ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತದಲ್ಲಿ ಸೋಲು ಅನುಭವಿಸುವ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ಬದಲಾವಣೆಗೆ ಸಾಕಷ್ಟು ಒತ್ತಾಯಗಳು ಕೇಳಿ ಬಂದಿದೆ. ಅದರಲ್ಲೂ ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಬೇಕು ಎಂಬ ಒತ್ತಾಯಗಳು ಜೋರಾಗಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಇರ್ಫಾನ್ ಪಠಾಣ್ ಕೂಡ ಪ್ರತಿಕ್ರಿಯಿಸಿದ್ದು ಹಾರ್ದಿಕ್ ಜೊತೆಗೆ ಮತ್ತೋರ್ವವನ್ನು ನಾಯಕನ್ನಾಗಿ ಬೆಳೆಸುವ ಅಗತ್ಯವಿದೆ ಎಂದಿದ್ದಾರೆ.
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ 2024ರ ಟಿ20 ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಬ್ಬನನ್ನು ಮಾತ್ರವಲ್ಲ ಇಬ್ಬರು ಆಟಗಾರರನ್ನು ನಾಯಕನ ಸ್ಥಾನಕ್ಕೆ ಬೆಳೆಸುವ ಅಗತ್ಯವಿದೆ ಎಂದಿದ್ದಾರೆ. ರೋಹಿತ್ ಶರ್ಮಾ ಬಳಿಕ ಭಾರತದ ಟಿ20 ನಾಯಕನ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಸೂಕ್ತ ಎಂದಿರುವ ಪಠಾಣ್ ಮತ್ತೋರ್ವ ಆಟಗಾರನನ್ನು ಕೂಡ ಈ ಸ್ಥಾನಕ್ಕೆ ಆಯ್ಕೆ ಮಾಡಿ ಬೆಳೆಸುವ ಅಗತ್ಯವಿದೆ ಎಂದಿದ್ದಾರೆ.
165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡುಗನ ಐತಿಹಾಸಿಕ ಸಾಧನೆ
ಟೀಮ್ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧ ವೈಟ್ಬಾಲ್ ಸರಣಿಯಲ್ಲಿ ಭಾಗಿಯಾಗಿಲಿದ್ದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ನವೆಂಬರ್ 18ರಿಂದ ಈ ಸರಣಿ ಆರಂಭವಾಗಲಿದ್ದು ರೋಹಿತ್ ಶರ್ಮಾ ಸೇರಿದಂತೆ ಕೆಲ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. 2024ರ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ಅವರನ್ನೇ ಚುಟುಕು ಮಾದರಿಯ ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
"ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಹಾರ್ದಿಕ್ ಪಾಂಡ್ಯ ಓರ್ವ ನಾಯಕ. ಐಪಿಎಲ್ನಲ್ಲಿ ಅದ್ಭುತವಾಗಿ ತಂಡವನ್ನು ಮುನ್ನಡೆಸಿದ್ದು ಟ್ರೋಫಿ ಗೆದ್ದುಕೊಂಡಿದ್ದರು. ಆದರೆ ನೀವು ಕೇವಲ ಒಬ್ಬರನ್ನು ಮಾತ್ರವೇ ನಾಯಕತ್ವಕ್ಕೆ ಆಯ್ಕೆ ಮಾಡಿದರೆ ಸಾಕಾಗದು. ಭವಿಷ್ಯದ ದೃಷ್ಟಿಯಿಂದ ಇಬ್ಬರನ್ನು ನಾಯಕನ ಸ್ಥಾನಕ್ಕೆ ಗುರುತಿಸಿಕೊಳ್ಳಬೇಕಿದೆ. ನಾವು ಆರಂಬಿಕ ಸ್ಥಾನದ ಬಗ್ಗೆ ಮಾತನಾಡುತ್ತಾ ಆರಂಬಿಕ ಆಟಗಾರರ ಗುಂಪು ಕಂಡುಕೊಳ್ಳುವ ಅಗತ್ಯವಿದೆ ಎನ್ನುತ್ತೇವೆ. ನಾವು ನಾಯಕರ ಗುಂಪನ್ನು ಕೂಡ ಕಂಡುಕೊಳ್ಳಬೇಕಿದೆ" ಎಂದಿದ್ದಾರೆ ಮಾಜಿ ಆಟಗಾರ ಇರ್ಫಾನ್ ಪಠಾಣ್.
ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸಿದರೆ ಬಳಿಕ ಏಕದಿನ ಸರಣಿಗೆ ಶಿಖರ್ ಧವನ್ ಮುನ್ನಡೆಸಲಿದ್ದಾರೆ.