ಭಾರತಕ್ಕೆ ಡೆತ್ ಓವರ್ ಸಮಸ್ಯೆ
ಟಿ20 ವಿಶ್ವಕಪ್ನ ಆರಂಭಕ್ಕೂ ಮುನ್ನ ನಡೆದ ಏಷ್ಯಾ ಕಪ್ನಲ್ಲಿ ಭಾರತ ತಂಡ ಡೆತ್ ಓವರ್ನಲ್ಲಿ ನಿಯಂತ್ರಣ ಸಾಧಿಸಲು ವಿಫಲವಾಗಿ ಮುಖಭಂಗ ಅನುಭವಿಸಿತ್ತು. ಹೀಗಾಗಿ ಅನುಭವಿ ಜಸ್ಪ್ರಿತ್ ಬೂಮ್ರಾ ಮೇಲೆ ಭಾರತ ತಂಡ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿತ್ತು. ಆದರೆ ವಿಶ್ವಕಪ್ಗೆ ಮುನ್ನ ಬೂಮ್ರಾ ಮತ್ತೆ ಗಾಯಕ್ಕೆ ತುತ್ತಾದ ಕಾರಣ ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಭಾರತದ ಬೌಲಿಂಗ್ ವಿಭಾಗದಲ್ಲಿ ಬೂಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು ಬದಲಿ ಆಟಗಾರನನ್ನಾಗಿ ಸೇರ್ಪಡೆಗೊಳಸಿಲಾಗಿದೆ.
ಶಮಿ ಸೇರ್ಪಡೆಯೇ ಭಾರತಕ್ಕೆ ವಿಶೇಷ ಬಲ
ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಉಲ್ಲೇಖಿಸಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದಲ್ಲಿ ಜಸ್ಪ್ರೀತ್ ಬೂಮ್ರಾಗೆ ಬದಲಿಯಾಗಿ ಸೇರ್ಪಡೆಯಾಗಿರುವ ಮೊಹಮ್ಮದ್ ಶಮಿ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. "ಭಾರತ ತಂಡ ಈಗ ಅದ್ಭುತವಾಗಿ ಪ್ರದರ್ಶನ ನೀಡುತ್ತಿದೆ. ಶಮಿ ಜಸ್ಪ್ರಿತ್ ಬೂಮ್ರಾಎ ಬದಲಿಯಾಗಿ ಸೇರಿಕೊಂಡಿದ್ದಾರೆ. ಇದು ಭಾರತ ತಂಡಕ್ಕೆ ವಿಶೇಷ ಬಲ ನೀಡಲಿದೆ. ಅರ್ಶದೀಪ್ ಸಿಂಗ್, ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಅತ್ಯುತ್ತಮ ಲಯದಲ್ಲಿದ್ದಾರೆ" ಎಂದಿದ್ದಾರೆ ಸುರೇಶ್ ರೈನಾ.
ಅಭ್ಯಾಸ ಪಂದ್ಯದಲ್ಲಿ ಮಿಂಚಿದ ರಾಹುಲ್, ಸೂರ್ಯ
ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಕೇವಲ ಒಂದು ಓವರ್ ಮಾತ್ರವೇ ಬೌಲಿಂಗ್ ದಾಳಿ ನಡೆಸಿದ್ದರು. ಈ ಒಂದು ಓವರ್ನಲ್ಲಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತದ ವಿರುದ್ಧ ಸೋಲು ಅನುಭವಿಸಿತ್ತು.
ಬಿಸಿಸಿಐ ನಿರ್ಧಾರಕ್ಕೆ ಸುರೇಶ್ ರೈನಾ ಮೆಚ್ಚುಗೆ
ಈ ಸಂದರ್ಭದಲ್ಲಿ ಸುರೇಶ್ ರೈನಾ ಬಿಸಿಸಿಐನ ಒಂದು ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ 15 ದಿನಗಳ ಮುನ್ನವೇ ಟೀಮ್ ಇಂಡಿಯಾ ಬಳಗ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿತ್ತು. ಇದು ಭಾರತ ತಂಡಕ್ಕೆ ನಿಜಕ್ಕೂ ಉಪಯುಕ್ತವಾಗಲಿದೆ. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರ ಅತ್ಯುತ್ತಮ ನಿರ್ಧಾರ ಎಂದಿದ್ದಾರೆ ಸುರೇಶ್ ರೈನಾ. "ಆಸ್ಟ್ರೇಲಿಯಾದ ಕಂಡೀಶನ್ ಭಾರತಕ್ಕಿಂತ ಬಹಳ ಭಿನ್ನವಾಗಿದೆ. ಆಸ್ಟ್ರೇಲಿಯಾದ ದೊಡ್ಡ ಕ್ರೀಡಾಂಗಣಗಳಿಗೆ ಹೊಂದಿಕೊಳ್ಳಲು ಭಾರತ ತಂಡದ ಆಟಗಾರರಿಗೆ ಸಾಕಾಗುವಷ್ಟು ಅಭ್ಯಾಸಕ್ಕೆ ಸಮಯ ದೊರೆತಿದೆ. ಹೀಗಾಗಿ ಉತ್ತಮ ಅಭ್ಯಾಸದೊಂದಿಗೆ ಭಾರತ ತಂಡ ವಿಶ್ವಕಪ್ಗೆ ಉತ್ತಮವಾಗಿ ಸಿದ್ಧತೆ ನಡೆಸಿದೆ" ಎಂದಿದ್ದಾರೆ ಸುರೇಶ್ ರೈನಾ.