T20 World Cup: ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ಸಮಸ್ಯೆಯಲ್ಲ ಎಂದ ಮಾಜಿ ಆಟಗಾರ

ಟೀಮ್ ಇಂಡಿಯಾದ ಟಿ20 ವಿಶ್ವಕಪ್ 2022 ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ಎಂದು ಹೇಳಲಾಗುತ್ತಿದೆ. ಬುಮ್ರಾ ಬದಲಿಗೆ ಬೇರೆ ಯಾರಿಗೆ ಅವಕಾಶ ನೀಡಬೇಕು ಎನ್ನುವ ಚರ್ಚೆ ಜೋರಾಗಿದೆ.
ಆಸ್ಟ್ರೇಲಿಯಾದ ವೇಗದ ಪಿಚ್ಗಳಲ್ಲಿ ಬುಮ್ರಾ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದರು. ಆದರೆ, ಬೆನ್ನಿನ ಗಾಯದ ಸಮಸ್ಯೆಯಿಂದಾಗಿ ಅವರು ಟಿ20 ವಿಶ್ವಕಪ್ ತಂಡದಿಂದಲೇ ಹೊರಗುಳಿದಿದ್ದಾರೆ. ಬದಲೀ ಆಟಗಾರನ ಹೆಸರನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಬಿಸಿಸಿಐ ತಿಳಿಸಿದೆ.
ಬುಮ್ರಾ ಅನುಪಸ್ಥಿತಿಯಿಂದ ಭಾರತ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿದೆ ಎಂದು ಎಲ್ಲರೂ ಹೇಳುತ್ತಿರುವಾಗ ಅಜಯ್ ಜಡೇಜಾ ಮಾತ್ರ ವಿಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬುಮ್ರಾ ಅನುಪಸ್ಥಿತಿ ಟಿ20 ವಿಶ್ವಕಪ್ನಲ್ಲಿ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬುಮ್ರಾ ಟೀಂ ಇಂಡಿಯಾದಲ್ಲಿ ಆಡದೇ ಇದ್ದಾಗಲೂ ಟೀಂ ಇಂಡಿಯಾ ಪಂದ್ಯಗಳನ್ನು ಗೆದ್ದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.

ಶಮಿ, ಚಹಾರ್ ಸ್ಥಾನ ಪಡೆಯುವ ಸಾಧ್ಯತೆ
ಬೆನ್ನುನೋವಿನ ಕಾರಣ ಬುಮ್ರಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಅವರ ಬದಲಿ ಆಟಗಾರನನ್ನು ಬಿಸಿಸಿಐ ಇನ್ನೂ ಹೆಸರಿಸಿಲ್ಲ. ಮೊಹಮ್ಮದ್ ಶಮಿ ಅಥವಾ ದೀಪಕ್ ಚಹಾರ್ ಅವರನ್ನು ಸ್ಟ್ಯಾಂಡ್ಬೈಸ್ನಿಂದ ಮುಖ್ಯ ತಂಡಕ್ಕೆ ಡ್ರಾಫ್ಟ್ ಮಾಡಬಹುದು.
ಶಮಿ ಈ ವಾರ ಎನ್ಸಿಎ ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಲಿದ್ದಾರೆ. ಹೃದಯರಕ್ತನಾಳದ ಪರೀಕ್ಷೆಯಲ್ಲಿ ಅವರು ಪಾಸಾಗಿ, ಫಿಟ್ನೆಸ್ ಸಾಬೀತುಪಡಿಸಿದರೆ ಅವರು ವಿಶ್ವಕಪ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ.
T20 World Cup 2022: ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಹೆಸರಿಸಿದ ಮೈಕೆಲ್ ಬೆವನ್

ಬುಮ್ರಾ ಇಲ್ಲದೆ ಹಲವು ಪಂದ್ಯ ಗೆದ್ದಿದ್ದೇವೆ
ಟೀಮ್ ಇಂಡಿಯಾದ ಟಿ20 ವಿಶ್ವಕಪ್ 2022 ತಂಡದಲ್ಲಿ ಬುಮ್ರಾ ಅನುಪಸ್ಥಿತಿಯ ಸಂಭವನೀಯ ಪರಿಣಾಮವನ್ನು ಚರ್ಚಿಸುತ್ತಾ, ಜಡೇಜಾ, "ನಾವು ಈ ವರ್ಷ ಪೂರ್ತಿ ಬುಮ್ರಾ ಅವರೊಂದಿಗೆ ಆಡಲಿಲ್ಲ. ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಕೆಲವೇ ಪಂದ್ಯಗಳನ್ನು ಆಡಿದ್ದೇವೆ ಮತ್ತು ಭಾರತವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಬುಮ್ರಾ ಇಲ್ಲದಿದ್ದರೂ ಭಾರತಕ್ಕೆ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯವಿದೆ," ಎಂದು ಅವರು ಹೇಳಿದ್ದಾರೆ.
ಬುಮ್ರಾ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, "ನೀವು ಜಸ್ಪ್ರೀತ್ ಬುಮ್ರಾ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ, ಅದಕ್ಕೆ ಹತ್ತಿರವಾಗಲು ಸಹ ಪ್ರಯತ್ನಿಸುವುದಿಲ್ಲ. ಅವರು ತುಂಬಾ ವಿಶೇಷವಾಗಿದ್ದಾರೆ, ಆದರೆ ವಿಶ್ವಕಪ್ನಲ್ಲಿ ಅವರಿಲ್ಲದೆ ಉತ್ತಮ ಪ್ರದರ್ಶ ನೀಡಬೇಕಿದೆ" ಎಂದು ಅವರು ಹೇಳಿದರು.

ಗಾಯದ ಸಮಸ್ಯೆಯಿಂದ ಏಷ್ಯಾಕಪ್ನಿಂದ ಹೊರಗುಳಿದಿದ್ದರು
ಬೆನ್ನುನೋವಿನ ಕಾರಣ ಬುಮ್ರಾ ಯುಎಇಯಲ್ಲಿ ನಡೆದ ಇಡೀ ಏಷ್ಯಾಕಪ್ನಿಂದ ಹೊರಗುಳಿದಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಪುನರಾಗಮನ ಮಾಡಿದರು, ಆದರೆ ಮೊದಲ ಪಂದ್ಯಕ್ಕೆ ವಿಶ್ರಾಂತಿ ಪಡೆದರು.
ನಂತರದ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡ ಬುಮ್ರಾ ತಮ್ಮ ಲಯವನ್ನು ಇನ್ನೂ ಕಂಡುಕೊಂಡಿರಲಿಲ್ಲ. ನಂತರ ದಕ್ಷಿಣ ಆಫ್ರಿಕಾ ಸರಣಿಯಿಂದ ಅವರು ಹೊರಗುಳಿದ್ದರು. ಆದರೂ, ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವ ಭರವಸೆ ಇತ್ತು, ಅಂತಿಮವಾಗಿ ಬುಮ್ರಾ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಅಧೀಕೃತವಾಗಿ ಘೋಷಿಸಿತು.

1992ರ ಪಾಕಿಸ್ತಾನ ತಂಡವನ್ನು ನೆನಪಿಸಿಕೊಂಡ ಜಡೇಜಾ
ಬುಮ್ರಾ ಪ್ರಕರಣವನ್ನು ಚರ್ಚಿಸುವಾಗ, ಜಡೇಜಾ ಅವರು ಭಾರತೀಯ ವೇಗದ ಬೌಲರ್ನ ಗಾಯ ಮತ್ತು 1992 ರ ವಿಶ್ವಕಪ್ಗೆ ಸ್ವಲ್ಪ ಮೊದಲು ಅನುಭವಿಸಿದ ಪಾಕಿಸ್ತಾನದ ದಂತಕಥೆ ವಕಾರ್ ಯೂನಿಸ್ ಉದಾಹರಣೆ ನೀಡಿದ್ದಾರೆ. ಎರಡೂ ಸನ್ನಿವೇಶಗಳು ಒಂದೇ ರೀತಿ ಇವೆ. 1992 ರಲ್ಲಿ ತನ್ನ ಶಕ್ತಿಯ ಉತ್ತುಂಗದಲ್ಲಿದ್ದ ಯೂನಿಸ್, ಪಂದ್ಯಾವಳಿಯ ಮೊದಲು ಬೆನ್ನಿನಲ್ಲಿ ಒತ್ತಡದ ಮುರಿತವನ್ನು ಅನುಭವಿಸಿದ ನಂತರ ವಿಶ್ವಕಪ್ನಿಂದ ವಂಚಿತರಾದರು.
"30 ವರ್ಷಗಳ ಹಿಂದೆ, ಆಸ್ಟ್ರೇಲಿಯಾದಲ್ಲಿ ಮತ್ತೊಂದು ವಿಶ್ವಕಪ್ ಇತ್ತು. ವಿಶ್ವಕಪ್ ಗೆದ್ದ ತಂಡಕ್ಕೂ ಇದೇ ರೀತಿಯ ಘಟನೆ ನಡೆದಿದೆ. ಆ ಸಮಯದಲ್ಲಿ ವಕಾರ್ ಯೂನಿಸ್ ಎಂಬ ವ್ಯಕ್ತಿ ಬುಮ್ರಾ ಅವರಂತೆಯೇ ಅತ್ಯುತ್ತಮ ಬೌಲರ್ ಆಗಿದ್ದರು. ಬೆನ್ನುನೋವಿನಿಂದ ವಿಶ್ವಕಪ್ ತಂಡದಲ್ಲಿ ಆಡಲಿಲ್ಲ. ಆದರೆ ಪಾಕಿಸ್ತಾನವು ಆ ವಿಶ್ವಕಪ್ ಗೆದ್ದಿತು. ಭಾರತ ಕೂಡ ಅದೇ ರೀತಿ ಆಡುತ್ತದೆ" ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications