ಈ ಬಾರಿಯ ಐಪಿಎಲ್ ಕನ್ನಡಿಗ ಮನೀಷ್ ಪಾಂಡೆ ಪಾಲಿಗೆ ಸಕಾರಾತ್ಮಕವಾಗಿರುವಂತೆ ತೋರುತ್ತಿಲ್ಲ. ಟೂರ್ನಿಯ ಆರಂಭದಲ್ಲಿಯೇ ಎಡವಿರುವ ಮನೀಷ್ ಪಾಂಡೆ ದೊಡ್ಡ ಮಟ್ಟದಲ್ಲಿಯೇ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಗುರಿ ಬೆನ್ನತ್ತುವ ಸಂದರ್ಭದಲ್ಲಿ ಮನೀಷ್ ಪಾಂಡೆ ನಿಧಾನಗತಿಯ ಆಟವಾಡಿದ್ದರ ಕುರಿತು ಸಾಕಷ್ಟು ಮಂದಿ ಕಿಡಿಕಾರಿದ್ದಾರೆ.
39 ಎಸೆತಗಳಿಗೆ 38 ರನ್ ಗಳಿಸಿದ ಮನೀಷ್ ಪಾಂಡೆಯವರ ನಿಧಾನಗತಿಯ ಆಟದಿಂದಲೇ ಸನ್ ರೈಸರ್ಸ್ ಹೈದರಾಬಾದ್ ತಂಡ ಬೆಂಗಳೂರು ತಂಡದ ವಿರುದ್ಧ ಸೋಲನ್ನುಂಡಿತು ಎಂದು ಹಲವಾರು ಮಂದಿ ಅಪಾದನೆ ಮಾಡುತ್ತಿದ್ದಾರೆ. ಪಾಂಡೆ ನಿಧಾನಗತಿಯ ಆಟದ ಬಗ್ಗೆ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಪ್ರತಿಕ್ರಿಯೆ ನೀಡಿದ ನಂತರ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕೂಡ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮರುಯೋಚನೆ ಶುರುವಾಗಿರುತ್ತದೆ, ಪ್ರಸ್ತುತ ಕೇನ್ ವಿಲಿಯಮ್ಸನ್ ಆಟದ ಬೆಲೆ ದ್ವಿಗುಣಗೊಂಡಿದೆ. ಮನೀಷ್ ಪಾಂಡೆ ಕಳಪೆ ಪ್ರದರ್ಶನದ ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೇಮ್ ಫಿನಿಶರ್ ಕೊರತೆ ಕಾಡುತ್ತಿದೆ, ಹೀಗಾಗಿ ತಂಡದಲ್ಲಿ ಕೆಲವೊಂದಿಷ್ಟು ಬದಲಾವಣೆಗಳು ಕಂಡುಬರಲಿದ್ದು ಸನ್ ರೈಸರ್ಸ್ ಹೈದರಾಬಾದ್ ಆಡುವ ಬಳಗದಲ್ಲಿ ಮನೀಷ್ ಪಾಂಡೆಗೆ ಸ್ಥಾನ ಸಿಗದೇ ಇರಬಹುದು ಎಂದು ಅಜಯ್ ಜಡೇಜಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.