ಕೋಲ್ಕತ್ತ, ಡಿಸೆಂಬರ್ 21: ಕ್ರಿಕೆಟ್ ಕಾಶಿ ಕೊಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ಕರ್ನಾಟಕ-ವಿದರ್ಭ ತಂಡಗಳ ನಡುವೆ ನಡೆದ ರಣಜಿ ಸೆಮಿಫೈನಲ್ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕ ಸೋಲು ಕಂಡಿದೆ. ಆ ಮೂಲಕ ರಣಜಿ ಟ್ರೋಫಿ ಫೈನಲ್ ಪ್ರವೇಸಿಸುವ ತನ್ನ ಕನಸನ್ನು ಕೈಚೆಲ್ಲಿದೆ.
ರಣಜಿː ಮಂದ ಬೆಳಕಿನ ಕಾಟದ ನಡುವೆ ಗೆಲ್ಲುವುದೇ ಕರ್ನಾಟಕ
ಮೊದಲ ದಿನದಿಂದಲೂ ಸಮಬಲದ ಹೋರಾಟ ನೀಡಿದ ಎರಡೂ ತಂಡಗಳು ಕ್ರಿಕೆಟ್ ಪ್ರಿಯರಿಗೆ ಭಾರಿ ಮನೊರಂಜನೆ ಒದಗಿಸಿದವು, ಆದರೆ ಕೊನೆಯ ದಿನವಾದ ಇಂದು ಕೇವಲ 5 ರನ್ ಗಳ ಅಂತರದಲ್ಲಿ ಕರ್ನಾಟಕ ಸೋಲೊಪ್ಪಬೇಕಾಯಿತು.
ನಾಲ್ಕನೇ ದಿನದಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದ್ದ ಕರ್ನಾಟಕ ಇಂದು ಗೆಲ್ಲುವ ಉಮೇದಿನಿಂದ ತನ್ನ ಇನ್ನಂಗ್ಸ್ ಪ್ರಾರಂಭಿಸಿತು. ಕೊನೆಯ ದಿನ ಗೆಲುವು ಪಡೆಯಲು 87 ರನ್ ಗಳಿಸಬೇಕಿತ್ತು, ಕಷ್ಟಪಟ್ಟು 82 ರನ್ ಗಳಿಸಿದ ಕರ್ನಾಟಕ ತಂಡ ಗೆಲುವಿನ ಹೊಸಿಲಿಗೆ ಬಂದು ಜಯಮಾಲೆಯಿಂದ ವಂಚಿತವಾಯಿತು.
ಮೊದಲ ದಿನ ಬ್ಯಾಟಿಂಗ್ ಮಾಡಿದ್ದ ವಿದರ್ಭ ತಂಡ ಕರ್ನಾಟಕದ ಅಭಿಮನ್ಯಯು ಮಿಥುನ್ ಅವರ ಅತ್ಯುತ್ತಮ ದಾಳಿಯಿಂದ ಕಂಗೆಟ್ಟು 185ರನ್ ಗಳಿಗೆ ಆಲ್ ಔಟ್ ಆಗಿತ್ತು ಆ ನಂತರ ಸ್ಕ್ರೀಸ್ಗಿಳಿದ ಕರ್ನಾಟಕ ಬ್ಯಾಟ್ಸ್ಮನ್ಗಳು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 301 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಕರ್ನಾಟಕ ಬೃಹತ್ ಮೊತ್ತ ಸಂಪಾದಿಸಲು ನೆರವಾದ ಕರುಣ್ ನಾಯರ್ ಆಕರ್ಷಕ 153 ರನ್ ಭಾರಿಸಿದ್ದರು. ಗೌತಮ್ ಅವರು 73 ರನ್ ಗಳಿಸಿ ಕರುಣ್ ನಾಯರ್ಗೆ ಬೆಂಬಲ ನೀಡಿದರು.
ಆನಂತರ ಬ್ಯಾಟಿಂಗ್ ಮಾಡಿದ ವಿದರ್ಭ ಬೌನ್ಸ್ ಬ್ಯಾಕ್ ಮಾಡಿ 313ರನ್ ಗಳಿಸಿ ಕರ್ನಾಟಕಕ್ಕೆ 198 ರನ್ಗಳ ಗುರಿ ನೀಡಿತು. ವೇಗಿಗಳಿಗೆ ನೆರವು ನೀಡುತ್ತಿದ್ದ ಪಿಚ್ನಲ್ಲಿ ದಿಟ್ಟ ಹೋರಾಟವನ್ನೇ ನಡೆಸಿದ ಕರ್ನಾಟಕ ಬ್ಯಾಟ್ಸ್ಮನ್ಗಳು ಕೇವಲ 5 ರನ್ ಗಳ ಅಂತರದಲ್ಲಿ ಸೋಲುಂಡರು.
ಈ ಋತುವಿನಲ್ಲಿ ಒಂದೂ ಪಂದ್ಯ ಸೋತಿರದಿದ್ದ ಕರ್ನಾಟಕ ತಂಡ ಸೆಮಿಫೈನಲ್ ಪಂದ್ಯದಲ್ಲಿ ಸೋಲುಂಡು ಸರಣಿಯಿಂದ ಹೊರ ಬಿದ್ದಿತು. ವಿದರ್ಭ ಪರವಾಗಿ ವೇಗಿಗಳಾದ ರಜನೀಶ್ ಗುರುಬಾನಿ ಮತ್ತು ಉಮೇಶ್ ಯಾದವ್ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿ ಕರ್ನಾಟವನ್ನು ಸೋಲಿಗೆ ತಳ್ಳಿದರು. ಒಟ್ಟು 12 ವಿಕೆಟ್ ಪಡೆದ ರಜನೀಶ್ ಗುರುಬಾನಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಮೊದಲ ಬಾರಿಗೆ ರಣಜಿ ಫೈನಲ್ ಪ್ರವೇಶಿಸಿರುವ ವಿದರ್ಭ ತಂಡವು ಪೈನಲ್ನಲ್ಲಿ ಪ್ರಭಲ ಎದುರಾಳಿ ದೆಹಲಿ ತಂಡವನ್ನು ಎದುರಿಸಲಿದೆ.
ಬ್ಯಾಟಿಂಗ್ ಮತ್ತು ಭೌಲಿಂಗ್ ಎರಡೂ ವಿಭಾಗದಲ್ಲಿ ಇತ್ತಂಡಗಳ ಆಟಗಾರರ ಪ್ರತಿಭೆಗೆ ವೇದಿಕೆ ಒದಗಿಸಿದ ಈ ಟೆಸ್ಟ್ ಪಂದ್ಯ ಪರಿಪೂರ್ಣ ಪ್ಯಾಕೇಜ್ ರೀತಿ ಇತ್ತು, ಯಾವ ತಂಡವೂ ಈ ಪಂದ್ಯದಲ್ಲಿ ಸೋತಿಲ್ಲ ಆದರೆ ಗೆದ್ದಿದ್ದು ಟೆಸ್ಟ್ ಕ್ರಿಕೆಟ್ ಮಾತ್ರ ಎಂಬ ವೀಕ್ಷಕ ವಿವರಣೆಗಾರ ಮಾತು ಪಂದ್ಯದ ರೋಚಕತೆಗೆ ಹಾಗೂ ಎರಡೂ ತಂಡಗಳ ಆಟಗಾರರ ಪ್ರದರ್ಶನ ಮಟ್ಟಕ್ಕೆ ಹಿಡಿದ ಕನ್ನಡಿ.