
ಕೊಲಂಬೋ, ಜುಲೈ 23: ಶ್ರೀಲಂಕಾದ ಬ್ಯಾಟ್ಸ್ಮನ್ ದನುಷ್ಕ ಗುಣತಿಲಕ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತಾಗಿದ್ದಾರೆ. ವಿಚಾರಣೆ ವೇಳೆ ಆಟಗಾರ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿರುವುದಾಗಿ ಕಾರಣ ನೀಡಿರುವ ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಗುಣತಿಲಕ ಅವರನ್ನು ಅಮಾನತುಗೊಳಿಸಿದೆ.
ಈ ಬೆಳವಣಿಗೆಯು ಕೊಲಂಬೋದಲ್ಲಿ ನಡೆದ ಶ್ರೀಲಂಕಾ ಮತ್ತು ಸೌತಾಫ್ರಿಕಾ ವಿರುದ್ಧದ ದ್ವಿತೀಯ ಮತ್ತು ಅಂತಿಮ ಟೆಸ್ಟ್ ನ ಮೂರನೇ ದಿನದಾಟದ ವೇಳೆ ಕಂಡುಬಂತು. ಈ ವಿಚಾರದ ಬಗ್ಗೆ ಹೆಚ್ಚು ಮಾಹಿತಿ ನೀಡಲೊಪ್ಪದ ಶ್ರೀಲಂಕಾ ಕ್ರಿಕೆಟ್, ದನುಷ್ಕ ಅಮಾನತಾಗಿರುವ ವಿಚಾರವನ್ನಷ್ಟೇ ತಿಳಿಸಿದೆ.
'ಶ್ರೀಲಂಕಾ ಕ್ರಿಕೆಟ್ ನಡೆಸಿದ ವಿಚಾರಣೆ ವೇಳೆ ಆಟಗಾರ ತಂಡದ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡುಬಂದಿತ್ತು. ಇದನ್ನು ತಂಡದ ನಿರ್ವಹಣಾ ಸಮಿತಿಯೂ ವರದಿ ಮಾಡಿತ್ತು. ಹಾಗಾಗಿ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ಎಲ್ಲಾ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ' ಎಂದು ಎಸ್ಎಲ್ಸಿ ತಿಳಿಸಿದೆ.
ದನುಷ್ಕ ಅವರನ್ನು ಅಮಾನತು ಗೊಳಿಸಿರುವುದರಿಂದ ಶ್ರೀಲಂಕಾದ ಸಿಂಹಳೀಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾದ-ಸೌತಾಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಬಳಿಕ ಆಟಗಾರನಿಗೆ ನೀಡಬೇಕಿದ್ದ ಪಂದ್ಯ ಶುಲ್ಕವನ್ನು ತಡೆಹಿಡಿಯಲಾಗಿದೆ.
2017ರಲ್ಲಿ ಭಾರತದಲ್ಲಿ ನಡೆದಿದದ್ದ ತರಬೇತಿ ವೇಳೆಯೂ ಗುಣತಿಲಕ ದುರ್ನಡತೆ ತೋರಿದ್ದರು. ಹೀಗಾಗಿ ಅವರನ್ನು ಆರಂಭದಲ್ಲಿ ಆರು ಏಕದಿನ ಪಂದ್ಯಗಳಿಂದ ಅಮಾನತುಗೊಳಿಸಲಾಗಿತ್ತು. ಅನಂತರ ಪಾಕಿಸ್ತಾನ ವಿರುದ್ಧದ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕಾಗಿಯೂ ಶ್ರೀಲಂಕಾ ತಂಡದಿಂದ ಹೊರಗಿಡಲಾಗಿತ್ತು.