ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಶ್ವಕಪ್ ಗೆಲ್ಲಲ್ಲ; ವಿಶ್ವಕಪ್ ವಿಜೇತ ಮಾಜಿ ನಾಯಕನ ಶಾಕಿಂಗ್ ಹೇಳಿಕೆ!

ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳಿಂದ ಸೋತ ನಂತರ ಭಾರತ ಕ್ರಿಕೆಟ್ ತಂಡ ಐಸಿಸಿ ಟ್ರೋಫಿಯನ್ನು ಗೆಲ್ಲಲು ಮತ್ತೊಮ್ಮೆ ವಿಫಲವಾಯಿತು. ಹೀಗಾಗಿ ಐಸಿಸಿ ಚಾಂಪಿಯನ್ ಪಟ್ಟಕ್ಕಾಗಿ ಟೀಂ ಇಂಡಿಯಾದ ಕಾಯುವಿಕೆಯನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದೆ.
ಭಾರತವು ಕೊನೆಯದಾಗಿ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ಗೆ ತಲುಪಿದಾಗಿನಿಂದ, ಭಾರತ ತಂಡ ಪ್ರಶಸ್ತಿ ಜಯಗಳಿಸಿ ಸುಮಾರು ಹತ್ತು ವರ್ಷಗಳಾದವು. ಅಲ್ಲಿಂದೀಚೆಗೆ ಭಾರತ ತಂಡವು ಹಲವಾರು ಫೇವರಿಟ್ ತಂಡವಾಗಿ ಪಂದ್ಯಾವಳಿಗಳಿಗೆ ಪ್ರವೇಶಿಸಿದರೂ, ಸೆಮಿಫೈನಲ್ನಿಂದ ಪ್ರಶಸ್ತಿ ಸುತ್ತಿಗೆ ತಲುಪಲು ಸಾಧ್ಯವಾಗಲಿಲ್ಲ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ. ಇದೇ ವೇಳೆ ಮೆನ್ ಇನ್ ಬ್ಲೂ ತಮ್ಮ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಲು ಎದುರು ನೋಡುತ್ತಿದೆ.

ರೋಹಿತ್, ಕೊಹ್ಲಿಯಂತಹ ಆಟಗಾರರನ್ನು ಅವಲಂಬಿಸುವುದಿಲ್ಲ
ಇದೇ ವೇಳೆ 1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮತ್ತು ಮಾಜಿ ಆಲ್ರೌಂಡರ್ ಕಪಿಲ್ ದೇವ್ ಪ್ರಕಾರ, ಭಾರತ ತಂಡವು ಐಸಿಸಿ ಟೂರ್ನಿಗಳನ್ನು ಗೆಲ್ಲಲು ಕೇವಲ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಅವಲಂಬಿಸುವುದಿಲ್ಲ ಎಂದಿದ್ದಾರೆ.
ಎರಡು ಅಥವಾ ಮೂರು ಪ್ರಮುಖ ಆಟಗಾರರ ಸುತ್ತ ತಂಡವನ್ನು ನಿರ್ಮಿಸಬಹುದು ಎಂದು ಒಪ್ಪಿಕೊಂಡ ಕಪಿಲ್ ದೇವ್, ಆದರೆ ಅವರು ಯಶಸ್ಸಿನ ವಿಶೇಷ ಮೂಲವೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.

ಇಬ್ಬರಿಂದ ವಿಶ್ವಕಪ್ ಗೆಲ್ಲುತ್ತಾರೆಂದರೆ ಅದು ಎಂದಿಗೂ ಸಂಭವಿಸುವುದಿಲ್ಲ
ಎಬಿಪಿ ನ್ಯೂಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಮಾಜಿ ಭಾರತ ತಂಡದ ನಾಯಕ ಕಪಿಲ್ ದೇವ್, "ನೀವು ವಿಶ್ವಕಪ್ ಗೆಲ್ಲಲು ಬಯಸಿದರೆ, ಕೋಚ್, ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಮತ್ತು ಅವರು ತಂಡದ ಬಗ್ಗೆ ಯೋಚಿಸಬೇಕು," ಎಂದು ಹೇಳಿದ್ದಾರೆ.
"ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ 2-3 ಆಟಗಾರರು ನಮಗೆ ವಿಶ್ವಕಪ್ ಗೆಲ್ಲುತ್ತಾರೆ ಎಂದು ನೀವು ಭಾವಿಸಿದರೆ ಅದು ಎಂದಿಗೂ ಸಂಭವಿಸುವುದಿಲ್ಲ. ಮೊದಲು ನಿಮ್ಮ ತಂಡವನ್ನು ನೀವು ನಂಬಬೇಕು. ನಮ್ಮಲ್ಲಿ ಅಂತಹ ತಂಡವಿದೆಯೇ? ಖಂಡಿತವಾಗಿ ಇಲ್ಲ. ನಾವು ಕೆಲವು ಪಂದ್ಯ ವಿಜೇತರನ್ನು ಹೊಂದಿದ್ದೇವೆಯೇ? ಹೌದು ಖಚಿತವಾಗಿ, ವಿಶ್ವಕಪ್ ಗೆಲ್ಲಬಲ್ಲ ಆಟಗಾರರು ನಮ್ಮಲ್ಲಿದ್ದಾರೆ," ಎಂದರು.

ವಿಶ್ವಕಪ್ ಗೆಲ್ಲುವ ಆಟಗಾರರ ಸಾಮರ್ಥ್ಯದ ಮೇಲೆ ನಿಂತಿದೆ
ಯುವ ಪೀಳಿಗೆಯ ಆಟಗಾರರು ನಿರ್ಣಾಯಕ ಪಂದ್ಯಗಳಲ್ಲಿ ಆಡಬೇಕಾಗುತ್ತದೆ ಎಂದು ಹೇಳಿರುವ ಕಪಿಲ್ ದೇವ್, ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆಲ್ಲುವ ಆಟಗಾರರ ಸಾಮರ್ಥ್ಯದ ಮೇಲೆ ನಿಂತಿದೆ ಹೊರತು, ಕೇವಲ ಒಬ್ಬರು ಅಥವಾ ಇಬ್ಬರು ಸ್ಟಾರ್ ಆಟಗಾರರನ್ನು ಅವಲಂಬಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
"ಭಾರತ ತಂಡಕ್ಕೆ ಆಧಾರ ಸ್ತಂಭವಾಗಲು ಯಾವಾಗಲೂ ಒಂದೆರಡು ಆಟಗಾರರು ಇರುತ್ತಾರೆ. ತಂಡವು ಕೇವಲ ಅವರ ಸುತ್ತ ಸುತ್ತುತ್ತದೆ. ಆದರೆ ನಾವು ಅದನ್ನು ಮುರಿದು ಕನಿಷ್ಠ 5-6 ಬಲಿಷ್ಠ ಆಟಗಾರರನ್ನು ನಿರ್ಮಿಸಬೇಕಾಗಿದೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ನೀವು ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ, ಏಕೆಂದರೆ ತಂಡ ವಿರಾಟ್ ಮತ್ತು ರೋಹಿತ್ ಅವರ ಮೇಲೆ ಅವಲಂಬಿತವಾಗಿದೆ. ತಂಡದ ಪ್ರತಿಯೊಂದು ಜವಾಬ್ದಾರಿಯನ್ನು ಪೂರೈಸುವ ಆಟಗಾರರು ಬೇಕು. ಯುವ ಆಟಗಾರರು ಮುಂದೆ ಬಂದು 'ಇದು ನಮ್ಮ ಸಮಯ' ಎಂದು ಹೇಳಬೇಕು," ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದರು.
ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳು ಮಂಗಳವಾರ (ಜನವರಿ 10), ಗುರುವಾರ (ಜನವರಿ 12) ಮತ್ತು ಭಾನುವಾರ (ಜನವರಿ 15) ರಂದು ಕ್ರಮವಾಗಿ ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರದಲ್ಲಿ ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications