
ಭಾರತ ಹಿರಿಯರ ಕ್ರಿಕೆಟ್ ತಂಡ 2022ರ ಏಷ್ಯಾಕಪ್ ಮತ್ತು 2022ರ ಟಿ20 ವಿಶ್ವಕಪ್ ಸೋಲಿನ ನಂತರ ಚೇತನ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾಗೊಳಿಸಿತು.
ಅಂದಿನಿಂದ ಹೊಸ ಆಯ್ಕೆಗಾರರನ್ನು ಹುಡುಕುತ್ತಿರುವ ಬಿಸಿಸಿಐ, ಆಯ್ಕೆ ಸಮಿತಿಗೆ ಸೇರಲು ಅರ್ಜಿ ಆಹ್ವಾನಿಸಿತ್ತು. ಇದೀಗ ಕೆಲವು ಬಿಸಿಸಿಐ ಮೂಲಗಳ ಪ್ರಕಾರ, ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಚೇತನ್ ಶರ್ಮಾ ಬದಲಿಗೆ ಭಾರತ ಹಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಹೊಸ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ತಂಡದ ಹೊಸ ಆಯ್ಕೆ ಸಮಿತಿಯ ಆಯ್ಕೆಗಾರರಲ್ಲಿ ಒಬ್ಬರಾಗಲು, ಬಿಸಿಸಿಐ ಟಿ20 ತಜ್ಞರನ್ನು ಹುಡುಕುತ್ತಿದೆ ಎಂದು ವರದಿಯಾಗಿದೆ.

ಕರ್ನಾಟಕ ಮೂಲದ ವೆಂಕಟೇಶ್ ಪ್ರಸಾದ್ ಭಾರತದ ಪರ 33 ಟೆಸ್ಟ್ ಮತ್ತು 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 290 ಅಂತಾರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ. ವೆಂಕಟೇಶ್ ಪ್ರಸಾದ್ ಅವರು ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಿದ ಅತ್ಯಂತ ಅನುಭವಿ ಕ್ರಿಕೆಟಿಗರಾಗಿದ್ದಾರೆ. ಅದಕ್ಕಾಗಿಯೇ ಅವರು ಉನ್ನತ ಹುದ್ದೆಯನ್ನು ಪಡೆಯಲು ಮುಂಚೂಣಿ ಸ್ಥಾನದಲ್ಲಿದ್ದಾರೆ.
ಭಾರತೀಯ ಹಿರಿಯರ ಕ್ರಿಕೆಟ್ ತಂಡವು ಇತ್ತೀಚಿನ ದಿನಗಳಲ್ಲಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಏಷ್ಯಾ ಕಪ್ 2022, ಟಿ20 ವಿಶ್ವಕಪ್ 2022 ಟೂರ್ನಿಯನ್ನು ಕಳೆದುಕೊಂಡಿದೆ. ಅಲ್ಲದೇ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋಲು ಕಳಪೆ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ND vs BAN: ಭಾರತದ ಬೌಲಿಂಗ್ ಥರ್ಡ್ ಕ್ಲಾಸ್ ಆಗಿತ್ತು; ಪಾಕ್ ಮಾಜಿ ಕ್ರಿಕೆಟಿಗ ಟೀಕೆ
ಮುಂಬರುವ ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ಪಂದ್ಯಾವಳಿಗೆ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಎದುರು ನೋಡುತ್ತಿರುವ ಬಿಸಿಸಿಐ, ಅಷ್ಟೇ ಉತ್ತಮ ಆಯ್ಕೆಗಾರರನ್ನು ಹುಡುಕುತ್ತಿದೆ.

"ಹೊಸ ಆಯ್ಕೆ ಸಮಿತಿಯನ್ನು ಡಿಸೆಂಬರ್ ಅಂತ್ಯಕ್ಕೂ ಮೊದಲೇ ನಿರ್ಧರಿಸಿ ಪ್ರಕಟಿಸಲಾಗುವುದು. ವೆಂಕಟೇಶ್ ಪ್ರಸಾದ್ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಅತ್ಯಂತ ಅನುಭವಿ ಕ್ರಿಕೆಟಿಗರಲ್ಲಿ ಒಬ್ಬರು. ಹೊಸ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಔಪಚಾರಿಕ ಚರ್ಚೆಗಳು ನಡೆದಿಲ್ಲ, ಆದರೆ ಅವರು ಎಲ್ಲರಿಂದ ವಿಶ್ವಾಸ ಮತ ಪಡೆಯುವ ಸಾಧ್ಯತೆಯಿದೆ," ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನು ಒಳಗೊಂಡ ಹೊಸ ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ನೀಡಿದ ಸಂಕ್ಷಿಪ್ತ ಮಾಹಿತಿಯು ತಂಡವನ್ನು ಪುನರ್ನಿರ್ಮಾಣ ಮಾಡುವ ದೃಷ್ಟಿಕೋನದಿಂದ ಆಯ್ಕೆಗಾರರನ್ನು ಆಯ್ಕೆ ಮಾಡುವ ಉದ್ದೇಶವಾಗಿದೆ.