
ಮುಂಬೈ, ಡಿಸೆಂಬರ್ 12: ವಿವಾದಕ್ಕೆ ಸಿಲುಕಿ ನವೆಂಬರ್ 30ರಂದು ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದ ರಮೇಶ್ ಪೊವಾರ್ ಅವರು ಕೋಚ್ ಸ್ಥಾನಕ್ಕೆ ಮರು ಅರ್ಜಿ ಸಲ್ಲಿಸಿದ್ದಾರೆ. ಟಿ20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ರಮೇಶ್ ಪರವಾಗಿ ಬ್ಯಾಟಿಂಗ್ ಮಾಡಿ, ಪೊವಾರ್ ಮರುಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ 40ರ ಹರೆಯದ ರಮೇಶ್ ಪಿಟಿಐಯೊಂದಿಗೆ ಬುಧವಾರ (ಡಿಸೆಂಬರ್ 12) ಮಾತನಾಡಿ, 'ಹೌದು, ನಾನು ಕೋಚ್ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಿದ್ದೇನೆ. ಯಾಕೆಂದರೆ ಅರ್ಜಿ ಸಲ್ಲಿಸುವಂತೆ ನನಗೆ ಸ್ಮೃತಿ ಮಂಧಾನ ಮತ್ತು ಹರ್ಮನ್ ಪ್ರೀತ್ ಒತ್ತಾಯಿಸಿದರು. ಅವರ ವಿನಂತಿಯನ್ನು ನನ್ನಿಂದ ತಳ್ಳಿ ಹಾಕಲಾಗಲಿಲ್ಲ' ಎಂದರು.
ಕಳೆದ ತಿಂಗಳು ಮಹಿಳಾ ವಿಶ್ವ ಟಿ20 ಸೆಮಿಫೈನಲ್ನಲ್ಲಿ ಭಾರತದ ವನಿತೆಯರು ಇಂಗ್ಲೆಂಡ್ ಎದುರು ಹೀನಾಯವಾಗಿ ಸೋತಿದ್ದರಿಂದ ಪೊವಾರ್, ವಿವಾದಕ್ಕೆ ತುತ್ತಾಗಿದ್ದರು. ಕಾರಣ ಸೋತ ಅಂದಿನ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ಗೆ ಆಡಲು ಅವಕಾಶ ನೀಡಿರಲಿಲ್ಲ.
ಪಂದ್ಯದಲ್ಲಿ ಸೋತ ಬಳಿಕವೂ ಮಿಥಾಲಿಯನ್ನು ಆಡಿಸದ್ದನ್ನು ಹರ್ಮನ್ಪ್ರೀತ್ ಕೌರ್ ಮತ್ತು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಸದಸ್ಯೆ ಡಯಾನಾ ಎಡುಲ್ಜಿ ಸಮರ್ಥಿಸಿಕೊಂಡಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ, ಕ್ರಿಕೆಟ್ ಪರಿಣಿತರ ಕೆಂಗಣ್ಣಿಗೆ ಗುರಿಯಾಗಿತ್ತು. ವಿವಾದ ಜೋರಾದ ನಂತರ ಬಿಸಿಸಿಐ, ಕೋಚ್ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಲು ತಿಳಿಸಿತ್ತು.
ಈಗಾಗಲೇ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಇನ್ನೊಬ್ಬ ಸದಸ್ಯ ವಿನೋದ್ ರೈ ಮತ್ತು ಡಯಾನಾ ನಡುವೆ ವಿವಾದಕ್ಕೆ ಸಂಬಂಧಿಸಿ ವಾಕ್ಸಮರ ನಡೆಯುತ್ತಿದೆ. ಈ ನಡುವೆ ಎಡುಲ್ಜಿ ಮತ್ತು ಕೌರ್ ಹಿಂದಿನ ರಮೇಶ್ ಅವರೇ ಮತ್ತೆ ಕೋಚ್ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಇದು ನಾಳೆ ಮತ್ತೆ ಕೆಸರೆರೆಚಾಟ ಮುಂದುವರೆಯುವ ಮುನ್ಸೂಚನೆ ನೀಡಿದೆ.