2017ರಲ್ಲೇ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದ ಅಯ್ಯರ್
ಶ್ರೇಯಸ್ ಅಯ್ಯರ್ ನಿನ್ನೆಯಿಂದ ಆರಂಭಗೊಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡಿರಬಹುದು. ಆದ್ರೆ ಅಯ್ಯರ್ 2017ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸ್ಕ್ವಾಡ್ನಲ್ಲಿ ಸೇರ್ಪಡೆಗೊಂಡಿದ್ರು.
2017ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿಗೆ ಸ್ಟ್ಯಾಂಡ್-ಬೈ ಆಗಿ ಶ್ರೇಯಸ್ ಅಯ್ಯರ್ರನ್ನ ಸ್ಕ್ವಾಡ್ನಲ್ಲಿ ಸೇರಿಸಿಕೊಳ್ಳಲಾಗಿತ್ತು. ಆದ್ರೆ ಯುವ ಆಟಗಾರನಿಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಗೆಲುವು ಸಾಧಿಸಿತ್ತು.
ಬಾರ್ಡರ್ ಗವಾಸ್ಕರ್ ಟ್ರೋಫಿಯೊಂದಿಗೆ ಅಯ್ಯರ್ ಫೋಟೋ
ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಬಳಿಕ ಟೀಂ ಇಂಡಿಯಾ ಮತ್ತು ನಾಯಕ ವಿರಾಟ್ ಕೊಹ್ಲಿಗೆ ಪ್ರಶಂಸೆಯ ಸುರಿಮಳೆಯಾಗಿತ್ತು. ಪ್ರತಿ ಆಟಗಾರರಂತೆ ಶ್ರೇಯಸ್ ಅಯ್ಯರ್ ಕೂಡ ಟ್ರೋಫಿಯೊಂದಿಗೆ ಫೋಟೋಗೆ ಫೋಸ್ ನೀಡಿದ್ರು. ಈ ಫೋಟೋವನ್ನ ಶ್ರೇಯಸ್ ಅಯ್ಯರ್ ತಂದೆ ಸಂತೋಷ್ ಅಯ್ಯರ್ ತಮ್ಮ ಮೊಬೈಲ್ ವಾಟ್ಸಾಪ್ನಲ್ಲಿ ಪ್ರೊಫೈಲ್ DP ಹಾಕಿಕೊಂಡಿದ್ದರು.
ನಾಲ್ಕು ವರ್ಷಗಳಿಂದ DP ಬದಲಿಸಿಲ್ಲವಂತೆ ಶ್ರೇಯಸ್ ತಂದೆ
ಹೌದು, ಇದು ಕೇಳಲು ಆಶ್ಚರ್ಯವಾದ್ರೂ , ಸ್ವತಃ ಶ್ರೇಯಸ್ ಅಯ್ಯರ್ ತಂದೆ ಸಂತೋಷ್ ಅಯ್ಯರ್ ಈ ವಿಷಯವನ್ನ ಬಹಿರಂಗಪಡಿಸಿದ್ದಾರೆ. ತಮ್ಮ ಮಗ ಟೆಸ್ಟ್ ಕ್ರಿಕೆಟ್ನಲ್ಲಿ ಆಡಬೇಕು ಎಂಬ ಮಹಾದಾಸೆಯಿಂದ ವಾಟ್ಸಾಪ್ ಡಿಪಿಯನ್ನ ಬದಲಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.
"ಹೌದು, ಈ ಡಿಪಿ (ಶ್ರೇಯಸ್ ಬಾರ್ಡರ್ ಗವಾಸ್ಕರ್ ಟ್ರೋಫಿ) ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಏಕೆಂದರೆ ಅವರು(ಟೀಂ ಇಂಡಿಯಾ) ಆಸ್ಟ್ರೇಲಿಯಾ ವಿರುದ್ಧ ಆಡುವಾಗ, ಧರ್ಮಶಾಲಾದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಅವರು ಸ್ಟ್ಯಾಂಡ್-ಬೈ ಆಗಿದ್ದರು" ಎಂದು ಸಂತೋಷ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
"ಆದ್ದರಿಂದ ಪಂದ್ಯವನ್ನು ಗೆದ್ದ ನಂತರ, ಅವರು (ತಂಡದ ಸಹ ಆಟಗಾರರು) ಟ್ರೋಫಿಯನ್ನು ಅವನಿಗೆ (ಶ್ರೇಯಸ್) ಹಸ್ತಾಂತರಿಸಿದರು, ಅದನ್ನು ಆತ ಹಿಡಿದಿಟ್ಟ ಆ ಕ್ಷಣ ನನಗೆ ತುಂಬಾ ಪ್ರತಿಷ್ಠಿತವಾಗಿತ್ತು." ಎಂದು ಅಯ್ಯರ್ ತಂದೆ ಹೇಳಿದ್ದಾರೆ.
ಜೊತೆಗೆ ''ಟ್ರೋಫಿಯನ್ನು ಹಿಡಿದಿರುವ ಶ್ರೇಯಸ್ ಅನ್ನು ಕಂಡು ನಾನು ಅಕ್ಷರಶಃ ಆತ ಆ ಕ್ಷಣದಲ್ಲಿ ಭಾರತಕ್ಕಾಗಿ ಆಡಬೇಕೆಂದು ಬಯಸಿದ್ದೆ. ಮತ್ತು ನಾನು ಆ ಮಾರ್ಗಗಳಲ್ಲಿ ಯೋಚಿಸುತ್ತಿದ್ದೆ, ಅವರು ನಿಜವಾಗಿಯೂ ತಂಡದಲ್ಲಿರಲು ಮತ್ತು ಟೆಸ್ಟ್ ಪಂದ್ಯದಲ್ಲಿ ಪ್ರದರ್ಶನ ನೀಡಲು ಯಾವಾಗ ಅವಕಾಶ ಸಿಗುತ್ತದೆ ಕಾಯುತ್ತಿದ್ದೆ'' ಎಂದು ಅವರು ಹೇಳಿದರು.
ಹೀಗಾಗಿ ಆತನಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಬೇಕು, ಅದೇ ನಿನ್ನ ಗುರಿ ಎಂದು ನೆನಪಿಸಲು ಶ್ರೇಯಸ್ ಅಯ್ಯರ್ ತಂದೆ ಡಿಪಿಯನ್ನ ಬದಲಿಸಿಲ್ಲವಂತೆ.
ಅದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ಗೆ ಒಂದು ದಿನದ ಮುಂಚೆ ಸ್ಟ್ಯಾಂಡ್ ಬೈ ಕ್ಯಾಪ್ಟನ್ ಅಜಿಂಕ್ಯ ರಹಾನೆ ಮೊದಲ ಟೆಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಭಾರತದ ಪರ ಆಡುವುದನ್ನ ಖಚಿತಪಡಿಸಿದ್ರು. ಈ ಸುದ್ದಿ ಹೊರಬಿದ್ದ ಕೂಡಲೇ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ, ಅದೊಂದು ಅದ್ಭುತ ಕ್ಷಣ ಎಂದು ಸಂತೋಷ್ ಅಯ್ಯರ್ ಹೇಳಿದ್ದಾರೆ.
'' ಶ್ರೇಯಸ್ ಆಡಲಿದ್ದಾರೆ ಎಂದು ಅಜಿಂಕ್ಯ ರಹಾನೆ ಘೋಷಿಸಿದಾಗ, ಅದು ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿದೆ. ಬೇರೆ ಯಾವುದೇ (ಫಾರ್ಮ್ಯಾಟ್) ಐಪಿಎಲ್ ಅಥವಾ ಏಕದಿನಕ್ಕೆ ಆಯ್ಕೆಯಾಗುವುದಕ್ಕಿಂತ ಹೆಚ್ಚಿನದು, ಇದು ನನಗೆ ಬಹಳ ಪ್ರತಿಷ್ಠಿತವಾಗಿದೆ. ಕ್ರಿಕೆಟ್ನ ನಿಜವಾದ ರೂಪ" ಎಂದು ಸಂತೋಷ್ ಹೇಳಿದರು.
ಅದರಲ್ಲೂ ಸುನಿಲ್ ಗವಾಸ್ಕರ್ ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಂದಲೇ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ಯಾಪ್ ಸ್ವೀಕರಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯವಾಗಿತ್ತು. ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಸಂತೋಷ್ ಅಯ್ಯರ್ ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದ ಸ್ಕ್ವಾಡ್ನಲ್ಲಿ ಇದ್ದರೂ, ಮೊದಲ ಟೆಸ್ಟ್ ಪಂದ್ಯವನ್ನಾಡಲು ಬರೋಬ್ಬರಿ 4 ವರ್ಷಗಳು ಕಾಯಬೇಕಾಯಿತು. ಕೊನೆಗೂ ಅವರ ಕನಸು ಇದೀಗ ನನಸಾಗಿದೆ.