ಬೆಂಗಳೂರು, ಫೆಬ್ರವರಿ 27: ಕರ್ನಾಟಕದ ಅನುಭವಿ ಎಡಗೈ ವೇಗದ ಬೌಲರ್ ಶ್ರೀನಾಥ್ ಅರವಿಂದ್ ಅವರು ಪ್ರಥಮ ದರ್ಜೆ ಹಾಗೂ ಎ ದರ್ಜೆ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇಂದು ವಿಜಯ್ ಹಜಾರೆ ಫೈನಲ್ ಪಂದ್ಯ ಅವರ ಕೊನೆಯ ಪಂದ್ಯವಾಗಿತ್ತು.
ಬೆಂಗಳೂರಿನ ಶ್ರೀನಾಥ್ ಅರವಿಂದ್ 2008 ರಲ್ಲಿ ಸೌರಾಷ್ಟ್ರ ವಿರುದ್ಧವೇ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ್ದರು, ಇಂದು ಅದೇ ತಂಡದ ವಿರುದ್ಧ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿದಾಯ ಹೇಳಿದ್ದಾರೆ.
ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ತಾವು ಪ್ರಥಮ ದರ್ಜೆ ಹಾಗೂ ಎ ದರ್ಜೆ ಪಂದ್ಯಗಳಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಹೇಳಿದ್ದಾರೆ.
56 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 186 ವಿಕೆಟ್ ಗಳಿಸಿದ್ದಾರೆ ಮತ್ತು 41 ಎ ದರ್ಜೆ ಪಂದ್ಯಗಳನ್ನಾಡಿ 57 ವಿಕೆಟ್ ಗಳಿಸಿದ್ದಾರೆ. 2014-15ರ ಋತುವಿನಲ್ಲಿ ಒಟ್ಟು 54 ವಿಕೆಟ್ ಗಳಿಸಿದಿದ್ದು ಅವರ ಅತ್ಯುತ್ತಮ ಸಾಧನೆ.
ಭಾರತದ ಪರ ಒಂದು ಟಿ20 ಪಂದ್ಯ ಮಾತ್ರ ಆಡಿದ್ದ ಶ್ರೀನಾಥ್ ಅವರು ಒಂದು ವಿಕೆಟ್ ಗಳಿಸಿದ್ದರು. ಏಕದಿನ ಪಂದ್ಯಕ್ಕೂ ಆಯ್ಕೆ ಆಗಿದ್ದರಾದರೂ ಗಾಯದ ಕಾರಣದಿಂದ ಆಡುವ ಅವಕಾಶ ದೊರೆಯಲಿಲ್ಲ.
ಆರ್ಸಿಬಿ ಪರ ಐಪಿಎಲ್ ಪಂದ್ಯದಲ್ಲೂ ಅರವಿಂದ್ ಅವರು ಆಡಿದ್ದರು ಆದರೆ ಈ ಬಾರಿ ಯಾವುದೇ ಐಪಿಎಲ್ ತಂಡಕ್ಕೆ ಆಯ್ಕೆ ಆಗಲಿಲ್ಲ.
ವಿನಯ್ ಕುಮಾರ್, ಅಭಿಮನ್ಯು ಮಿಥುನ್ ರೀತಿಯ ಅತ್ಯುತ್ತಮ ಬೌಲರ್ಗಳ ಜೊತೆಗೆ ಬೌಲಿಂಗ್ ಮಾಡಿದ ಅರವಿಂದ್ ಅವರು ರಾಜ್ಯಕ್ಕಾಗಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ.
ಒಂದೇ ಸೀಸನ್ನಲ್ಲಿ ರಣಜಿ, ವಿಜಯ್ ಹಜಾರೆ ಮತ್ತು ದೇವದರ್ ಟ್ರೋಫಿಗಳನ್ನು ಗೆದ್ದ ಕರ್ನಾಟಕ ತಂಡದ ಪ್ರಮುಖ ಆಟಗಾರರಾಗಿ ಅರವಿಂದ್ ಆಡಿದ್ದರು.
ಅರವಿಂದ್ ವಿದಾಯದ ಬಗ್ಗೆ ನೋವಿನ ಮಾತನ್ನಾಡಿರುವ ಕರುಣ್ ನಾಯರ್ ಅವರು 'ಅವರ ನಿರ್ಗಮನ ಬೇಸರ ತಂದಿದೆ, ಅವರು ಇನ್ನೂ ಎರಡು-ಮೂರು ವರ್ಷ ಆಡಬಹುದಿತ್ತು' ಎಂದಿದ್ದಾರೆ.