
ಬೆಂಗಳೂರು, ಜನವರಿ 28: ಸೌರಾಷ್ಟ್ರದ ದ್ವಿತೀಯ ಇನ್ನಿಂಗ್ಸ್ನಲ್ಲಿ ಚೇತೇಶ್ವರ್ ಪೂಜಾರ ಮತ್ತು ಶೆಲ್ಡನ್ ಜಾಕ್ಸನ್ ಆಕರ್ಷಕ ಶತಕ, ರಣಜಿ ಟ್ರೋಫಿ ಫೈನಲ್ಗೇರುವ ಆತಿಥೇಯ ಕರ್ನಾಟಕದ ಕನಸನ್ನು ಭಗ್ನಗೊಳಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ 2ನೇ ಸೆಮಿಫೈನಲ್ನಲ್ಲಿ ಸೌರಾಷ್ಟ್ರ 5 ವಿಕೆಟ್ ಗೆಲುವನ್ನಾಚರಿಸಿ ಪ್ರಶಸ್ತಿ ಸುತ್ತಿಗೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಶ್ರೇಯಸ್ ಗೋಪಾಲ್ 87, ಶ್ರೀನಿವಾಸ್ ಶರತ್ 83 ರನ್ ಕೊಡುಗೆಯೊಂದಿಗೆ 100.3 ಓವರ್ಗೆ 275 ರನ್ ಕಲೆ ಹಾಕಿತು. ಸೌರಾಷ್ಟ್ರ 236 ರನ್ನೊಂದಿಗೆ 39 ರನ್ ಹಿನ್ನಡೆ ಅನುಭವಿಸಿತು.
ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಕರ್ನಾಟಕ ಗರಿಷ್ಠ ರನ್ ಪೇರಿಸುವಲ್ಲಿ ಎಡವಿತು. ರಾಜ್ಯ ತಂಡ 239 ರನ್ಗೆ ಇನ್ನಿಂಗ್ಸ್ ಮುಗಿಸಿತು. ನಿರ್ಣಾಯಕ ಇನ್ನಿಂಗ್ಸ್ನಲ್ಲಿ ಪ್ರವಾಸಿ ಸೌರಾಷ್ಟ್ರದ ಬೆಂಬಲಕ್ಕೆ ನಿಂತ ಅನುಭವಿ ಆಟಗಾರ ಪೂಜಾರ 131, ಜಾಕ್ಸನ್ 100 ರನ್ ಸೇರಿಸಿದರು. ಸೌರಾಷ್ಟ್ರ 91.4 ಓವರ್ಗೆ 5 ವಿಕೆಟ್ ಕಳೆದು 279 ರನ್ ಕಲೆ ಹಾಕುವುದರೊಂದಿಗೆ ಗೆಲುವನ್ನಾಚರಿಸಿತು.
ಬೌಲಿಂಗ್ ವಿಭಾಗದಲ್ಲಿ ಕರ್ನಾಟಕ ಪರ ರೋನಿತ್ ಮೋರೆ 6+7, ಅಭಿಮನ್ಯು ಮಿಥುನ್ 3+4 ವಿಕೆಟ್ಗಳೊಂದಿಗೆ ಮಿಂಚಿದರೆ, ಸೌರಾಷ್ಟ್ರ ಪರ ನಾಯಕ ಜಯದೇವ್ ಉನಾದ್ಕತ್ 4+3, ಧರ್ಮೇಂದ್ರ ಸಿನ್ ಜಡೇಜಾ 2+5 ವಿಕೆಟ್ ಉರುಳಿಸಿ ಪಾರಮ್ಯ ಮೆರೆದರು.
ಉತ್ತಮ ಬ್ಯಾಟಿಂಗ್ಗಾಗಿ ಚೇತೇಶ್ವರ ಪೂಜಾರ ಪಂದ್ಯ ಶ್ರೇಷ್ಠರೆನಿಸಿದರು. ಕೇರಳದ ವಯನಾಡ್ನ ಕೃಷ್ಣನಗರಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಕೇರಳವನ್ನು 11 ರನ್ನಿಂದ ಸೋಲಿಸಿದ ವಿದರ್ಭ ತಂಡ ಸತತ ಎರಡನೇ ಬಾರಿಗೆ ಫೈನಲ್ಗೆ ಪ್ರವೇಶಿಸಿದೆ.