ಬ್ಯಾಟ್ಸ್ಮನ್ಗಳನ್ನು ಉತ್ತೇಜಿಸುವ ಕುಲದೀಪ್
ಚೆಂಡಿಗೆ ಹೆಚ್ಚಿನ ಫ್ಲೈಟ್ ನೀಡುವುದು ಕುಲದೀಪ್ ತಂತ್ರಗಳಲ್ಲಿ ಒಂದು. ಜತೆಗೆ ಅದನ್ನು ನಿಧಾನಗತಿಯಲ್ಲಿ ಎಸೆಯುವುದರಿಂದ ಬ್ಯಾಟ್ಸ್ಮನ್ಗೆ ಚೆಂಡಿನ ಗತಿ ಗ್ರಹಿಸುವುದು ಕಷ್ಟ.
ಕುಲದೀಪ್ ಅವರ ಮಣಿಕಟ್ಟು ಹೇಗೆ ತಿರುಗುತ್ತದೆ ಎಂಬುದನ್ನು ಅರಿಯಲು ಸಾಧ್ಯವಾಗದಿದ್ದರೆ ವಿಕೆಟ್ ಒಪ್ಪಿಸುವುದು ಖಚಿತ. ಅವರ ಫ್ಲೈಟ್ ಎಸೆತಗಳು ಬ್ಯಾಟ್ಸ್ಮನ್ಗಳನ್ನು ಮುಂದೆ ಬಂದು ಆಡುವಂತೆ ಪ್ರೇರೇಪಿಸುತ್ತವೆ.
ಆ ಕ್ಷಣಕ್ಕೆ ಚೆಂಡು ಪಿಚ್ ಬೀಳುವ ಜಾಗವನ್ನು ಬ್ಯಾಟ್ ತಲುಪದಿದ್ದರೆ ಸ್ಟಂಪ್ ಔಟ್ ಆಗುತ್ತಾರೆ. ಅಥವಾ ಬ್ಯಾಟ್ನ ತಳಭಾಗದ ಮಧ್ಯಕ್ಕೆ ಸರಿಯಾಗಿ ನಿಲುಕದಿದ್ದರೆ ಬೌಂಡರಿಯಲ್ಲಿ ಕ್ಯಾಚ್ ಆಗುತ್ತದೆ. ಸ್ವೀಪ್ ಮಾಡುವುದು ಸಹ ಬ್ಯಾಟ್ಸ್ಮನ್ನ ಕಣ್ಣಿನ ಸೂಕ್ಷ್ಮತೆಯನ್ನು ಅವಲಂಬಿಸಿರುತ್ತದೆ.
ಬೌಲಿಂಗ್ ಶೈಲಿಗೆ ಅನುಗುಣವಾಗಿ ಅಭ್ಯಾಸ
ಹೀಗೆ ಬ್ಯಾಟ್ಸ್ಮನ್ಗಳಿಗೆ ಬಲು ಅಪಾಯಕಾರಿಯಾಗಿರುವ ಕುಲದೀಪ್ ಅವರ ಎಲ್ಲ ಬಗೆಯ ಬೌಲಿಂಗ್ ಶೈಲಿಗಳನ್ನು ಅಭ್ಯಸಿಸಿದ್ದ ಇಂಗ್ಲೆಂಡಿಗರು ಅದಕ್ಕೆ ಪೂರಕವಾಗಿ ಬ್ಯಾಟ್ ಬೀಸಿದರು.
ಮೊದಲ ಮೂರು ಓವರ್ಗಳಲ್ಲಿ ಕುಲದೀಪ್ ಬೌಲಿಂಗ್ನಲ್ಲಿ ಜಾಗ್ರತೆಯಿಂದ ಎದುರಿಸಿದ್ದರು. ಬೈರ್ಸ್ಟೊ ಬ್ಯಾಟಿಂಗ್ಗೆ ಬಂದಾಗ ಮುಂದೆ ಬಂದು ಆಡುವಂತಹ ಎಸೆತಗಳನ್ನು ಕುಲದೀಪ್ ಹಾಕಿದರು. ಆದರೆ, ತಾಳ್ಮೆ ಕಳೆದುಕೊಳ್ಳದ ಬೈರ್ಸ್ಟೊ ಬ್ಯಾಕ್ಫುಟ್ನಲ್ಲಿ ಹೆಚ್ಚಿನ ಎಸೆತಗಳನ್ನು ಆಡಿದರು.
ಇದರಿಂದ ಹತಾಶರಾದ ಕುಲದೀಪ್ ಚೆಂಡು ಪಿಚ್ ಮಾಡುವ ಬಗೆಯನ್ನು ಬದಲಿಸಿದರು. ಇದಕ್ಕಾಗಿ ಕಾದಿದ್ದ ಬೈರ್ಸ್ಟೊ ಸಿಕ್ಸರ್ ಬಾರಿಸಿದರು.
|
ಇಂಗ್ಲೆಂಡ್ ಲೆಕ್ಕಾಚಾರದ ಆಟ
ಕುಲದೀಪ್ ಅವರನ್ನು ಸಮರ್ಥವಾಗಿ ಎದುರಿಸಿದ್ದೇ ಇಂಗ್ಲೆಂಡ್ ಗೆಲುವಿಗೆ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕುಲದೀಪ್ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ ಆಡಿದರು. ಈ ಚೆಂಡನ್ನು ದಂಡಿಸಬೇಕೆ ಅಥವಾ ಬೇಡವೇ ಎಂದು ಜಾಣ್ಮೆಯಿಂದ ತೀರ್ಮಾನಿಸುತ್ತಿದ್ದರು. ಅವರ ಎದುರು ತುಂಬಾ ಲೆಕ್ಕಾಚಾರದಿಂದಲೇ ಆಡಿದರು. ಮೊದಲ ಮೂರು ಓವರ್ಗಳಲ್ಲಿ ಆಕ್ರಮಣಕಾರಿಯಾಗಿ ಆಡಿರಲಿಲ್ಲ ಎಂದು ಮತ್ತೊಬ್ಬ ಸ್ಪಿನ್ನರ್ ಯಜುರ್ವೇಂದ್ರ ಚಾಹಲ್ ಹೇಳಿದರು.
|
ಮೊದಲೇ ಹೇಳಿದ್ದ ಜೋರ್ಡನ್
ಒಂದು ಸೋಲು ನಮ್ಮ ಆತ್ಮವಿಶ್ವಾಸವನ್ನು ನಮ್ಮ ಆತ್ಮವಿಶ್ವಾಸವನ್ನು ಬದಲಿಸುವುದಿಲ್ಲ ಎಂದು ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ಜೋರ್ಡನ್ ಮೊದಲ ಪಂದ್ಯದ ಸೋಲಿನ ಬಳಿಕ ಹೇಳಿದ್ದರು.
ಭಾರತದ ದಾಳಿಗೆ ಪ್ರತಿ ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ಹೇಳಿದ್ದ ಜೋರ್ಡನ್, 'ಮೆರ್ಲಿನ್' ಹೇಗೆ ತಮ್ಮ ಪರವಾಗಿದೆ ಎಂದು ವಿವರಿಸಿದ್ದರು.