ಕೆಪಿಎಲ್ 2019: ಭರತ್ ಚಿಪ್ಲಿ ಭರ್ಜರಿ ಬ್ಯಾಟಿಂಗ್, ಬುಲ್ಸ್ ಗೆ ಸುಲಭ ಜಯ

ಬೆಂಗಳೂರು, ಆಗಸ್ಟ್ 21: ಆರಂಭಿಕ ಆಟಗಾರ ಮತ್ತು ನಾಯಕ ಭರತ್ ಚಿಪ್ಲಿ (77) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ ವಿರುದ್ಧ ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡ ಯಶಸ್ಸು ಕಾಣುವುದರೊಂದಿಗೆ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಮೊದಲ ಜಯ ಗಳಿಸಿತು.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 141ರನ್ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಬುಲ್ಸ್, ಚಿಪ್ಲಿ ಹಾಗೂ ನವೀನ್ (45) ಬ್ಯಾಟಿಂಗ್ ನೆರವಿನಿಂದ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 5.2 ಓವರ್ ಬಾಕಿ ಇರುವಾಗಲೇ 144 ರನ್ ಗಳಿಸಿ, 8 ವಿಕೆಟ್ ಜಯ ಗಳಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬುಲ್ಸ್ ಪಡೆ ಕೆ.ವಿ. ಸಿದ್ಧಾರ್ಥ್ ಅವರ ಅಜೇಯ 73 ರನ್ ಗಳಿಕೆಯ ನಡುವೆಯೂ ಮಾಜಿ ಚಾಂಪಿಯನ್ನರನ್ನು ಕೇವಲ 140 ರನ್ ಗೆ ಕಟ್ಟಿಹಾಕಿತು.
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಬುಲ್ಸ್ ಪರ ನಾಯಕ ಭರತ್ ಚಿಪ್ಲಿ 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 77 ರನ್ ಸಿಡಿಸಿ ತಂಡದ ಜಯಕ್ಕೆ ಭದ್ರ ತಳಪಾಯ ಹಾಕಿದರು. ಇನ್ನೊಂದೆಡೆ ಜ್ಞಾನೇಶ್ವರ್ ನವೀನ್ (45) ಜವಾಬ್ದಾರಿಯುತ ಆಟ ಪ್ರದರ್ಶಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬಿಜಾಪುರ ಬುಲ್ಸ್ ಇನ್ನೂ 5.2 ಓವರ್ ಬಾಕಿ ಇರುವಾಗಲೇ 144 ರನ್ ಗಳಿಸಿ, 8 ವಿಕೆಟ್ ಅಂತರದಲ್ಲಿ ಜಯ ಗಳಿಸಿತು.
ಸಾಧಾರಣ ಮೊತ್ತಕ್ಕೆ ಮೈಸೂರು ತೃಪ್ತಿ
ಈ ಬಾರಿಯ ಕರ್ನಾಟ ಪ್ರೀಮಿಯರ್ ಲೀಗ್ ನಲ್ಲಿ ಮೈಸೂರು ವಾರಿಯರ್ಸ್ ತಂಡದ ಅದೃಷ್ಟ ಇದುವರೆಗೂ ಚೆನ್ನಾಗಿಲ್ಲ ಎಂದೇ ಹೇಳಬಹುದು. ಏಕೆಂದರೆ ಒಂದೇ ಪಂದ್ಯಕ್ಕೆ ಮಳೆ ಇಡ್ಡಿ, ಇಲ್ಲ ಅಲ್ಪ ಮೊತ್ತಕ್ಕೆ ತೃಪ್ತಿ ಅಥವ ಸೋಲು ಇದು ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಕಂಡ ಸತ್ಯ.
ಬುಧವಾರ ಬಿಜಾಪುರ ಬುಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ತಂಡ 20 ಓವರ್ ಗಳಲ್ಲಿ ಕೇವಲ 140 ರನ್ ಗಳಿಸಿತು. ಕೆವಿ ಸಿದ್ಧಾರ್ಥ ಅಜೇಯ 73 ರನ್ ಗಳಿಸಿ ತಂಡದ ಗೌರವ ಕಾಪಾಡಿದರು. 20 ಓವರ್ ಗಳಲ್ಲಿ ತಂಡ 4 ವಿಕೆಟ್ ನಷ್ಟಕ್ಕೆ ಗಳಿಸಿದ್ದು 140 ರನ್. ಆರಂಭಿಕ ಆಟಗಾರ ಸಿದ್ಧಾರ್ಥ್ 55 ಎಸೆತಗಳನ್ನೆದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಕೊನೆ ಓವರ್ ವರೆಗೂ ತಂಡಕ್ಕೆ ನೆರವಾಗಿ ನಿಂತರು. ಆದರೆ ಇತರ ಬ್ಯಾಟ್ಸ್ಮನ್ ಗಳು ಬುಲ್ಸ್ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೆ ರನ್ ಗಳಿಸಲು ಪರದಾಡಿದರು.
ಆರಂಭಿಕ ಆಟಗಾರ ಡಿ. ನಿಶ್ಚಲ್ ಅವರ ವೈಫಲ್ಯದ ಹೆಜ್ಜೆ ಮುಂದುವರಿದಿದೆ. ಕೇವಲ 1 ರನ್ ಗಳಿಸಿ ಪ್ರತೀಕ್ ಜೈನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಅಮಿತ್ ವರ್ಮಾ ಕೂಡ ಈ ಬಾರಿ ಖಾತೆ ತೆರೆಯದೆ ಪೆವಿಲಿಯನ್ ಹಾದಿ ಹಿಡಿದರು. ನವೀನ್ ಬೌಲಿಂಗ್ ನಲ್ಲಿ ಹಿಟ್ವಿಕೆಟ್ ಗೆ ಬಲಿಯಾಗುವ ಮೂಲಕ ಮೈಸೂರು ತಂಡದ ನಾಯಕ ವಿಕೆಟ್ ಒಪ್ಪಿಸಿದರು.
ಮಂಜೇಶ್ ರೆಡ್ಡಿ 23 ಎಸೆತಗಳಲ್ಲಿ 23 ರನ್ ಗಳಿಸಿದರೆ, ಉತ್ತಮ ಬ್ಯಾಟಿಂಗ್ ಪ್ರರ್ಶಿಸುವ ಸಾಮರ್ಥ್ಯ ಹೊಂದಿರುವ ಶೊಯೇಬ್ ಮ್ಯಾನೇಜರ್ 27 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 28 ರನ್ ಗಳಿಸಿ ಜೈನ್ ಗೆ ವಿಕೆಟ್ ಒಪ್ಪಿಸಿದರು. ಪ್ರತೀಕ್ ಜೈನ್ 16 ರನ್ ಗೆ 2 ವಿಕೆಟ್ ಗಳಿಸಿ ಬಿಜಾಪುರ ಬುಲ್ಸ್ ಪರ ಯಶಸ್ವಿ ಬೌಲರ್ ಎನಿಸಿದರು. ನವೀನ್ ಹಾಗೂ ಕಾಮತ್ ತಲಾ 1 ವಿಕೆಟ್ ಗಳಿಸಿ ಮೈಸೂರು ರನ್ ಗಳಿಕೆಗೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರ್
ಮೈಸೂರು ವಾರಿಯರ್ಸ್: 20 ಓವರ್ಗಳಲ್ಲಿ 140/4 (ಕೆವಿ ಸಿದ್ಧಾರ್ಥ್ 73, ಮಂಜೇಶ್ ರೆಡ್ಡಿ 23, ಶೊಯೇಬ್ ಮ್ಯಾನೇಜರ್ 28; ಪ್ರತೀಕ್ ಜೈನ್ 16ಕ್ಕೆ 2).
ಬಿಜಾಪುರ್ ಬುಲ್ಸ್: 14.4 ಓವರ್ 144/2 (ಎಂಜಿ ನವೀನ್ 45, ಭರತ್ ಚಿಪ್ಲಿ 77; ವೈಶಾಖ್ ವಿಜಯ್ ಕುಮಾರ್ 36ಕ್ಕೆ 2).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications