ಆರ್ಸಿಬಿಗೆ ಇಲ್ಲ ಅವಕಾಶ
'ಈ ಸಲ ಕಪ್ ನಮ್ದೇ' ಎಂಬ ಹವಾ ಎಬ್ಬಿಸಿದ್ದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯೂ ನಿರಾಸೆ ಮೂಡಿಸಿತು. ಕಡೇಪಕ್ಷ ಪ್ಲೇಆಫ್ ಹಂತಕ್ಕೆ ತಲುಪುವ ಪ್ರದರ್ಶನವನ್ನೂ ಆರ್ಸಿಬಿ ನೀಡದೆ ಇರುವುದು ಅವರಲ್ಲಿ ಬೇಸರ ತರಿಸಿದೆ.
ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಸಮರ್ಥರನ್ನು ಖರೀದಿಸುವಲ್ಲಿ ವಿಫಲವಾದ ಆರ್ಸಿಬಿ, ತಂಡದ ಆಯ್ಕೆ ವೇಳೆಯೂ ಸಾಕಷ್ಟು ಬಾರಿ ಎಡವಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಬದಲಾವಣೆಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು.
ಸತತ ವೈಫಲ್ಯ ಅನುಭವಿಸಿದ ಸರ್ಫರಾಜ್ ಖಾನ್, ಮನ್ದೀಪ್ ಸಿಂಗ್ ಅವರಿಗೆ ಮಣೆ ಹಾಕಿದ ಆರ್ಸಿಬಿ, ರಣಜಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕದ ಆಟಗಾರ ಪವನ್ ದೇಶಪಾಂಡೆ ಅವರನ್ನು ಕಣಕ್ಕಿಳಿಸುವ ಗೋಜಿಗೇ ಹೋಗಲಿಲ್ಲ. ದೇಶಿ ಟಿ20ಯಲ್ಲಿ ಗಮನ ಸೆಳೆದಿದ್ದ ಅನಿರುದ್ಧ್ ಜೋಶಿಯ ಕಥೆಯೂ ಭಿನ್ನವಲ್ಲ.
ಗಮನ ಸೆಳೆದ ಕನ್ನಡಿಗರು
ದೇಶಿ ಕ್ರಿಕೆಟ್ನಲ್ಲಿ ಕರ್ನಾಟಕದ ತಂಡದ ಶಕ್ತಿ ಪದೇ ಪದೇ ಸಾಬೀತಾಗಿದೆ. ಅದರಲ್ಲಿ ಉತ್ತಮ ಆಟವಾಡಿದ ಅನೇಕರು ಐಪಿಎಲ್ನಲ್ಲಿಯೂ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಆರ್ಸಿಬಿ ಕನ್ನಡಿಗ ಆಟಗಾರರನ್ನು ಕಡೆಗಣಿಸಿದರೂ ಉಳಿದ ತಂಡಗಳು ಇಲ್ಲಿನ ಆಟಗಾರರನ್ನು ಗುರುತಿಸಿ ಅವಕಾಶ ನೀಡಿದ್ದವು. ಅದರಲ್ಲಿ ಕೆ. ಗೌತಮ್, ಕೆ.ಎಲ್. ರಾಹುಲ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ ಮನೆಮಾತಾಗಿದ್ದಾರೆ. ಹೈದರಾಬಾದ್ ತಂಡದಲ್ಲಿರುವ ಮನೀಶ್ ಪಾಂಡೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಅರ್ಧಶತಕಗಳನ್ನು ಗಳಿಸಿ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಇನ್ನು ಮೂರು ತಂಡಗಳಲ್ಲಿ ಕರ್ನಾಟಕದ ತಲಾ ಮೂವರು ಆಟಗಾರರಿರುವುದು ವಿಶೇಷ.
ಕೋಲ್ಕತಾ ನೈಟ್ ರೈಡರ್ಸ್
ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿರುವ ರಾಬಿನ್ ಉತ್ತಪ್ಪ ಈಗ ರಣಜಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿದ್ದರೂ ಕನ್ನಡಿಗರ ಪ್ರೀತಿ ಉಳಿಸಿಕೊಂಡಿದ್ದಾರೆ.
ವೇಗದ ಬೌಲರ್ಗಳಾದ ಪ್ರಸಿದ್ಧ್ ಕೃಷ್ಣ ಮತ್ತು ವಿನಯ್ ಕುಮಾರ್ ಕೋಲ್ಕತಾ ತಂಡದಲ್ಲಿ ಆಡುತ್ತಿದ್ದಾರೆ. ಕೊನೆಯ ಓವರ್ನಲ್ಲಿ ಎದುರಾಳಿಗಳಿಗೆ ಗೆಲ್ಲಲು ಬೇಕಿದ್ದ 17 ರನ್ ಬಿಟ್ಟುಕೊಟ್ಟ ವಿನಯ್ ಕುಮಾರ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಎರಡು ಪಂದ್ಯಗಳನ್ನು ಆಡಿದ ಅವರು ಮತ್ತೆ ಕಣಕ್ಕಿಳಿಯುವ ಅವಕಾಶ ಪಡೆದುಕೊಳ್ಳಲಿಲ್ಲ. ಮತ್ತೊಬ್ಬ ಬೌಲರ್ ಪ್ರಸಿದ್ಧ ಕೃಷ್ಣ 5 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್
ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಕೆ.ಎಲ್. ರಾಹುಲ್, ರಾಷ್ಟ್ರೀಯ ತಂಡದಲ್ಲಿ ಕೆಲವು ಪಂದ್ಯಗಳನ್ನು ಆಡಿರುವ ಕರುಣ್ ನಾಯರ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ತಂಡದ ಕದ ಬಡಿಯುತ್ತಿರುವ ಮಯಂಕ್ ಅಗರ್ವಾಲ್ ಅವರಂತಹ ಮೂವರು ಪ್ರಮುಖ ಬ್ಯಾಟ್ಸ್ಮನ್ಗಳು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಇದರಲ್ಲಿ ಕೆ.ಎಲ್. ರಾಹುಲ್ ಆಟವನ್ನು ಕಂಡು ಮೆಚ್ಚದವರಿಲ್ಲ. ಆರೇಂಜ್ ಕ್ಯಾಪ್ಗೆ ಪ್ರಬಲ ಸ್ಪರ್ಧಿಯಾಗಿದ್ದ ರಾಹುಲ್, ಮೊದಲ ಪಂದ್ಯದಲ್ಲಿಯೇ ದಾಖಲೆಯ ಅತಿವೇಗದ ಅರ್ಧಶತಕ ದಾಖಲಿಸಿದ್ದರು. ಕೆಲವು ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಿದ್ದರು. ಕೊನೆಯ ಪಂದ್ಯದಲ್ಲಿಯೇ ಅವರು ಹತ್ತರ ಗಡಿ ದಾಟಲು ವಿಫಲವಾಗಿದ್ದು.
ಕರುಣ್ ನಾಯರ್ ಉತ್ತಮ ಆಟವಾಡಿದರೂ ಒಂದೆರಡು ಪಂದ್ಯಗಳ ವೈಫಲ್ಯ ಅನುಭವಿಸಿದರು. ಹಾಗಾಗಿ ಮುಂಬೈ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಹೊರಗೆ ಕೂರುವಂತಾಗಿತ್ತು. ತಮ್ಮನ್ನು ಆ ಪಂದ್ಯದಲ್ಲಿ ಕೈಬಿಟ್ಟಿದ್ದು ತಪ್ಪು ಎಂಬುದನ್ನು ಚೆನ್ನೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಸಾಬೀತುಪಡಿಸಿದರು.
ಅಬ್ಬರದ ಆಟಕ್ಕೆ ಹೆಸರುವಾಸಿಯಾದ ಮಯಂಕ್ ಅಗರ್ವಾಲ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಐಪಿಎಲ್ನಲ್ಲಿ ಉತ್ತಮ ಆಟವಾಡಿದರೆ ಭಾರತ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ನಿರೀಕ್ಷೆಗಳು ಮೂಡಿದ್ದವು. ಆದರೆ ಮಯಂಕ್ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಒಂದು ಪಂದ್ಯದಲ್ಲಷ್ಟೇ 30 ರನ್ ಗಳಿಸಿದರು.
ರಾಜಸ್ಥಾನ ರಾಯಲ್ಸ್
ರಾಜಸ್ಥಾನ ರಾಯಲ್ಸ್ ತಂಡದ ಅನೇಕ ಗೆಲುವುಗಳಲ್ಲಿ ಕರ್ನಾಟಕದ ಆಟಗಾರರ ಕೊಡುಗೆ ಮಹತ್ವವಾಗಿದೆ. ಅದರಲ್ಲಿಯೂ ಕೆ. ಗೌತಮ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಶ್ರೇಯಸ್ ಗೋಪಾಲ್ ಆರ್ಸಿಬಿ ವಿರುದ್ಧ ಸ್ಪಿನ್ ಮೋಡಿ ತೋರಿಸಿದ್ದರು. ಬ್ಯಾಟಿಂಗ್ನಲ್ಲಿಯೂ ಅವರು ಅಲ್ಪ ಕಾಣಿಕೆ ನೀಡಿದ್ದಾರೆ. ಸ್ಟುವರ್ಟ್ ಬಿನ್ನಿ ಕೂಡ ಈ ತಂಡದಲ್ಲಿ ಇದ್ದಾರೆ. ಬೌಲಿಂಗ್ನಲ್ಲಿ ದುಬಾರಿಯಾಗಿ, ಬ್ಯಾಟಿಂಗ್ನಲ್ಲಿಯೂ ಯಶಸ್ಸು ಕಾಣದಿದ್ದರೂ, ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
|
ಟ್ರೋಫಿ ಒಂದು, ತಂಡ ನಾಲ್ಕು
ಐಪಿಎಲ್ ಪ್ಲೇಆಫ್ನ ಕ್ವಾಲಿಫೈಯರ್ನಲ್ಲಿ ಮೊದಲ ಪಂದ್ಯ ಚೆನ್ನೈ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಮೇ 22ರಂದು ನಡೆಯಲಿದೆ.
ಈ ಪಂದ್ಯದಲ್ಲಿ ಗೆದ್ದವರು ನೇರವಾಗಿ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಆದರೆ, ಸೋತವರು ಹೊರಹೋಗುವುದಿಲ್ಲ. ಅವರಿಗೆ ಇನ್ನೊಂದು ಅವಕಾಶ ಲಭ್ಯವಾಗಲಿದೆ.
ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮೇ 23ರಂದು ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 25 ರಂದು ಕ್ವಾಲಿಫೈಯರ್ನಲ್ಲಿ ಸೋತ ತಂಡವನ್ನು ಎದುರಿಸಬೇಕು. ಇಲ್ಲಿ ಗೆದ್ದ ತಂಡ ಮೇ 27ರಂದು ಫೈನಲ್ನಲ್ಲಿ ಕ್ವಾಲಿಫೈ ಆದ ತಂಡಕ್ಕೆ ಮುಖಾಮುಖಿಯಾಗಲಿದೆ.