
ಕೊರೊನಾವೈರಸ್ ಎರಡನೇ ಅಲೆಗೆ ಭಾರತ ಅಕ್ಷರಶಃ ನಲುಗಿಹೋಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದ್ದು ಆಮ್ಲಜನಕದ ಕೊರತೆ ಉಂಟಾಗಿ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ದೇಶದಾದ್ಯಂತ ವ್ಯಾಪಿಸಿರುವ ಕೊರೊನಾವೈರಸ್ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಹೊಡೆತವನ್ನು ನೀಡಿದೆ. ಕಳೆದ ಕೆಲ ದಿನಗಳಿಂದ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಎಚ್ಚೆತ್ತ ಬಿಸಿಸಿಐ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿದೆ.
'ನಾನು ಅತಿಯಾಗಿ ಪ್ರೀತಿಸುವಂತಹ ಭಾರತ ದೇಶವನ್ನು ಈ ಪರಿಸ್ಥಿತಿಯಲ್ಲಿ ನೋಡಲು ಹೃದಯಕ್ಕೆ ತುಂಬಾ ನೋವಾಗುತ್ತದೆ, ಈ ಕೊರೊನಾವೈರಸ್ ಹಾವಳಿಯಿಂದ ನೀವು ಹೊರಬರುತ್ತೀರ, ನೀವು ಧೈರ್ಯದಿಂದಿರಬೇಕು, ನಿಮ್ಮ ಒಳ್ಳೆಯತನ ಮತ್ತು ನಿಮ್ಮ ಔದಾರ್ಯತೆ ಇಂತಹ ಕಷ್ಟದ ಸಮಯದಲ್ಲಿ ನಿಮ್ಮನ್ನು ಕಾಯುತ್ತದೆ' ಎಂದು ಕೆವಿನ್ ಪೀಟರ್ಸನ್ ಭಾರತದ ಕುರಿತು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಟ್ವೀಟ್ ಮಾಡುವ ಮೂಲಕ ಕೆವಿನ್ ಪೀಟರ್ಸನ್ ಭಾರತದ ಮೇಲಿನ ತಮ್ಮ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿಕೊಂಡಿದ್ದಾರೆ.