ಸಿಕಂದರಾಬಾದ್, ನ.11: ಯುವ ಪ್ರತಿಭೆ ಮನೀಶ್ ಪಾಂಡೆ ಅವರ ಅಜೇಯ ಶತಕ ಹಾಗೂ ಅಭಿಮನ್ಯು ಮಿಥುನ್ ಅವರ ಉತ್ತಮ ಬೌಲಿಂಗ್ ನೆರವಿನಿಂದ ತಮಿಳುನಾಡು ವಿರುದ್ಧ ಕರ್ನಾಟಕ 104 ರನ್ ಗಳ ಬೃಹತ್ ಗೆಲುವು ಸಾಧಿಸಿದೆ.ಈ ಗೆಲುವಿನ ಮೂಲಕ ವಿನಯ್ ಪಡೆ ದಕ್ಷಿಣ ವಲಯ (ಸುಬ್ಬಯ್ಯ ಪಿಳ್ಳೈ ಟ್ರೋಫಿ) ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.
ಆಂಧ್ರಪ್ರದೇಶ ಹಾಗೂ ಗೋವಾ ತಂಡಗಳ ಮೇಲೆ ಜಯ ಸಾಧಿಸಿದ್ದ ವಿನಯ್ ಕುಮಾರ್ ಪಡೆ ತಮಿಳುನಾಡನ್ನು ಬಗ್ಗುಬಡಿದಿದೆ. ಮುಂದಿನ ಪಂದ್ಯ ಆಂಧ್ರಪ್ರದೇಶ ಆಡಲಿದೆ.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಪಾಂಡೆ ಅವರು 74 ಎಸೆತಗಳಲ್ಲಿ 101 ರನ್ ಚೆಚ್ಚಿದರು. ಅವರ ಈ ಮೊತ್ತದಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಗಳಿತ್ತು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆಎಲ್ ರಾಹುಲ್ ಅವರು ಪಾಂಡೆಗೆ ಉತ್ತಮ ಸಾಥ್ ನೀಡಿ ಅರ್ಧ ಶತಕ ಗಳಿಸಿದರು.ಕೆಎಲ್ ರಾಹುಲ್ ಅವರು 94 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸ್ ಗಳಿದ್ದ 67 ರನ್ ಬಾರಿಸಿದರು. ಕರ್ನಾಟಕ ನಿಗದಿತ 50 ಓವರ್ ಗಳಲ್ಲಿ 331/6 ಸ್ಕೋರ್ ಮಾಡಿತ್ತು. [ಆಸೀಸ್ ವಿರುದ್ಧ ಟೆಸ್ಟ್, ಕನ್ನಡಿಗ ರಾಹುಲ್ ಆಯ್ಕೆ]
ಕರ್ನಾಟಕ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಿದ್ದ ತಮಿಳುನಾಡು ತಂಡ 43.5 ಓವರ್ ಗಳಲ್ಲಿ 209ರನ್ ಗಳಿಗೆ ಆಲೌಟ್ ಆಯಿತು. ಅಭಿಮನ್ಯು ಮಿಥುನ್ 4/38, ಎಡಗೈ ಸ್ಪಿನ್ನರ್ ಅರ್ಬಾರ್ ಖಾಜಿ 3/14 ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ತಮಿಳುನಾಡು ಪರ ದಿನೇಶ್ ಕಾರ್ತಿಕ್ 63 ಎಸೆತಗಳಲ್ಲಿ 60ರನ್, ಯೋಮಹೇಶ್ 55 ಎಸೆತಗಳಲ್ಲಿ 50ರನ್ ಹಾಗೂ ಆರಂಭಿಕ ಆಟಗಾರ ಮುರಳಿ ವಿಜಯ್ 33 ರನ್ ಗಳಿಸಿದರೆ ಬಾಬಾ ಅಪರಾಜಿತ್ 28ರನ್ ಮಾತ್ರ ಗಳಿಸಿದರು. (ಪಿಟಿಐ)