ಆರ್ಸಿಬಿ ತಂಡದ ಪ್ರಮುಖ ವೇಗದ ಅಸ್ತ್ರವಾಗಿರುವ ಉಮೇಶ್ ಯಾದವ್ ತಂಡದ ಮೊದಲ ಎರಡೂ ಪಂದ್ಯಗಳಲ್ಲಿ ವಿಫಲವಾಗಿದ್ದಾರೆ. ಎದುರಾಳಿ ತಂಡಕ್ಕೆ ರನ್ ಬಿಟ್ಟುಕೊಡುವ ವಿಚಾರದಲ್ಲಿ ಉಮೇಶ್ ಯಾದವ್ ತಂಡಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಹೀಗಾಗಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದಾರೆ.
ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ಉಮೇಶ್ ಯಾದವ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆರ್ಸಿಬಿ ಬೌಲರ್ ಉಮೇಶ್ ಯಾದವ್ ಈ ಸಂದರ್ಭದಲ್ಲಿ ಚಿನ್ನಕ್ಕಿಂತಲೂ ದುಬಾರಿಯಾಗಿದ್ದಾರೆ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉಮೇಶ್ ಯಾದವ್ 3 ಓವರ್ಗಳಲ್ಲಿ 35 ರನ್ ಬಿಟ್ಟುಕೊಟ್ಟಿದ್ದರು.
'ಆರಂಭದಲ್ಲೇ ಉಮೇಶ್ ಯಾದವ್ ತಾನೋರ್ವ ದುಬಾರಿ ಬೌಲರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಉಮೇಶ್ ಯಾದವ್ ಅವರ ಓವರ್ಗಳು ಈ ದಿನಗಳಲ್ಲಿ ಚಿನ್ನಕ್ಕಿಂತಲೂ ದುಬಾರಿಯಾಗಿದೆ' ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
'ನನ್ನ ಶತಕಕ್ಕೆ ನಿಮ್ಮ ಇನ್ನಿಂಗ್ಸೇ ಸ್ಪೂರ್ತಿ' : ಸ್ಪೋಟಕ ಶತಕದ ಗುಟ್ಟು ಹೇಳಿದ ಕೆಎಲ್ ರಾಹುಲ್
'ಉಮೇಶ್ ಯಾದವ್ ಓರ್ವ ಸಾಮಾನ್ಯ ಬೌಲರ್ನಂತಾಗಿದ್ದಾರೆ. ಅವರು ಬ್ಯಾಟ್ಸ್ಮನ್ನ ಕಾಲುಗಳ ಮೇಲೆ ಭಾರೀ ಪ್ರಮಾಣದಲ್ಲಿ ಎಸೆತಗಳನ್ನು ಹಾಕುತ್ತಿದ್ದಾರೆ. ಇಷ್ಟು ಉಡುಗೊರೆಗಳು ದೀಪಾವಳಿ ಸಂದರ್ಭದಲ್ಲೂ ದೊರೆಯಲಾರದು. ಭಾರತ ತಂಡದ ಬೌಲರ್ ಆಗಿ ಉಮೇಶ್ ಯಾದವ್ ಅವರಿಂದ ನಾವು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲರ್ಗಳಾದ ನವ್ದೀಪ್ ಸೈನಿ ಹಾಗೂ ಯುಜುವೇಂದ್ರ ಚಾಹಲ್ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಕೊನೆಯ 7 ಓವರ್ಗಳು ಇರುವಾಗ ಈ ಇಬ್ಬರು ಕೂಡ ತಲಾ ಒಂದು ಓವರ್ಮಾತ್ರವೇ ಉಳಿಸಿಕೊಂಡಿದ್ದರು. ಮ್ಯಾಕ್ಸ್ವೆಲ್ ಕ್ರೀಸ್ಗೆ ಇನ್ನೂ ಬರಬೇಕಾಗಿತ್ತು, ಕೆಎಲ್ ಅದ್ಭುರವಾಗಿ ಆಡುತ್ತಿದ್ದರು. ಆದರೆ ನೀವು ಅದಾಗಲೇ ಮುಖ್ಯ ಬೌಲರ್ಗಳ ಓವರ್ಗಳನ್ನು ಬಹುತೇಕ ಮುಗಿಸಿದ್ದಿರಿ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.