ಕೊರೋನಾವೈರಸ್ ಕಾರಣದಿಂದಾಗಿ ಕಳೆದೆರಡು ವರ್ಷಗಳಲ್ಲಿ ನಡೆಯದೇ ಇದ್ದ ಜನಪ್ರಿಯ ದೇಸಿ ಕ್ರಿಕೆಟ್ ಟೂರ್ನಮೆಂಟ್ ರಣಜಿ ಟ್ರೋಫಿ ಇದೀಗ ಮರಳಿ ಬಂದಿದೆ. ಭಾರತದ ಯುವ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಇದಾಗಿದ್ದು, ಟೀಮ್ ಇಂಡಿಯಾದಲ್ಲಿ ಕಳಪೆ ಪ್ರದರ್ಶನ ನೀಡಿ ಹೊರಬಿದ್ದಿರುವ ಹಿರಿಯ ಕ್ರಿಕೆಟಿಗರಿಗೂ ಕೂಡ ರಣಜಿ ಟ್ರೋಫಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಹೀಗೆ ಸಾಕಷ್ಟು ಮಹತ್ವವನ್ನು ಹೊಂದಿರುವ ರಣಜಿ ಟ್ರೋಫಿ 2022ನೇ ಸಾಲಿನ ಟೂರ್ನಿ ಇಂದಿನಿಂದ ( ಫೆಬ್ರವರಿ 17 ) ಆರಂಭವಾಗುತ್ತಿದ್ದು, ಮೊದಲನೇ ದಿನ ಆರಂಭವಾಗಿರುವ 19 ಪಂದ್ಯಗಳ ಪೈಕಿ ಮುಂಬೈ ಮತ್ತು ಸೌರಾಷ್ಟ್ರ ತಂಡಗಳು ಪಂದ್ಯವೊಂದರಲ್ಲಿ ಸೆಣಸಾಟ ನಡೆಸುತ್ತಿವೆ.
ಐಪಿಎಲ್ 2022: ಕೊಹ್ಲಿ ನಂತರ ಆರ್ಸಿಬಿ ನಾಯಕನಾಗಲು ರೇಸ್ನಲ್ಲಿದ್ದಾರೆ ಈ ಮೂವರು ಆಟಗಾರರು
ಅಹಮದಾಬಾದ್ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರರು ಎನಿಸಿಕೊಂಡಿರುವ ಅಜಿಂಕ್ಯ ರಹಾನೆ ಮುಂಬೈ ತಂಡದ ಪರ ಕಣಕ್ಕಿಳಿದಿದ್ದರೆ, ಸೌರಾಷ್ಟ್ರ ತಂಡದ ಪರ ಚೇತೇಶ್ವರ್ ಪೂಜಾರ ಕಣಕ್ಕಿಳಿದಿದ್ದಾರೆ. ಈ ಇಬ್ಬರಿಗೂ ಸಹ ಟೀಮ್ ಇಂಡಿಯಾ ಆಯ್ಕೆಗಾರರು ಷರತ್ತು ವಿಧಿಸಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಬೇಕೆಂದರೆ ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿಕೊಳ್ಳಲೇಬೇಕಾಗಿದೆ. ಒಂದುವೇಳೆ ಈ ರಣಜಿ ಟ್ರೋಫಿಯಲ್ಲಿಯೂ ಈ ಇಬ್ಬರು ಆಟಗಾರರು ವಿಫಲರಾದರೆ ಟೀಮ್ ಇಂಡಿಯಾ ಬಾಗಿಲು ಇಬ್ಬರಿಗೂ ಶಾಶ್ವತವಾಗಿ ಮುಚ್ಚಿದ ಹಾಗೆ ಎಂದು ಹೇಳಬಹುದು. ಹೌದು, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಳೆದೆರಡು ವರ್ಷಗಳಿಂದ ಸಾಲು ಸಾಲು ಕಳಪೆ ಪ್ರದರ್ಶನ ನೀಡುತ್ತಾ ಬಂದಿರುವ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರಗೆ ಈ ರಣಜಿ ಟ್ರೋಫಿ ಮಾಡು ಇಲ್ಲವೇ ಮಡಿ ಟ್ರೋಫಿಯಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.
'ನಾನು ಹೇಳುತ್ತಿದ್ದೇನೆ ರಿವ್ಯೂ ತಗೋ' ಎಂದ ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿತ್ತು
ಹೀಗೆ ಆಯ್ಕೆಗಾರರು ನೀಡಿದ್ದ ಎಚ್ಚರಿಕೆಯೊಂದಿಗೆ ಇದೀಗ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಎದುರಾಳಿಗಳಾಗಿ ಕಣಕ್ಕಿಳಿದಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ಅಜಿಂಕ್ಯ ರಹಾನೆ ಶತಕ ಬಾರಿಸಿದ್ದಾರೆ. ಹೌದು, 212 ಎಸೆತಗಳಿಗೆ 100 ರನ್ ಪೂರೈಸಿದ ಅಜಿಂಕ್ಯ ರಹಾನೆ 14 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ತಮ್ಮ ಆಟ ಮುಂದುವರೆಸಿದ್ದಾರೆ. ಈ ಮೂಲಕ ಮೊದಲ ಪಂದ್ಯದಲ್ಲಿಯೇ ಆಯ್ಕೆಗಾರರು ಹಾಕಿದ್ದ ಷರತ್ತಿಗೆ ತಕ್ಕಂತೆ ಬ್ಯಾಟ್ ಬೀಸಿರುವ ಅಜಿಂಕ್ಯ ರಹಾನೆ ಒಂದು ವರ್ಷದ ಬಳಿಕ ಶತಕ ಸಿಡಿಸಿ ದೊಡ್ಡ ಮಟ್ಟದಲ್ಲಿಯೇ ಕಮ್ ಬ್ಯಾಕ್ ಮಾಡಿದ್ದಾರೆ.
ಇನ್ನು ಮುಂಬೈ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ನಾಯಕ ಪೃಥ್ವಿ ಶಾ 145 ಎಸೆತಗಳಿಗೆ 82 ರನ್ ಗಳಿಸಿ ಔಟ್ ಆದರೆ, ಆಕರ್ಷಿತ್ ಗೊಮೆಲ್ 8 ರನ್ ಮತ್ತು ಸಚಿನ್ ಯಾದವ್ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಶತಕ ಬಾರಿಸಿ ತಮ್ಮ ಆಟವನ್ನು ಮುಂದುವರಿಸಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಜಿಂಕ್ಯ ರಹಾನೆ ಜೊತೆ ಕೈಜೋಡಿಸಿರುವ ಸರ್ಫರಾಜ್ ಖಾನ್ ಕೂಡ ಶತಕದ ಸನಿಹದಲ್ಲಿದ್ದಾರೆ. ಇನ್ನು 75 ಓವರ್ ವೇಳೆಗೆ ಮುಂಬೈ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ. ಹೀಗೆ ಮುಂಬೈ ಪರ ಕಣಕ್ಕಿಳಿದ ಅಜಿಂಕ್ಯ ರಹಾನೆ ಶತಕ ಸಿಡಿಸಿ ಕಮ್ ಬ್ಯಾಕ್ ಮಾಡಿದ್ದರೆ, ಸೌರಾಷ್ಟ್ರ ಪರ ಇದೇ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಚೇತೇಶ್ವರ್ ಪೂಜಾರ ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.