ಏಷ್ಯಾಕಪ್ ಗೆದ್ದು ತವರಿಗೆ ಮರಳಿದ ಶ್ರೀಲಂಕಾ ತಂಡಕ್ಕೆ ಅದ್ಧೂರಿ ಸ್ವಾಗತ
ಏಷ್ಯಾಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಧೂಳೀಪಟ ಮಾಡಿ 2014ರ ನಂತರ 6ನೇ ಬಾರಿ ಏಷ್ಯಾಕಪ್ ಗೆದ್ದ ಶ್ರೀಲಂಕಾ ತಂಡ ಮಂಗಳವಾರ ವಾಪಸ್ ತವರಿಗೆ ಮರಳಿದೆ. 8 ವರ್ಷಗಳ ನಂತರ ಕಪ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಯಾವ ನಿರೀಕ್ಷೆಯೂ ಇಲ್ಲದೆ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಶ್ರೀಲಂಕಾ ತಾನು ಆಡಿದ ಮೊದಲ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಶ್ರೀಲಂಕಾ ಆಡಿದ ರೀತಿ ಮಾತ್ರ ಅತ್ಯದ್ಭುತ. ಮೊದಲ ಸೋಲಿನ ನಂತರ ತಾನಾಡಿದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾ ಗೆದ್ದು ಫೈನಲ್ ಪ್ರವೇಶಿಸಿತು.
ಶ್ರೀಲಂಕಾ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್ಗಳಿಂದ ಸೋಲಿಸಿತು. ಭಾನುಕಾ ರಾಜಪಕ್ಸೆ ಅಜೇಯ 71 ರನ್, ವನಿಂದು ಹಸರಂಗ ಆಲ್ರೌಂಡ್ ಪ್ರದರ್ಶಣ ಮತ್ತು ಬೌಲರ್ ಪ್ರಮೋದ್ ಮದುಶನ್ ಅವರ ನಾಲ್ಕು ವಿಕೆಟ್ ಪಡೆದು ಶ್ರೀಲಂಕಾ ಆರನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಲು ನೆರವಾದರು. ಪಂದ್ಯಾವಳಿಯಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಶ್ರೀಲಂಕಾ ತಂಡಕ್ಕೆ ಪ್ರಪಂಚದಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಶ್ರೀಲಂಕಾ ಆಟಗಾರರಿಗೆ ಅದ್ದೂರಿ ಸ್ವಾಗತ
ಏಷ್ಯಾಕಪ್ ಗೆಲುವಿನ ನಂತರ, ಶ್ರೀಲಂಕಾ ಆಟಗಾರರು ಮಂಗಳವಾರ ಬೆಳಿಗ್ಗೆ ವಾಪಸ್ ಶ್ರೀಲಂಕಾಗೆ ಹಿಂದಿರುಗಿದರು. ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಕ್ರಿಕೆಟ್ ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಆಟಗಾರರನ್ನು ಸ್ವಾಗತಿಸಿದರು.
ನಂತರ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಶ್ರೀಲಂಕಾ ತಂಡ ಬೃಹತ್ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿತು. ವಿಜಯೋತ್ಸವದ ಮೆರವಣಿಗೆಯಲ್ಲಿ ಆಟಗಾರರು ಭಾಗವಹಿಸಿದ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಆಟಗಾರರು
ರಸ್ತೆಬದಿಯಲ್ಲಿ ಅಭಿಮಾನಿಗಳು ಅವರನ್ನು ಅಭಿನಂದಿಸಿದರು. ಆಟಗಾರರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು ಮತ್ತು ದೇಶದಲ್ಲಿ ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಅವರ ತಂಡವನ್ನು ಅಭೂತಪೂರ್ವಕವಾಗಿ ಬೆಂಬಲಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.
ವಿದೇಶಿ ಮೀಸಲು ಕೊರತೆಯಿಂದಾಗಿ ಇಂಧನ, ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯಲು ಜನ ದೀರ್ಘ ಸರತಿ ಸಾಲಿನಲ್ಲಿ ನಿಂತಿರಬೇಕಾಗಿದೆ. ವಿದ್ಯುತ್ ಕಡಿತ ಮತ್ತು ಗಗನಕ್ಕೇರುತ್ತಿರುವ ಆಹಾರದ ಬೆಲೆಗಳು ಜನರ ದುಃಖವನ್ನು ಹೆಚ್ಚಿಸಿವೆ. ಆದರೂ ಕೂಡ ತಮ್ಮ ತಂಡದ ಮೇಲಿನ ಅಭಿಮಾನ ಅವರಿಗೆ ಕಡಿಮೆಯಾಗಿರಲಿಲ್ಲ.

ಶ್ರೀಲಂಕಾ ಜನತೆಗೆ ಕಪ್ ಅರ್ಪಣೆ
ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ್ದ ಶ್ರೀಲಂಕಾ ನಾಯಕ ದಸುನ್ ಶನಕ ಈ ತಮ್ಮ ತಂಡದ ಗೆಲುವನ್ನು ಶ್ರೀಲಂಕಾ ಜನತೆಗೆ ಅರ್ಪಿಸುವುದಾಗಿ ತಿಳಿಸಿದ್ದರು. "ನಾವು ಈ ವಿಜಯವನ್ನು ನಮ್ಮ ದೇಶಕ್ಕೆ ಅರ್ಪಿಸಲು ಬಯಸುತ್ತೇವೆ. ಅವರೆಲ್ಲರೂ ಇದಕ್ಕಾಗಿ ಕಾಯುತ್ತಿದ್ದರು" ಎಂದು ಶನಕ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಏಷ್ಯಾಕಪ್ನಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ನಮ್ಮ ಮುಂದಿನ ಗುರಿ ವಿಶ್ವಕಪ್ ಎಂದು ಶ್ರೀಲಂಕಾ ತಂಡದ ನಾಯಕ ಹೇಳಿದ್ದಾರೆ. ವಿಶ್ವಕಪ್ನಲ್ಲಿಯೂ ಇದೇ ರೀತಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಂದ್ಯ ಗೆದ್ದಾಗ ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ದ ಜನ
ದೇಶದ ಸಂಕಟದ ಪರಿಸ್ಥಿತಿಯ ನಡುವೆಯೂ ಕ್ರಿಕೆಟ್ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟುಕೊಡಲಿಲ್ಲ. ತಮ್ಮ ತಂಡ ಏಷ್ಯಾಕಪ್ ಗೆಲ್ಲುತ್ತಿದ್ದಂತೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಪಂದ್ಯ ಮುಗಿಯುತ್ತಿದ್ದಂತೆ ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.
ತಮ್ಮ ತಂಡದ ಅಭೂತಪೂರ್ವ ಗೆಲುವನ್ನು ಆಚರಿಸಲು ಅಭಿಮಾನಿಗಳು ಶ್ರೀಲಂಕಾದ ಬೀದಿಗಳಲ್ಲಿ ಪಟಾಕಿಗಳನ್ನು ಸಿಡಿಸಿದರು. ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡಿದರು. ರಾತ್ರಿಯಿಡೀ ತಮ್ಮ ತಂಡಕ್ಕೆ ಜೈಕಾರ ಹಾಕುತ್ತಾ ಸಂಭ್ರಮಾಚರಣೆ ಮಾಡಿದರು. ಬೀದಿ ಬೀದಿಗಳಲ್ಲಿ ಧ್ವಜ ಹಿಡಿದು ಗೆಲುವಿನ ಖುಷಿ ಅನುಭವಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications