ರಾಹುಲ್ ಮತ್ತು ರೋಹಿತ್ ಆರಂಭಿಕರಾಗಿ ಕಣಕ್ಕೆ
ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಅವರು ಆರಂಭಿಕ ದಾಂಡಿಗರಾಗಿ ಕಣಕ್ಕೆ ಇಳಿಯುವುದು ಖಚಿತ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಅರ್ಧಶತಕ ಗಳಿಸಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಇನ್ನೂ ಫಾರ್ಮ್ಗೆ ಬರಬೇಕಿದೆ.
ವಿಶ್ವಕಪ್ ಅಭಿಯಾನಕ್ಕೂ ಮುನ್ನ ಇದುವರೆಗೆ ಆಡಿರುವ ಮೂರು ಅಭ್ಯಾಸ ಪಂದ್ಯಗಳಲ್ಲಿ ನಾಯಕ ರೋಹಿತ್ ಶರ್ಮಾ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕನ ಆಟ ಪ್ರದರ್ಶಿಸಬೇಕಾಗಿದೆ. ಈ ಮೆಗಾ ಕದನದಲ್ಲಿ ಭಾರತ ತಂಡ ಗೆಲ್ಲಬೇಕಾದರೆ ಆರಂಭಿಕರಿಬ್ಬರೂ ಉತ್ತಮ ಆರಂಭ ನೀಡಬೇಕಿದೆ. ಇನ್ನು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಏಷ್ಯಾಕಪ್ 2022ರಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಅದೇ ವೇಗವನ್ನು ಮುಂದುವರೆಸಬೇಕಿದೆ.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ರನ್-ಮಷಿನ್
ಭಾರತದ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಸೂರ್ಯಕುಮಾರ್ ಆಸ್ಟ್ರೇಲಿಯನ್ ನೆಲದಲ್ಲಿ ಎಲ್ಲಾ ಮೂರು ಅಭ್ಯಾಸ ಪಂದ್ಯಗಳಲ್ಲಿ ರನ್ ಗಳಿಸಿದರು. ಇದೇ ವೇಗವನ್ನು ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಮುಂದುವರಿಸಿದರೆ ಭಾರತಕ್ಕೆ ಗೆಲುವು ಕಷ್ಟವೇನಲ್ಲ. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಮತ್ತು ಸ್ಪಿನ್ನರ್ ಆಲ್ರೌಂಡರ್ ಅಕ್ಷರ್ ಪಟೇಲ್ ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಹಾರ್ದಿಕ್ ಪಾಂಡ್ಯ ಫಿನಿಶರ್ ಆಗಿ ಅಮೂಲ್ಯ ರನ್ ಗಳಿಸಬೇಕಿದೆ. ಬೌಲಿಂಗ್ನಲ್ಲೂ ಹೆಚ್ಚುವರಿ ಬೌಲರ್ ಆಗಿ ಬೌಲರ್ಗಳ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ. ರವೀಂದ್ರ ಜಡೇಜಾ ಕೊರತೆಯನ್ನು ಅಕ್ಷರ್ ಪಟೇಲ್ ನೀಗಿಸಿಕೊಳ್ಳಬೇಕಿದೆ. ಒಂದು ತಂಡವಾಗಿ ಸಮಗ್ರ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ಸುಲಭಸಾಧ್ಯವಾಗಿರುತ್ತದೆ.
ರಿಷಭ್ ಪಂತ್ ಬದಲಿಗೆ ದಿನೇಶ್ ಕಾರ್ತಿಕ್ ಆಯ್ಕೆ ಖಚಿತ
ಭಾರತ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ರಿಷಭ್ ಪಂತ್ ಬದಲಿಗೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಮತ್ತು ಬ್ಯಾಟಿಂಗ್ನಲ್ಲಿ ಫಿನಿಶರ್ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಕಳೆದ ಅಭ್ಯಾಸ ಪಂದ್ಯಗಳಲ್ಲಿ ರಿಷಭ್ ಪಂತ್ ದಯನೀಯವಾಗಿ ವಿಫಲರಾಗಿದ್ದರು. ಅವರು ಉತ್ತಮ ಅವಕಾಶಗಳನ್ನು ಕೈ ಚೆಲ್ಲಿದರು. ಮತ್ತೊಂದೆಡೆ ದಿನೇಶ್ ಕಾರ್ತಿಕ್ ಫಿನಿಶರ್ ಆಗಿ ತಮ್ಮ ಸಾಮರ್ಥ್ಯ ತೋರಿಸಿದರು. ಕ್ರೀಸ್ ಪ್ರವೇಶಿಸಿದ ಕೂಡಲೇ ಕಾರ್ತಿಕ್ ಮೊದಲ ಎಸೆತವನ್ನೇ ಸಿಕ್ಸರ್ಗೆ ಅಟ್ಟಿದರು.
ಇದಲ್ಲದೆ, ಕಳೆದ ಕೆಲವು ಪಂದ್ಯಗಳಲ್ಲಿ ಅವರು ಫಿನಿಶರ್ ಪಾತ್ರವನ್ನುಯ ಚೆನ್ನಾಗಿ ನಿಭಾಯಿಸಿದ್ದಾರೆ. ಡೆತ್ ಓವರ್ಗಳಲ್ಲಿ ಅವರು ತಮ್ಮ ಬ್ಯಾಟಿಂಗ್ನಿಂದ ಬೌಲರ್ಗಳನ್ನು ಕೆಟ್ಟದಾಗಿ ಕಾಡಿದರು. ಇನ್ನು ಸ್ಪಿನ್ನರ್ಗಳ ಪೈಕಿ ಯುಜ್ವೇಂದ್ರ ಚಹಾಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರಲ್ಲಿ ಒಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕಣಕ್ಕೆ ಇಳಿಯಲಿದ್ದಾರೆ. ಎದುರಾಳಿ ತಂಡದ ಸಂಯೋಜನೆ ಮತ್ತು ಪಿಚ್ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಹರ್ಷಲ್ ಪಟೇಲ್ ಅನುಮಾನ
ಭಾರತ ತಂಡದಲ್ಲಿ ಬ್ಯಾಟಿಂಗ್ ಡೆಪ್ತ್ ಬೇಕಿದ್ದರೆ, ಎದುರಾಳಿ ತಂಡದಲ್ಲಿ ಎಡಗೈ ಆಟಗಾರರೇ ಹೆಚ್ಚು ಇದ್ದರೂ ರವಿಚಂದ್ರನ್ ಅಶ್ವಿನ್ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ. ಅಂತಿಮ ಆಡುವ ಹನ್ನೊಂದರ ಬಳಗದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ವೇಗಿಗಳಾಗಿ ಅವಕಾಶ ಪಡೆಯಲಿದ್ದಾರೆ. ಪಿಚ್ ಪರಿಸ್ಥಿತಿ ಆಧರಿಸಿ ಹರ್ಷಲ್ ಪಟೇಲ್ಗೆ ಅವಕಾಶ ಸಿಗಲಿದೆ. ಪಿಚ್ಗಳು ನಿಧಾನವಾದಾಗ ಹರ್ಷಲ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಬೆಂಚ್ಗೆ ಸೀಮಿತವಾಗುವ ಸಾಧ್ಯತೆಗಳಿವೆ.
ಟಿ20 ವಿಶ್ವಕಪ್ ಭಾರತದ ಆಡುವ 11ರ ಬಳಗ (ಸಂಭಾವ್ಯ)
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್/ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್/ಹರ್ಷಲ್ ಪಟೇಲ್.