ಲಂಡನ್, ಸೆಪ್ಟೆಂಬರ್ 2: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಟೀಮ್ ಇಂಡಿಯಾ ತೆಗೆದುಕೊಂಡ ಒಂದು ನಿರ್ಧಾರದ ವಿರುದ್ಧ ಸಂಜಯ್ ಮಂಜ್ರೇಕರ್ ಕಿಡಿ ಕಾರಿದ್ದಾರೆ. ಭಾರತದ ಬ್ಯಾಟಿಂಗ್ ಸಂದರ್ಭದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾರನ್ನು ಟೀಮ್ ಇಂಡಿಯಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತು. ಟೀಮ್ ಇಂಡಿಯಾದ ಈ ನಿರ್ಧಾರಕ್ಕೆ ಸಂಜಯ್ ಮಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದು ತಂಡದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಿಂದಲೇ ಕುಸಿತ ಕಾಣಲು ಆರಂಭಿಸಿತ್ತು. 9ನೇ ಓವರ್ನಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭವಾದ ವಿಕೆಟ್ ಪತನ ನಂತರ ಮುಂದುವರಿದಿತ್ತು. ತಂಡ ಒಂದರ ಹಿಂದೊಂದರಂತೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತ್ತು. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ಚೇತೇಶ್ವರ್ ಪೂಜಾರ ತಂಡದ ಮೊತ್ತ 39 ರನ್ಗಳಾಗುವಷ್ಟರಲ್ಲಿ ಫೆವಿಲಿಯನ್ ಸೇರಿಕೊಂಡಿದ್ದರು.
ಟೀಮ್ ಇಂಡಿಯಾದ ಈ ಕುಸಿತದ ನಂತರ ಕ್ರೀಸ್ನಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಲು ಆಲ್ರೌಂಡರ್ ರವೀಂದ್ರ ಜಡೇಜಾ ಆಗಮಿಸಿದರು. ಅಜಿಂಕ್ಯಾ ರಹಾನೆ ಹಾಗೂ ರಿಷಭ್ ಪಂತ್ ಕ್ರಮಾಂಕಕ್ಕಿಂತಲೂ ಮುನ್ನವೇ ಜಡೇಜಾ ಬ್ಯಾಟಿಂಗ್ಗೆ ಇಳಿದಿದ್ದರು ರವೀಂದ್ರ ಜಡೇಜಾ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಈ ನಿರ್ಧಾರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರಿಗೆ ಅಚ್ಚರಿ ಮೂಡಿಸಿತ್ತು.
ಟೀಮ್ ಇಂಡಿಯಾದ ಈ ನಡೆಗೆ ಸಂಜಯ್ ಮಂಜ್ರೇಕರ್ ಟೀಕೆಯನ್ನು ವ್ಯಕ್ತಪಡಿಸಿದರು. ಇದನ್ನು ಮಂಜ್ರೇಕರ್ ಊಹಿಸಲು ಅಸಾಧ್ಯವಾದ ಯೋಚನೆಯಿದು ಎಂದಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ನಿರ್ಧಾರವನ್ನು ರಣತಂತ್ರದ ನಡೆ ಎಂದು ಬಣ್ಣಿಸಿದರು.
"ಭಾರತ ತಂಡ ಎಡಗೈ ಬಲಗೈ ಸಂಯೋಜನೆಯನ್ನು ಹೊಮದಲು ಬಯಸಿದೆಯಾ? ಅದು ಸಾಧ್ಯವಿಲ್ಲ ಯಾಕೆಂದರೆ ರಿಷಭ್ ಪಂತ್ ಇನ್ನೂ ಬ್ಯಾಟಿಂಗ್ಗೆ ಇಳಿಯಬೇಕಾಗಿತ್ತು. ಆದರೆ ಜಡೇಜಾ ಯಾವ ಕಾರಣಕ್ಕೆ. ಜಡೇಜಾ ಸಿದ್ಧರಾಗಿಲ್ಲದಿದ್ದರೆ ಪಂತ್ ಕೂಡ ಸಿದ್ಧವಾಗಿರಲಿಲ್ಲವೇ? ಜಡೇಜಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಎಂದರೆ ಯೋಚಿಸುವುದು ಕೂಡ ಅಸಾಧ್ಯ" ಎಂದು ಸಂಜಯ್ ಮಂಜ್ರೇಕರ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಆದರೆ ಟೀಮ್ ಇಂಡಿಯಾದ ಈ ನಡೆ ಮೊದಲ ಇನ್ನಿಂಗ್ಸ್ನಲ್ಲಿ ವಿಫಲವಾಗಿದೆ. ರವೀಂದ್ರ ಜಡೇಜಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ತಂಡಕ್ಕೆ ಹೆಚ್ಚಿನ ಲಾಭವೇನೂ ಆಗಲಿಲ್ಲ. 34ನ ಎಸೆತಗಳನ್ನು ಎದುರಿಸಿದ ಜಡ್ಡು 10 ರನ್ಗಳನ್ನು ಬಾರಿಸಿ ವಿಕೆಟ್ ಕಳೆದುಕೊಂಡರು. ನಂತರ ಬ್ಯಾಟಿಂಗ್ಗೆ ಬಂದ ಅಜಿಂಕ್ಯಾ ರಹಾನೆ ಹಾಗೂ ರಿಷಭ್ ಪಂತ್ ಕೂಡ ಕ್ರಮವಾಗಿ 14 ಹಾಗೂ 9 ರನ್ಗಳಿಸಿ ವಿಕೆಟ್ ಕಳೆದುಕೊಂಡರು.
ಟೀಮ್ ಇಂಡಿಯಾದ ಸ್ಪೆಶಲಿಸ್ಟ್ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ನೆಲೆಯೂರಲು ಪರದಾಡಿ ವಿಕೆಟ್ ಕೈಚೆಲ್ಲಿದ್ದರೆ ಶಾರ್ದೂಲ್ ಠಾಕೂರ್ ಬೇರೆಯದ್ದೇ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದರು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸುವ ಮೂಲಕ ಶಾರ್ದೂಲ್ ಠಾಕೂರ್ ರನ್ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮತ್ತೊಂದು ಭರ್ಜರಿ ಅರ್ಧ ಶತಕವನ್ನು ಸಿಡಿಸಿದರು.
ಕೇವಲ 36 ಎಸೆತಗಳನ್ನು ಎದುರಿಸಿದ ಶಾರ್ದೂಲ್ ಠಾಕೂರ್ 57 ರನ್ಗಳ ಕೊಡುಗೆಯನ್ನು ತಂಡಕ್ಕೆ ನೀಡುವಲ್ಲಿ ಯಶಸ್ವಿಯಾದರು. 158.33 ಸ್ಟ್ರೆಐಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಶಾರ್ದೂಲ್ ಏಳು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು. ಈ ಮೂಲಕ 8ನೇ ವಿಕೆಟ್ಗೆ ಉಮೇಶ್ ಯಾದವ್ ಜೊತೆಗೆ ಅರ್ಧ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಉಮೇಶ್ ಯಾದವ್ 20 ಎಸೆತಗಳನ್ನು ಎದುರಿಸಿ 10 ರನ್ಗಳಿಸಿ ಠಾಕೂರ್ಗೆ ಸಾಥ್ ನೀಡಿದರು.
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್ ಡೇವಿಡ್ ಮಲನ್, ಜೋ ರೂಟ್ (ನಾಯಕ), ಒಲ್ಲಿ ಪೋಪ್, ಜಾನಿ ಬೈರ್ಸ್ಟೊವ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್ಟನ್, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್