
ಕೊಲಂಬೋ, ಫೆಬ್ರವರಿ 27: ಶ್ರೀಲಂಕಾದ ಮಾಜಿ ನಾಯಕ, ಒಂದು ಕಾಲದ ಸ್ಫೋಟಕ ಬ್ಯಾಟ್ಸ್ಮನ್ ಸನತ್ ಜಯಸೂರ್ಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು 2 ವರ್ಷ ನಿಷೇಧ ಹೇರಿದ ಸುದ್ದಿ ಓದಿರಬಹುದು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸನತ್, ಇದು ದುರಾದೃಷ್ಟಕರ, ಭ್ರಷ್ಟಾಚಾರ, ಮಾಹಿತಿ ಸೋರಿಕೆ ಬಗ್ಗೆ ನನ್ನ ವಿರುದ್ಧ ಸಾಕ್ಷ್ಯವಿಲ್ಲದಿದ್ದರೂ ಐಸಿಸಿ ಈ ರೀತಿ ಕ್ರ್ಮ ಕೈಗೊಂಡಿದೆ ಎಂದಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿರುವುದನ್ನು ಸ್ವತಃ ಜಯಸೂರ್ಯ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದರು. ಆದರೆ, ಐಸಿಸಿ ನಿಯಮ 2.4.6 ಹಾಗೂ 2.4.7 ಉಲ್ಲಂಘನೆ ಕುರಿತಂತೆ ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ. ಆದರೆ, ವಿಚಾರಣೆಗೆ ಸನತ್ ಸಹಕರಿಸಿಲ್ಲ, ಮೊಬೈಲ್ ಸಾಕ್ಷ್ಯವನ್ನು ನೀಡಿಲ್ಲ ಎಂದು ಪ್ರತಿವಾದ ಮಾಡಿ, ಅವರನ್ನು 2 ವರ್ಷ ಕಾಲ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಯಿಂದ ದೂರವಿಡುವ ನಿರ್ಧಾರ ಕೈಗೊಂಡಿದೆ.
ಸನತ್ ಮೇಲಿನ ನಿಷೇಧ ಶಿಕ್ಷೆಯು 2018ರ ಅಕ್ಟೋಬರ್ 16ರಿಂದಲೇ ಅನ್ವಯಿಸಲಿದೆ. ಈ ಪ್ರಕರಣದಲ್ಲಿ ಗರಿಷ್ಠ 5 ವರ್ಷ ನಿಷೇಧ ಹೇರಲು ಅವಕಾಶವಿತ್ತು.ಐಸಿಸಿ-ಎಸಿಯು, ಜಯಸೂರ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿತ್ತು. ತನಿಖೆಯ ವೇಳೆ ಅವರು ತಮ್ಮಲ್ಲಿದ್ದ ಮೊಬೈಲ್ ಹಸ್ತಾಂತರಿಸಲು ನಿರಾಕರಿಸಿದ್ದರು
1996ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿರುವ 49 ವರ್ಷದ ಮಾಜಿ ನಾಯಕ ಜಯಸೂರ್ಯ, ಶ್ರೀಲಂಕಾದ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ 2017ರ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯ ವೇಳೆ ಬೆಟ್ಟಿಂಗ್-ಮಾಹಿತಿ ಸೋರಿಕೆಯಂಥ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪಗಳು ಕೇಳಿ ಬಂದಿತ್ತು.
ಈ ಕುರಿತಂತೆ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು)ವರು ನಡೆಸಿದ ತನಿಖೆ, ವಿಚಾರಣೆಗೆ ಸಹಕಾರ ನೀಡದಿರುವುದಲ್ಲದೆ, ಸಂಬಂಧಿತ ದಾಖಲೆಗಳನ್ನು ನಾಶ ಮತ್ತು ವಿರೂಪಗೊಳಿಸಿರುವ ಆರೋಪವನ್ನುಎದುರಿಸುತ್ತಿದ್ದರು. ಲಂಕಾ ಪರ 110 ಟೆಸ್ಟ್, 445 ಏಕದಿನ ಮತ್ತು 31 ಟಿ20 ಪಂದ್ಯ ಆಡಿರುವ ಜಯಸೂರ್ಯ, 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ.