
ಮೂರು ಹಂತಗಳ ಕಠಿಣ ಲಾಕ್ಡೌನ್ನ ನಂತರ ದೇಶದಲ್ಲಿ ನಾಲ್ಕನೇ ಹಂತದಲ್ಲಿ ಸಾಕಷ್ಟು ಸಡಿಲಿಕೆ ಮಾಡಲಾಗಿದೆ. ಇದರಲ್ಲಿ ಕ್ರೀಡಾ ವಿಭಾಗವನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶವನ್ನು ನೀಡಲಾಗಿತ್ತು. ಅದಕ್ಕೆ ಒಂದಷ್ಟು ಶರತ್ತುಗಳನ್ನು ವಿಧಿಸಲಾಗಿದೆ.
ಆದರೆ ನಾಲ್ಕನೇ ಹಂತದ ಲಾಕ್ಡೌನ್ನಲ್ಲಿ ನಿಯಮ ಸಡಿಲಿಕೆ ಮಾಡಲಾಗಿದ್ದರೂ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಸೇರಿದಂತೆ ಕೆಲ ಆಟಗಾರರಿಗೆ ನಿರಾಸೆ ಮುಂದುವರಿದಿದೆ. ನಾಲ್ಕನೇ ಹಂತದಲ್ಲೂ ಈ ಆಟಗಾರರು ಮೈದಾನಕ್ಕೆ ಅಭ್ಯಾಸಕ್ಕೆ ಇಳಿಯುವಂತಿಲ್ಲ.
ಹೌದು, ಕೊರೊನಾ ವೈರಸ್ನ ಕಾರಣದಿಂದಾಗಿ ಮಹಾರಾಷ್ಟ್ರದ ರೆಡ್ ಝೋನ್ ಪ್ರದೇಶಗಳಲ್ಲಿ ಕಠಿಣ ಲಾಕ್ಡೌನ್ ಮುಂದುವರಿಯಲಿದೆ. ಹೀಗಾಗಿ ಮುಂಬೈನಲ್ಲಿ ತಮ್ಮ ನಿವಾಸದಲ್ಲಿರುವ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಇನ್ನೂ ಒಂದಷ್ಟು ಸಮಯಗಳ ಕಾಲ ಕಾಯಲೇ ಬೇಕಿದೆ.
ಮುಂಬೈನಲ್ಲಿ ಕ್ರಿಕೆಟ್ ಅಭ್ಯಾಸವನ್ನು ನಡೆಸಲು ಮುಂಬೈ ಕ್ರಿಕೆಟ್ ಅಸೊಸಿಯೇಶನ್ ಮೂರು ವ್ಯವಸ್ಥೆಗಳನ್ನು ಹೊಂದಿದೆ. ವಾಂಖೆಡೆ ಸ್ಟೇಡಿಯಮ್, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ಸಚಿನ್ ತೆಂಡೂಲ್ಕರ್ ಜಿಮ್ಖಾನಾ. ಆದರೆ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಮೂರು ಕೇಂದ್ರಗಳು ಕೂಡ ತೆರೆಯುವ ಅವಕಾಶವನ್ನು ಪಡೆದುಕೊಂಡಿಲ್ಲ.
ನಾಲ್ಕನೇ ಲಾಕ್ಡೌನ್ನಲ್ಲಿ ಕೇಂದ್ರ ಗೃಹ ಇಲಾಖೆ ಕ್ರೀಡಾ ಅಭ್ಯಾಸಗಳನ್ನು ನಡೆಸಲು ಅವಕಾಶವನ್ನು ನೀಡಿತ್ತು. ಯಾವುದೇ ಪ್ರೇಕ್ಷಕರು ಹಾಜರಾಗದೆ ಕಟ್ಟುನಿಟ್ಟಿನ ಕ್ರಮಗಳಲ್ಲಿ ಅಭ್ಯಾಸವನ್ನು ನಡೆಸಬಹುದು ಎಂದು ತಿಳಿಸಿತ್ತು. ನಾಲ್ಕನೇ ಹಂತದ ಲಾಕ್ಡೌನ್ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ.