

ಲೀಡ್ಸ್, ಜುಲೈ 19: ಭಾರತಕ್ಕೆ ಎರಡೆರಡು ವಿಶ್ವಕಪ್ ಗೆದ್ದುಕೊಟ್ಟಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ನಿವೃತ್ತರಾಗುತ್ತಿದ್ದಾರೆಯೇ?. ಈ ಬಗ್ಗೆ ಸುಳಿವು ನೀಡಿದೆ ಒಂದು ವಿಡಿಯೋ.
ಹೌದು, ಇಂಗ್ಲೆಂಡ್ ವಿರುದ್ಧ ಸರಣಿಯ ಕೊನೆಯ ಪಂದ್ಯ ಸೋತ ಬಳಿಕ ಧೋನಿ ಅವರು ಅಂಪೈರ್ನಿಂದ ಚೆಂಡನ್ನು ಕೇಳಿ ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾನ್ಯವಾಗಿ ನಿವೃತ್ತರಾಗುವ ಆಟಗಾರರು ಹೀಗೆ ಮಾಡುತ್ತಾರೆ.
ಧೋನಿ ಅವರು ಪ್ರಸ್ತುತ ಕಳಪೆ ಫಾರ್ಮ್ನಲ್ಲಿದ್ದು, ರನ್ ಗಳಿಸಲು ತೀವ್ರವಾಗಿ ಪರದಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯ ಮೂರೂ ಪಂದ್ಯಗಳಲ್ಲಿ ಅವರು ರನ್ ಗಳಿಸಲು ಬಹಳಷ್ಟು ಪರದಾಡಿದರು. ಮುಂಚೆ ಇದ್ದ ಮೊನಚು ಅವರ ಆಟದಲ್ಲಿ ನಾಪತ್ತೆಯಾಗಿತ್ತು.

ಧೋನಿ ಅವರ ಕಳಪೆ ಫಾರ್ಮ್ನಿಂದ ಬೇಸರಗೊಂಡಿದ್ದ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಟೀಕಿಸಿದ್ದರು. 'ಗಡ್ಡ ಬಿಳಿಯಾದ ಮೇಲೂ ಧೋನಿ ಆಡಬಾರದು' ಎಂದು ಮೂದಲಿಸಿದ್ದರು. ಹಾಗಾಗಿ ಧೋನಿ ಅವರು ನಿವೃತ್ತಿಯ ನಿರ್ಧಾರಕ್ಕೆ ಬಂದಿರಲಿಕ್ಕೂ ಸಾಕು.
ಈ ಹಿಂದೆ 2014ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ್ದ ಧೋನಿ ಏಕದಿನ ಮತ್ತು ಟಿ20 ಕ್ರಿಕೆಟ್ಗೂ ಹಾಗೆಯೇ ಹಠಾತ್ತನೆ ನಿವೃತ್ತಿ ಘೋಷಿಸಿಬಿಡುತ್ತಾರೆಯೇ ಅಥವಾ ಮುಂದಿನ ವರ್ಷ ನಡೆಯುವ ವಿಶ್ವಕಪ್ನಲ್ಲಿ ಆಡಿ ಆ ನಂತರ ನಿವೃತ್ತರಾಗುತ್ತಾರೆಯೇ ಕಾದು ನೋಡಬೇಕು.
ಆದರೆ ಬಿಸಿಸಿಐ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಧೋನಿ ನಿವೃತ್ತರಾಗುತ್ತಿಲ್ಲ ಅದು ಕೇವಲ ಊಹೆಯಷ್ಟೆ ಎಂದಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಸಹ ಈ ವಿಷಯವನ್ನು ಅಲ್ಲಗಳೆದಿದ್ದು, 'ಬೌಲಿಂಗ್ ಕೋಚ್ಗೆ ಚೆಂಡನ್ನು ತೋರಿಸಲೆಂದು ಧೋನಿ ಅಂಪೈರ್ನಿಂದ ಬಾಲ್ ಪಡೆದರು' ಎಂದು ಸ್ಪಷ್ಟೀಕರಣ ನೀಡಿದ್ದಾರೆ.