'ಟೀಮ್ ಇಂಡಿಯಾ ಒಳಗೆ 2 ಗುಂಪುಗಳಿವೆ'; ತಂಡದ ಸೋಲಿನ ನಂತರ ಸಂಶಯ ಹೊರಹಾಕಿದ ಮಾಜಿ ಕ್ರಿಕೆಟಿಗ

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗುವ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಂತಹ ಬಲಿಷ್ಠ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಸೆಣಸಾಟ ನಡೆಸಿ ಗೆದ್ದಿದ್ದ ಟೀಮ್ ಇಂಡಿಯಾ ಸೂಪರ್ 12 ಹಂತ ಆರಂಭವಾದ ನಂತರ ಸತತವಾಗಿ 2 ಪಂದ್ಯಗಳಲ್ಲಿ ಸೋಲುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿತು.
ಹೌದು, ಅಕ್ಟೋಬರ್ 24ರ ಭಾನುವಾರದಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ತನ್ನ ಬದ್ಧ ವೈರಿಯಾದ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಹೀನಾಯವಾದ ಸೋಲನ್ನು ಅನುಭವಿಸಿತ್ತು. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಪಾಕಿಸ್ತಾನ ವಿಶ್ವಕಪ್ ಹಣಾಹಣಿಯೊಂದರಲ್ಲಿ ಸೋಲಿಸಿದ ಮೈಲಿಗಲ್ಲನ್ನು ಈ ಪಂದ್ಯದ ಮೂಲಕ ನೆಟ್ಟಿತ್ತು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯದಲ್ಲಿಯೇ ದೊಡ್ಡ ಮಟ್ಟದ ಸೋಲನ್ನು ಕಂಡ ಟೀಮ್ ಇಂಡಿಯಾ ನಂತರ ನ್ಯೂಜಿಲೆಂಡ್ ವಿರುದ್ಧ ನಡೆದ ಮತ್ತೊಂದು ಪಂದ್ಯದಲ್ಲಿಯೂ ಸೋಲನ್ನು ಅನುಭವಿಸಿತು.
ಇನ್ನು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಕ್ಟೋಬರ್ 31ರ ಭಾನುವಾರದಂದು ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ 8 ವಿಕೆಟ್ಗಳ ಭರ್ಜರಿ ಜಯವನ್ನು ದಾಖಲಿಸಿತ್ತು. ಹೀಗೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ತನ್ನ ಎರಡನೇ ಪಂದ್ಯದಲ್ಲಿಯೂ ಸೋಲುವುದರ ಮೂಲಕ ನಿರಾಸೆಯನ್ನು ಮೂಡಿಸಿತು ಮತ್ತು ಟೀಕಾಕಾರರಿಗೆ ಆಹಾರವಾಯಿತು. ಹೀಗೆ ಟೀಮ್ ಇಂಡಿಯಾದ ಸತತ 2 ಸೋಲುಗಳ ಕುರಿತು ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಟೀಮ್ ಇಂಡಿಯಾ ಇಬ್ಭಾಗವಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಶೋಯೆಬ್ ಅಖ್ತರ್ ಈ ರೀತಿಯ ಹೇಳಿಕೆಯನ್ನು ನೀಡಲು ಕಾರಣವನ್ನು ಕೂಡ ಈ ಕೆಳಕಂಡಂತೆ ತಿಳಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ಈ 2 ಗುಂಪುಗಳಿವೆ ಎಂದ ಅಖ್ತರ್
"ಭಾರತ ತಂಡ ಹೊಡೆದು ಇಬ್ಬಾಗವಾದಂತೆ ಕಾಣಿಸುತ್ತಿದೆ. ಹೀಗೆ ಇಬ್ಭಾಗವಾಗಿರುವ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಪರ 1 ತಂಡವಿದ್ದರೆ, ವಿರಾಟ್ ಕೊಹ್ಲಿ ವಿರುದ್ಧ ಮತ್ತೊಂದು ತಂಡವಿದೆ. ಹೀಗೆ 2 ತಂಡಗಳಾಗಿ ಭಾರತ ತಂಡ ಹೊಡೆದು ಹೋಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಈ ರೀತಿಯ ಬೆಳವಣಿಗೆಗಳು ತಂಡದ ಒಳಗೆ ಯಾಕೆ ಆಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಬಹುಶಃ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುವುದು ಇದೇ ಕೊನೆಯ ಟೂರ್ನಿಯಲ್ಲಿ ಎಂಬ ಕಾರಣಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಸಂಶಯ ಮೂಡುತ್ತಿದೆ. ಆದರೂ ಕೊಹ್ಲಿ ಓರ್ವ ಅತ್ಯದ್ಭುತ ಆಟಗಾರ, ಆತನಿಗೆ ಇತರ ಆಟಗಾರರು ಗೌರವವನ್ನು ನೀಡಬೇಕು" ಎಂದು ಶೋಯೆಬ್ ಅಖ್ತರ್ ಟೀಮ್ ಇಂಡಿಯಾ ಹೊಡೆದು ಇಬ್ಭಾಗವಾಗಿದೆ ಎಂಬ ಸಂಶಯವನ್ನು ಹೊರಹಾಕಿದ್ದಾರೆ.

ಟೀಕೆಗಳು ಒಳ್ಳೆಯವು ಎಂದ ಅಖ್ತರ್
ಇನ್ನು ತಂಡಗಳು ಕಳಪೆ ಪ್ರದರ್ಶನ ನೀಡಿದಾಗ ಎದುರಾಗುವ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಶೋಯೆಬ್ ಅಖ್ತರ್ ಟೀಕೆಗಳು ಒಳ್ಳೆಯವು ಎಂದಿದ್ದಾರೆ. "ನಿಜ, ಟೀಕೆಗಳು ಅತಿ ಮುಖ್ಯವಾದವು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನವನ್ನು ನೀಡಿತು ಮತ್ತು ಟೀಕೆಗೆ ಅರ್ಹವಾಯಿತು" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಟಾಸ್ ಸೋತಾಗಲೇ ಅವರ ತಲೆ ಕೆಳಗಾಗಿತ್ತು!
ಇನ್ನೂ ಮುಂದುವರೆದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಕುರಿತು ಮತ್ತಷ್ಟು ಮಾತನಾಡಿದ ಶೋಯೆಬ್ ಅಖ್ತರ್ "ಪಂದ್ಯದಲ್ಲಿ ಟಾಸ್ ಸೋತ ನಂತರ ಟೀಮ್ ಇಂಡಿಯಾ ಆಟಗಾರರ ತಲೆಗಳು ಕೆಳಗಾಗಿದ್ದವು. ಆ ಕ್ಷಣದಲ್ಲಿ ಅವರಿಗೆ ಆಟದ ಕುರಿತಾದ ಯಾವುದೇ ಯೋಜನೆಗಳು ಇರಲಿಲ್ಲ. ನೀವು ಸೋತಿದ್ದು ಕೇವಲ ಟಾಸ್ ಮಾತ್ರ, ಪಂದ್ಯವನ್ನಲ್ಲ" ಎಂದು ಟೀಮ್ ಇಂಡಿಯಾ ಆಟಗಾರರ ಕಾಲೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications