ಟಿ20 ವಿಶ್ವಕಪ್ಗೆ ಎಂಎಸ್ ಧೋನಿ ಆಯ್ಕೆ ಒಳ್ಳೆಯ ನಿರ್ಧಾರ: ಕಪಿಲ್ ದೇವ್

ಕೋಲ್ಕತ್ತಾ: ಟೀಮ್ ಇಂಡಿಯಾದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಟಿ20 ವಿಶ್ವಕಪ್ ವೇಳೆ ಟೀಮ್ ಇಂಡಿಯಾಕ್ಕೆ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರನ್ನಾಗಿ ಆರಿಸಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಕ್ಟೋಬರ್-ನವೆಂಬರ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ನಲ್ಲಿ ನಡೆಯಲಿರುವ ವಿಶ್ವಕಪ್ ವೇಳೆ ಭಾರತೀಯ ತಂಡದ ಜೊತೆಗೆ ಧೋನಿ ಕೂಡ ಇರಲಿದ್ದಾರೆ.
ಇತ್ತೀಚೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇತ್ತೀಚೆಗೆ ಮುಂಬರಲಿರುವ ಟಿ20 ವಿಶ್ವಕಪ್ಗಾಗಿ ಭಾರತೀಯ ತಂಡ ಪ್ರಕಟಿಸಿತ್ತು. ಇದೇ ವೇಳೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮೆಂಟರ್ ಆಗಿ ತಂಡದ ಜೊತೆಗಿರಲಿದ್ದಾರೆ ಎಂದು ಘೋಷಿಸಿತ್ತು.
ಭಾರತೀಯ ತಂಡಕ್ಕೆ ಧೋನಿ ಕಮ್ಬ್ಯಾಕ್ ಮಾಡಿರುವ ಬಗ್ಗೆ ಮಾತನಾಡಿರುವ ಕಪಿಲ್, ಕ್ರಿಕೆಟರ್ ಒಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ಸಾಮಾನ್ಯವಾಗಿ ತಂಡಕ್ಕೆ ಮತ್ತೆ ಕೋಚಿಂಗ್ ಅಥವಾ ಬೆಂಬಲ ಸಿಬ್ಬಂದಿಯಾಗಿ ಸೇರಿಕೊಳ್ಳುತ್ತಾರೆ. ಆದರೆ ಧೋನಿಯದ್ದು ವಿಶೇಷ ಪ್ರಕರಣವಾಗಿದೆ ಎಂದಿದ್ದಾರೆ.
ಕಳೆದ ವರ್ಷ ಅಂದರೆ 2020ರಲ್ಲಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆಗಸ್ಟ್ 15ರಂದು ಧೋನಿ ಮತ್ತು ಟೀಮ್ ಇಂಡಿಯಾದ ಆಲ್ ರೌಂಡರ್ ಆಗಿದ್ದ ಸುರೇಶ್ ರೈನಾ ಇಬ್ಬರೂ ಏಕಕಾಲಕ್ಕೆ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದರು. ಈಗ ಇಬ್ಬರೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ.
"ವಿಶ್ವಕಪ್ಗೆ ಮೆಂಟರ್ ಆಗಿ ಭಾರತೀಯ ತಂಡಕ್ಕೆ ಆರಿಸಿರುವುದು ಒಳ್ಳೆಯ ನಿರ್ಧಾರ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕ್ರಿಕೆಟರ್ ಕನಿಷ್ಠ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಕೋಚಿಂಗ್ ವಿಭಾಗಕ್ಕೆ ಬರಬೇಕೆಂದು ನಾನು ಹೇಳುತ್ತಿರುತ್ತೇನೆ. ಆದರೆ ಧೋನಿ ವಿಚಾರದಲ್ಲಿ ಇದು ವಿಶೇಷ ಪ್ರಕರಣವಾಗಿದೆ. ವಿಶ್ವಕಪ್ ಸಮೀಪದಲ್ಲಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಲ್ಲೂ ಈ ಹೊತ್ತಿನಲ್ಲಿ ಎಂದಿನ ಕೋಚ್ ರವಿ ಶಾಸ್ತ್ರಿ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿರುವುದರಿಂದ ಇದೊಂದು ಸ್ವಾಗತಾರ್ಹ ನಿರ್ಧಾರ," ಎಂದು ಕಪಿಲ್ ಹೇಳಿದ್ದಾರೆ.
ಐಸಿಸಿ ಟ್ರೋಫಿಗಳು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದ ನಾಯಕ
ಎಂಎಸ್ ಧೋನಿ ಟೀಮ್ ಇಂಡಿಯಾಕ್ಕೆ ನಾಯಕರಾಗಿದ್ದಾಗ ಭಾರತ ಬಹುತೇಕ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರೋಫಿಗಳನ್ನು ಗೆದ್ದಿದೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೀಗೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಭಾರತ ಗೆದ್ದಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕ ಎಂಬ ಹಿರಿಮೆ ಮಾಹಿಗಿದೆ. ಅಷ್ಟೇ ಅಲ್ಲ, ಧೋನಿ ನಾಯಕತ್ವದಡಿಯಲ್ಲಿ ಅನೇಕ ಕ್ರಿಕೆಟಿಗರು ಬೆಳೆದು ನಿಂತಿದ್ದಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಧೋನಿ ನಾಯಕರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಈ ಎಲ್ಲಾ ಕಾರಣಕ್ಕಾಗಿ ಈ ವಿಶ್ವಕಪ್ ವೇಳೆ ಬಿಸಿಸಿಐ ಧೋನಿ ಸಹಾಯವನ್ನು ತಂಡದಲ್ಲಿ ಪರಿಗಣಿಸಿದೆ. ಧೋನಿ ತಂಡ ಸೇರಿಕೊಂಡಿರುವುದರಿಂದ ಧೋನಿಯ ಕ್ರಿಕೆಟ್ ಜ್ಞಾನದ ಬೆಂಬಲ ತಂಡಕ್ಕೆ ಲಭಿಸುವುದರಲ್ಲಿ ಅನುಮಾನವಿಲ್ಲ.
ಅಕ್ಟೋಬರ್ 17ರಂದು ಗ್ರೂಪ್ 'ಬಿ'ಯ ರೌಂಡ್ 1ರಲ್ಲಿ ಆತಿಥೇಯ ಓಮನ್ ಮತ್ತು ಪಪುವಾ ನ್ಯೂಗಿನಿಯಾ ದೇಶಗಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ನವೆಂಬರ್ 14ರಂದು ಕೊನೆಗೊಳ್ಳಲಿದೆ. ಗ್ರೂಪ್ ಬಿಯಲ್ಲಿ ಪಪುವಾ ನ್ಯೂಗಿನಿಯಾ, ಓಮನ್ ತಂಡಗಳಿವೆ. ಗ್ರೂಪ್ 'ಬಿ'ಯಲ್ಲಿ ಇನ್ನುಳಿದ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ಸಂಜೆ ಕಾದಾಡಲಿವೆ. ಗ್ರೂಪ್ 'ಎ'ಯಲ್ಲಿರುವ ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಂದಿನ ದಿನ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿವೆ. ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ. ಗ್ರೂಪ್-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಎರಡು ಕ್ವಾಲಿಫೈಯರ್ (A1, B2) ತಂಡಗಳಿದ್ದರೆ, ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಎರಡು ಕ್ವಾಲಿಫೈಯರ್ ತಂಡಗಳು (A2, B1) ತಂಡಗಳು ಇವೆ. ಫೈನಲ್ ಪಂದ್ಯ ನವೆಂಬರ್ 14ರಂದು ದುಬೈನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications