ಗೆಲುವು ಸಾಧಿಸಿದರೂ ಭಾರತಕ್ಕೆ ಅದೊಂದೇ ತಲೆನೋವು: ಕಳೆದ ವರ್ಷ ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದೆಯಾ ಭಾರತ?
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಸತತ ಎರಡು ಗೆಲುವು ಸಾಧಿಸಿದ್ದು ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. ಮೊದಲಿಗೆ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿ ಟೀಮ್ ಇಂಡಿಯಾ ಶುಭಾರಂಭ ಮಾಡಿದ್ದರೆ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು ಮಣಿಸಿ ಮಿಂಚಿದೆ. ಈ ಮೂಲಕ ಸೂಪರ್ 12 ಹಂತದ ಗ್ರೂಪ್ 2ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು ಟೀಮ್ ಇಂಡಿಯಾ ಈ ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ ಅಭಿಮಾನಿಗಳು ಹಾಗೂ ವಿಶ್ಲೇಷಕರ ಪಾಲಿಗೆ ಟೀಮ್ ಇಂಡಿಯಾದ ಪ್ರದರ್ಶನದಲ್ಲಿ ಒಂದು ಪ್ರಮುಖ ಲೋಪ ಎದ್ದು ಕಾಣಿಸುತ್ತಿದೆ. ಕಳೆದ ವಿಶ್ವಕಪ್ನಲ್ಲಿ ಮಾಡಿದ ತಪ್ಪನ್ನು ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮತ್ತೆ ಮಾಡುತ್ತಿದೆಯಾ? ಇದುವೇ ಮುಂದಿನ ಪಂದ್ಯಗಳಲ್ಲಿ ಅಥವಾ ನಿರ್ಣಾಯಕ ಹಂತದಲ್ಲಿ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಲಿದೆಯಾ ಎಂಬ ಆತಂಕ ಮೂಡಲು ಕಾರಣವಾಗುತ್ತಿದೆ.

ನಿರೀಕ್ಷಿತ ಆರಂಭ ನೀಡಲು ವಿಫಲ
ಟೀಮ್ ಇಂಡಿಯಾ ಕಳೆದ ವಿಶ್ವಕಪ್ನಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಗಿದ್ದೇ ಆರಂಭದಲ್ಲಿ ವೇಗವಾಗಿ ರನ್ಗಳಿಸಲು ವಿಫಲವಾಗಿದ್ದು. ವಿಶ್ವಕಪ್ನ ಮುಕ್ತಾಯದ ಬಳಿಕ ಈ ವಿಚಾರವನ್ನು ಟೀಮ್ ಇಂಡಿಯಾ ಗಂಭೀರವಾಗಿ ತೆಗೆದುಕೊಂಡಿತ್ತು ಹಾಗೂ ದ್ವಿಪಕ್ಷೀಯ ಸರಣಿಗಳಲ್ಲಿ ಇದರಿಂದಾಗಿ ಮೇಕುಗೈ ಸಾಧಿಸುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ ಮತ್ತೊಮ್ಮೆ ವಿಶ್ವಕಪ್ ವೇದಿಕೆಯಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾ ನಿರೀಕ್ಷಿತ ಮಟ್ಟದ ಆರಂಭ ನೀಡಲು ವಿಫಲವಾಗುತ್ತಿದೆ. ಅದರಲ್ಲೂ ಪವರ್ಪ್ಲೇನಲ್ಲಿ ಫೀಲ್ಡಿಂಗ್ ಲಾಭವನ್ನು ಪಡೆದುಕೊಂಡು ಆಕ್ರಮಣಕಾರಿಯಾಗಿ ರನ್ಗಳಿಸಲು ಭಾರತ ಮೊದಲ ಎರಡು ಪಂದ್ಯಗಳಲ್ಲಿಯೂ ವಿಫಲವಾಗಿದೆ.

ರಾಹುಲ್ ವೈಫಲ್ಯ ತಂಡಕ್ಕೆ ಹಿನ್ನಡೆ
ಟೀಮ್ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ನೀಡಲು ಮೊದಲ ಎರಡು ಪಂದ್ಯಗಳಲ್ಲಿಯೂ ವಿಫಲವಾಗಿದ್ದಾರೆ. ಆರಂಭದಿಂದಲೇ ತಿಣುಕಾಡುತ್ತಾ ಕ್ರೀಸ್ನಲ್ಲಿ ನೆಲೆಯೂರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವ ಕಾರಣ ಮದ್ಯಮ ಕ್ರಮಾಂಕದ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದು ಮಹತ್ವದ ಘಟ್ಟದಲ್ಲಿ ಪಂದ್ಯದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸತತ ಎರಡು ಪಂದ್ಯಗಳಲ್ಲಿಯೂ ಭಾರತ ಈ ವಿಚಾರವಾಗಿ ಅನುಭವಿಸಿದ ಹಿನ್ನಡೆಯನ್ನು ಮ್ಯಾನೇಜ್ಮೆಂಟ್ ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ.

ಮಹತ್ವದ ಹಂತಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿಯೇ ನಾಲ್ಕು ವಿಕೆಟ್ಗಳನ್ನು ಟೀಮ್ ಇಂಡಿಯಾ ಕಳೆದುಕೊಂಡ ಕಾರಣ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ಧಾರಿಯುತ ಪ್ರದರ್ಶನ ನೀಡಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಲ್ಲದೆ ಗೆಲುವನ್ನು ತಂದಿಕೊಟ್ಟರು. ಆದರೆ ಸ್ಕಾಟ್ಲೆಂಡ್ ವಿರುದ್ಧದ ಪ್ರದರ್ಶನ ಕೂಡ ಭಾರತದ ಅಭಿಮಾನಿಗಳ ಪಾಲಿಗೆ ಬೇಸರ ಮೂಡಿಸಿದೆ. ಅದರಲ್ಲೂ ಕೆಎಲ್ ರಾಹುಲ್ ಈ ಪಂದ್ಯದಲ್ಲಿಯೂ ರನ್ಗಳಿಸಲು ಆರಂಭದಿಂದಲೇ ತಿಣುಕಾಟ ನಡೆಸಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. 12 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 9 ರನ್ಗಳಿಗೆ ವಿಕೆಟ್ ಕಳೆದುಕೊಂಡಿದ್ದರು. ಕಳೆದ ವರ್ಷದ ವಿಶ್ವಕಪ್ನಲ್ಲಿಯೂ ಭಾರತ ತಂಡ ಇಂಥಾದ್ದೇ ತಪ್ಪು ಮಾಡಿದ ಕಾರಣದಿಂದಾಗಿ ಈ ಬಗ್ಗೆ ವಿಮರ್ಶೆ ನಡೆಸಿ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಇದು ಆರಂಭವಷ್ಟೇ..
ಹಾಗಂತ ಟೀಮ್ ಇಂಡಿಯಾ ಹೆಚ್ಚಿನ ಆತಂಕ ಪಡುವಂಥದ್ದೇನೂ ಇಲ್ಲ. ಕಳೆದ ವರ್ಷ ನಡೆದ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮಾಡಿದ ಈ ತಪ್ಪನ್ನು ಈ ಹಂತದಲ್ಲಿಯೇ ಅರ್ಥೈಸಿಕೊಂಡು ಮುಂಬರುವ ಪಂದ್ಯಗಳಿಗೆ ಸಜ್ಜಾಗಬೇಕಿದೆ. ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪವರ್ಪ್ಲೇ ಅವಧಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದರೂ ಭಾರತ ತಂಡ ಅಂತಿಮವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಈ ತಪ್ಪನ್ನು ಸರಿಪಡಿಸಿಕೊಳ್ಳುವತ್ತ ತಂಡ ಗಮನಹರಿಸಬೇಕಾಗಿದೆ. ಭಾನುವಾರ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ತಂಡಕ್ಕೆ ಪಂದ್ಯವಿದ್ದು ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿ ಭಾರತ ತಂಡಕ್ಕೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications