲಿ ಕಾರ್ಯಕರ್ತರು ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಮುಂದಾದರು. ಪೊಲೀಸರು ಕೂಡಲೇ ಅವರನ್ನು ತಡೆದರು.
ರಾಜ್ಯದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಬಾರದು ಎಂದು ಕಾರ್ಯಕರ್ತರು ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು. ಐಪಿಎಲ್ ಪಂದ್ಯಗಳಿಗೆ ಕಾರ್ಯಕರ್ತರು ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಕ್ರೀಡಾಂಗಣದ ಸುತ್ತಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕ್ರೀಡಾಂಗಣದಲ್ಲಿ ಸುಮಾರು 4,000 ಪೊಲೀಸರು, ಕಮಾಂಡೊಗಳು ಮತ್ತು ತುರ್ತು ಕಾರ್ಯಪಡೆ ಯೋಧರನ್ನು ನಿಯೋಜಿಸಲಾಗಿದೆ.
ಪಂದ್ಯ ನಡೆಯುವ ಸ್ಥಳದ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ವೇಲುಮುರುಗನ್ ಭಾನುವಾರ ಎಚ್ಚರಿಕೆ ನೀಡಿದ್ದರು. ಚೆನ್ನೈನಲ್ಲಿ ನಡೆಯುವ ಎಲ್ಲ ಐಪಿಎಲ್ ಪಂದ್ಯಗಳ ವೇಳೆಯೂ ಪ್ರತಿಭಟನೆ ನಡೆಸುವುದಾಗಿ ಕೆಲವು ಸಂಘಟನೆಗಳು ಎಚ್ಚರಿಕೆ ನೀಡಿವೆ.
'ನಮ್ಮ ಮನವಿಯಾಚೆಗೂ ಕ್ರಿಕೆಟ್ ಪಂದ್ಯ ನಡೆದರೆ ನಾವು ಎಲ್ಲ ಪ್ರಜಾಪ್ರಭುತ್ವವಾದಿ ಕೂಟಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ಸಂಘಟಿಸಿ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಗಲಾಗುವುದು. ಇದರಲ್ಲಿ ಅನೇಕ ಮುಖಂಡರು ಮತ್ತು ಸಂಘಟನೆಗಳು ಭಾಗವಹಿಸಲಿದ್ದಾರೆ' ಎಂದು ವೇಲುಮುರುಗನ್ ಹೇಳಿದ್ದರು. ತಮಿಳು ತಿಳಿದಿರುವ ಕ್ರಿಕೆಟಿಗರು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಕಳದ ಒಂದು ವಾರದಿಂದ ತಮಿಳುನಾಡಿನ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳು ತೀವ್ರವಾಗುತ್ತಿರುವುದರಿಂದ ರಾಜ್ಯದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಬಾರದು ಎಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಆಗ್ರಹಿಸಿವೆ.