ರೈನಾ ಮೆಚ್ಚುಗೆಗೆ ಪಾತ್ರವಾದವರಲ್ಲಿ ಕನ್ನಡಿಗ
ತನ್ನ ಮೆಚ್ಚುಗೆಗೆ ಪಾತ್ರವಾದ ಆಟಗಾರರ ಬಗ್ಗೆ ಸುರೇಶ್ ರೈನಾ ಮಾತನಾಡಿದಾಗ ಮೂವರು ಯುವ ಆಟಗಾರರನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಕನ್ನಡಿಗ ಆಟಗಾರ ದೇವದತ್ ಪಡಿಕ್ಕಲ್ ಕೂಡ ಸೇರಿದ್ದಾರೆ. ಎರಡನೇ ಆಟಗಾರನಾಗಿ ಋತುರಾಜ್ ಗಾಯಕ್ವಾಡ್ ಹಾಗೂ ಮೂರನೇಯದಾಗಿ ಆಲ್ರೌಂಡರ್ ಅಕ್ಷರ್ ಪಟೇಕ್ ಅವರು ತನ್ನ ಮೆಚ್ಚುಗೆಯನ್ನು ಗಳಿಸಿದ ಮೂವರು ಯುವ ಆಟಗಾರರು ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
ಮೆಚ್ಚುಗೆಯ ಮಾತುಗಳನ್ನಾಡಿದ ರೈನಾ
ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ ಈ ಬಗ್ಗೆ ಮಾತನಾಡಿದ್ದಾರೆ. "ನನ್ನ ಮೆಚ್ಚುಗೆ ಗಳಿಸಿದವರಲ್ಲಿ ಆರಂಬದಲ್ಲಿ ಕರ್ನಾಟಕದ ದೇವದತ್ ಪಡಿಕ್ಕಲ್, ಮಹಾರಾಷ್ಟ್ರದ ಆಟಗಾರ ಋತುರಾಜ್ ಗಾಯಕ್ವಾಡ್. ಆತನೋರ್ವ ಗನ್ ಪ್ಲೇಯರ್. ಬಳಿಕ ಅಕ್ಷರ್ ಪಟೇಲ್. ಈತ ನಿಜಕ್ಕೂ ಕಠಿಣ ಪರಿಶ್ರಮವನ್ನು ಪಡುತ್ತಿದ್ದಾನೆ. ರವೀಂದ್ರ ಜಡೇಜಾ ಅವರ ಅಲಭ್ಯತೆಯಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನೀಡಿದ್ದಾರೆ" ಎಂದು ರೈನಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಸಿರಾಜ್ ಬಗ್ಗೆಯೂ ರೈನಾ ಪ್ರಶಂಸೆ
ಇನ್ನು ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್ ಬಗ್ಗೆಯೂ ಸುರೇಶ್ ರೈನಾ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. "ಮೊಹಮ್ಮದ್ ಸಿರಾಜ್ ಕೂಡ ಅದ್ಭುತವಾಗಿ ಬೌಲಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ಬಹುಶಃ ಇದಕ್ಕೆಲ್ಲಾ ನಾವು ರಾಹುಲ್ ದ್ರಾವಿಡ್ ಅವರಿಗೆ ಶ್ರೇಯಸ್ಸನ್ನು ನೀಡಬೇಕಾಗುತ್ತದೆ ಎಂದು ಭಾವಿಸಯತ್ತೇನೆ. ಅಂಡರ್ 19 ಹಾಗೂ ಭಾರತ ಎ ತಂಡದಲ್ಲಿ ಅವರ ಮಾರ್ಗದರ್ಶನದಿಂದಾಗಿ ಯುವ ಆಟಗಾರರ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಯಿತು" ಎಂದಿದ್ದಾರೆ ಸುರೇಶ್ ರೈನಾ
ಶ್ರೀಲಂಕಾ ಪ್ರವಾಸದಲ್ಲಿ ಯುವ ತಂಡ
ಇನ್ನು ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ಸಹಿತ ಯುವ ಆಟಗಾರನ್ನು ಒಳಗೊಂಡು ಭಾರತೀಯ ತಂಡ ಶ್ರೀಲಂಕಾ ಪ್ರವಾಸದಲ್ಲಿದೆ. ಶಿಖರ್ ಧವನ್ ನೇತೃತ್ವದ ತಂಡ ಸೀಮಿತ ಓವರ್ಗಳ ಸರಣಿಯನ್ನಾಡಲು ಶ್ರೀಲಂಕಾಗೆ ತೆರಳಿದೆ. ಈ ತಂಡ ಲಂಕಾ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.