ಟೀಮ್ ಇಂಡಿಯಾದಲ್ಲಿ ಈ 2 ಗುಂಪುಗಳಿವೆ ಎಂದ ಅಖ್ತರ್
"ಭಾರತ ತಂಡ ಹೊಡೆದು ಇಬ್ಬಾಗವಾದಂತೆ ಕಾಣಿಸುತ್ತಿದೆ. ಹೀಗೆ ಇಬ್ಭಾಗವಾಗಿರುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಪರ 1 ತಂಡವಿದ್ದರೆ, ವಿರಾಟ್ ಕೊಹ್ಲಿ ವಿರುದ್ಧ ಮತ್ತೊಂದು ತಂಡವಿದೆ. ಹೀಗೆ 2 ತಂಡಗಳಾಗಿ ಭಾರತ ತಂಡ ಹೊಡೆದು ಹೋಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಈ ರೀತಿಯ ಬೆಳವಣಿಗೆಗಳು ತಂಡದ ಒಳಗೆ ಯಾಕೆ ಆಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಬಹುಶಃ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುವುದು ಇದೇ ಕೊನೆಯ ಟೂರ್ನಿಯಲ್ಲಿ ಎಂಬ ಕಾರಣಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಸಂಶಯ ಮೂಡುತ್ತಿದೆ. ಆದರೂ ಕೊಹ್ಲಿ ಓರ್ವ ಅತ್ಯದ್ಭುತ ಆಟಗಾರ, ಆತನಿಗೆ ಇತರ ಆಟಗಾರರು ಗೌರವವನ್ನು ನೀಡಬೇಕು" ಎಂದು ಶೋಯೆಬ್ ಅಖ್ತರ್ ಟೀಮ್ ಇಂಡಿಯಾ ಹೊಡೆದು ಇಬ್ಭಾಗವಾಗಿದೆ ಎಂಬ ಸಂಶಯವನ್ನು ಹೊರಹಾಕಿದ್ದಾರೆ.
ಟೀಕೆಗಳು ಒಳ್ಳೆಯವು ಎಂದ ಅಖ್ತರ್
ಇನ್ನು ತಂಡಗಳು ಕಳಪೆ ಪ್ರದರ್ಶನ ನೀಡಿದಾಗ ಎದುರಾಗುವ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಶೋಯೆಬ್ ಅಖ್ತರ್ ಟೀಕೆಗಳು ಒಳ್ಳೆಯವು ಎಂದಿದ್ದಾರೆ. "ನಿಜ, ಟೀಕೆಗಳು ಅತಿ ಮುಖ್ಯವಾದವು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನವನ್ನು ನೀಡಿತು ಮತ್ತು ಟೀಕೆಗೆ ಅರ್ಹವಾಯಿತು" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಟಾಸ್ ಸೋತಾಗಲೇ ಅವರ ತಲೆ ಕೆಳಗಾಗಿತ್ತು!
ಇನ್ನೂ ಮುಂದುವರೆದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಕುರಿತು ಮತ್ತಷ್ಟು ಮಾತನಾಡಿದ ಶೋಯೆಬ್ ಅಖ್ತರ್ "ಪಂದ್ಯದಲ್ಲಿ ಟಾಸ್ ಸೋತ ನಂತರ ಟೀಮ್ ಇಂಡಿಯಾ ಆಟಗಾರರ ತಲೆಗಳು ಕೆಳಗಾಗಿದ್ದವು. ಆ ಕ್ಷಣದಲ್ಲಿ ಅವರಿಗೆ ಆಟದ ಕುರಿತಾದ ಯಾವುದೇ ಯೋಜನೆಗಳು ಇರಲಿಲ್ಲ. ನೀವು ಸೋತಿದ್ದು ಕೇವಲ ಟಾಸ್ ಮಾತ್ರ, ಪಂದ್ಯವನ್ನಲ್ಲ" ಎಂದು ಟೀಮ್ ಇಂಡಿಯಾ ಆಟಗಾರರ ಕಾಲೆಳೆದಿದ್ದಾರೆ.