
ಬೆಂಗಳೂರು, ಜೂನ್ 09: ಕಳೆದ ರಣಜಿ ಸೀಸನ್ ಆಡಿ, ನಿವೃತ್ತಿ ಹೊಂದಿದ್ದ ಎಡಗೈ ವೇಗಿ ಶ್ರೀನಾಥ್ ಅರವಿಂದ್ ಅವರನ್ನು ಕರ್ನಾಟಕ ರಣಜಿ ಹಿರಿಯರ ತಂಡ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಸ್ (ಕೆಎಸ್ ಸಿಎ) ಪ್ರಕಟಿಸಿದೆ.
2018-19ರ ಅವಧಿಗೆ ಕರ್ನಾಟಕದ ಹಿರಿಯರು, ಅಂಡರ್ 23, ಅಂಡರ್ 19 ತಂಡಕ್ಕೆ ನೂತನ ಕೋಚ್ ಗಳನ್ನು ಆಯ್ಕೆ ಮಾಡಿ ಶುಕ್ರವಾರ(ಜೂನ್ 08) ಸಂಜೆ ಪ್ರಕಟಿಸಲಾಗಿದೆ. ಕರ್ನಾಟಕ ರಣಜಿ ತಂಡದ ಕೋಚ್ ಗಳಾಗಿದ್ದ ಪಿವಿ ಶಶಿಕಾಂತ್ ಹಾಗೂ ಜಿಕೆ ಅನಿಲ್ ಕುಮಾರ್ ಬದಲಿಗೆ ಶ್ರೀನಾಥ್ ಅರವಿಂದ್ ಹಾಗೂ ಕರ್ನಾಟಕದ ಮಾಜಿ ಬ್ಯಾಟ್ಸ್ ಮನ್ ಕೆಟಿ ಯರೇಗೌಡ ಅವರನ್ನು ನೇಮಿಸಲಾಗಿದೆ.
ಅಚ್ಚರಿಯ ಕರೆ: ಕೆಎಸ್ ಸಿಎ ಸಂತೋಷ್ ಮೆನನ್ ಹಾಗೂ ಫಜಲ್ ಖಲೀಲ್ ಅವರಿಂದ ಈ ಬಗ್ಗೆ ಕರೆ ಬಂದಾಗ ನನಗೆ ನಂಬುವುದಕ್ಕೆ ಆಗಲಿಲ್ಲ. ಇದು ನಿಜಕ್ಕೂ ಅತ್ಯಂತ ಜವಾಬ್ದಾರಿಯುತ ಹುದ್ದೆ ಹಾಗೂ ನಾನು ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಮೈಖೇಲ್ ತಂಡದೊಡನೆ ಮಾತನಾಡುತ್ತಾ ಅರವಿಂದ್ ಹೇಳಿದರು.
ಕಳೆದ ರಣಜಿ ಸೀಸನ್ ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಸೋತ ತಂಡದಲ್ಲಿ ಎಸ್ ಅರವಿಂದ್ ಇದ್ದರು. ವಿಜಯ್ ಹಜಾರೆ ಟ್ರೋಫಿ ಗೆದ್ದ ಬಳಿಕ (ಫೆಬ್ರವರಿ 27, 2018) ಎಲ್ಲಾ ಬಗೆಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು.
* ಅಂಡರ್ 23 ತಂಡಕ್ಕೆ
- ಎನ್ ಸಿ ಅಯ್ಯಪ್ಪ ಹಾಗೂ ಸುಧೀರ್ ನಾಡಿಗ್ ಕೋಚ್ ಆಗಿ ಆಯ್ಕೆಯಾಗಿದ್ದರೆ, * ಅಂಡರ್ 19 ತಂಡಕ್ಕೆ
- ದೀಪಕ್ ಚೌಗುಲೆ ಹಾಗೂ ಗೋಪಾಲಕೃಷ್ಣ ಚೈತ್ರ ಕೋಚ್ ಗಳಾಗಿ
ಆಯ್ಕೆಯಾಗಿದ್ದಾರೆ.
* ಅಂಡರ್ 16 ತಂಡಕ್ಕೆ
- ಜಿ ನಿಧುವನ್, ಎಂಜಿ ಸುನೀಲ್ ಶಂಕರ್
* ಅಂಡರ್ 14 ತಂಡಕ್ಕೆ
- ರಾಜಶೇಖರ್ ಶಾನ್ ಬಾಲ್, ಜಿ ಮುಕುಂದ್
ಕರ್ನಾಟಕ ತಂಡದ ತನ್ನ ಲಯವನ್ನು ಉಳಿಸಿಕೊಂಡು ಹೆಚ್ಚೆಚ್ಚು ಟ್ರೋಫಿ ಗೆಲ್ಲುವಂತೆ ಮಾಡುವುದು ನನ್ನ ಕನಸು. ಆಟಗಾರರನಾಗಿ ಗೆದ್ದ ಟ್ರೋಫಿಗಳು ಈಗ ಕೋಚ್ ಆಗಿ ಗೆಲ್ಲಿಸಿಕೊಡಬೇಕಿದೆ. ಯರೇಗೌಡ ಸಂಯಮ ಆಟಗಾರರಾಗಿದ್ದರು, ಅವರ ಅನುಭವ, ಯುವ ಆಟಗಾರರಿಗೆ ಲಾಭವಾಗಲಿದೆ ಎಂದು ಅರವಿಂದ್ ಹೇಳಿದರು.