ಯುಜುವೇಂದ್ರ ಚಾಹಲ್
ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಈ ಬಾರಿಯ ಟಿ20 ವಿಶ್ವಕಪ್ ಸ್ಕ್ವಾಡ್ನಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿ ಮೂಡಿಸಿತ್ತು. ಯುಜುವೇಂದ್ರ ಚಾಹಲ್ ಸ್ಥಾನದಲ್ಲಿ ಯುವ ಸ್ಪಿನ್ನರ್ ರಾಹುಲ್ ಚಹರ್ಗೆ ಅವಕಾಶವನ್ನು ನೀಡಲಾಯಿತು. ಕಳೆದ ಐದಾರು ತಿಂಗಳಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಚಾಹಲ್ ಮಂಕಾದಂತೆ ಕಂಡು ಬಂದಿದ್ದರು. ಇದು ಕೂಡ ಚಾಹಲ್ಗೆ ವಿಶ್ವಕಪ್ನ ತಂಡದಲ್ಲಿ ಸ್ಥಾನ ದೊರೆಯದಿರಲು ಕಾರಣವಾಗಿತ್ತು. ಆದರೆ ಯುಜುವೇಂದ್ರ ಚಾಹಲ್ ಐಪಿಎಲ್ ಎರಡನೇ ಚರಣದಲ್ಲಿ ಅಮೋಘ ಲಯದಲ್ಲಿದ್ದಾರೆ. ಆರ್ಸಿಬಿ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅನುಭವಿ ಆಟಗಾರನಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ದೊರೆಯಬೇಕೆಂದು ಕ್ರಿಕೆಟ್ ಪಂಡಿತರು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಐಪಿಎಲ್ನಲ್ಲಿ ಚಾಹಲ್ ನೀಡುತ್ತಿರುವ ಪ್ರದರ್ಶನದ ಕಾರಣಕ್ಕೆ ವಿಶ್ವಕಪ್ ಸ್ಕ್ವಾಡ್ನಲ್ಲಿ ಚಾಹಲ್ ಮತ್ತೆ ಸ್ಥಾನ ಸಂಪಾದಿಸಿದರೆ ಅಚ್ಚರಿಯಿಲ್ಲ.
ಶ್ರೇಯಸ್ ಐಯ್ಯರ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಐಯ್ಯರ್ ಗಾಯದ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಕ್ರಿಕೆಟ್ನಿಂದ ದೂರವುಳಿದ ಬಳಿಕ ಈಗ ಐಪಿಎಲ್ ಮೂಲಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. ಆದರೆ ಟಿ20 ವಿಶ್ವಕಪ್ನ ಸ್ಕ್ವಾಡ್ನಲ್ಲಿ ಆಯ್ಕೆಯಾಗದೆ ಐಯ್ಯರ್ ನಿರಾಸೆ ಅನುಭವಿಸಿದ್ದಾರೆ. ಶ್ರೇಯಸ್ ಐಯ್ಯರ್ ಈ ಬಾರಿಯ ಚುಟುಕು ಮಹಾ ಸಮರಕ್ಕೆ ಟೀಮ್ ಇಂಡಿಯಾದ ಬದಲಿ ಆಟಗಾರನಾಗಿ ಹೆಸರಿಸಲ್ಪಟ್ಟಿದ್ದಾರೆ. ಆದರೆ ಈ ಬಾರಿಯ ಐಪಿಎಲ್ನಲ್ಲಿ ಶ್ರೇಯಸ್ ಐಯ್ಯರ್ ಉತ್ತಮ ಲಯವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಸ್ಕ್ವಾಡ್ಗೆ ಆಯ್ಕೆಯಾಗಲು ತಾನು ಅರ್ಹ ಎಂಬುದನ್ನು ಸಾರಿದ್ದಾರೆ. ಮತ್ತೊಂದೆಡೆ ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಈ ಬಾರಿಯ ಐಪಿಎಲ್ನಲ್ಲಿ ಕಳಪೆ ಫಾರ್ಮ್ನಲ್ಲಿರುವ ಕಾರಣದಿಂದಾಗಿ ಆ ಸ್ಥಾನಕ್ಕೆ ಶ್ರೇಯಸ್ ಐಯ್ಯರ್ ಸೂಕ್ತ ಆಯ್ಕೆಯಾಗಲಿದ್ದಾರೆ.
ಶಾರ್ದೂಲ್ ಠಾಕೂರ್
ಟಿ20 ವಿಶ್ವಕಪ್ನ ಸ್ಕ್ವಾಡ್ನಿಂದ ತಪ್ಪಿಸಿಕೊಂಡ ಮತ್ತೋರ್ವ ಪ್ರತಿಭಾನ್ವಿತ ಹಾಗೂ ನತದೃಷ್ಠ ಆಟಗಾರನೆಂದರೆ ಅದು ಶಾರ್ದೂಲ್ ಠಾಕೂರ್. ಆಲ್ರೌಂಡರ್ ಆಗಿ ಮಿಂಚಬಲ್ಲ ಸಾಮರ್ಥ್ಯ ಹೊಂದಿರುವ ಶಾರ್ದೂಲ್ ಠಾಕೂರ್ ಟಿ20 ವಿಶ್ವಕಪ್ಗೆ ಸೇರ್ಪಡೆಯಾಗಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಶಾರ್ದೂಲ್ ಠಾಕೂರ್ ಕೂಡ ಮೀಸಲು ಆಟಗಾರನಾಗಿ ಮಾತ್ರವೇ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿಯ ಐಪಿಎಲ್ನಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅತ್ಯಂತ ಕಳಪೆ ಫಾರ್ಮ್ನಲ್ಲಿದ್ದಾರೆ. ಅಲ್ಲದೆ ಹಾರ್ದಿಲ್ ಐಪಿಎಲ್ನಲ್ಲಿ ಬೌಲಿಂಗ್ ಮಾಡದೆ ಕೇವಲ ಬ್ಯಾಟ್ಸ್ಮನ್ ಆಗಿ ಮಾತ್ರವೇ ಆಡುತ್ತಿದ್ದಾರೆ. ಹೀಗಾಗಿ ಇದು ತಂಡದ ಆಡುವ ಬಳಗದ ಸಂಯೋಜನೆಯಲ್ಲಿಯೂ ಹಿನ್ನಡೆಯುಂಟು ಮಾಡುವ ಸಾಧ್ಯತೆಯಿದೆ. ಹೀಗಾಗಿ ಆ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ.