ರೋಹಿತ್, ಕೊಹ್ಲಿಯಂತಹ ಆಟಗಾರರನ್ನು ಅವಲಂಬಿಸುವುದಿಲ್ಲ
ಇದೇ ವೇಳೆ 1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮತ್ತು ಮಾಜಿ ಆಲ್ರೌಂಡರ್ ಕಪಿಲ್ ದೇವ್ ಪ್ರಕಾರ, ಭಾರತ ತಂಡವು ಐಸಿಸಿ ಟೂರ್ನಿಗಳನ್ನು ಗೆಲ್ಲಲು ಕೇವಲ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಅವಲಂಬಿಸುವುದಿಲ್ಲ ಎಂದಿದ್ದಾರೆ.
ಎರಡು ಅಥವಾ ಮೂರು ಪ್ರಮುಖ ಆಟಗಾರರ ಸುತ್ತ ತಂಡವನ್ನು ನಿರ್ಮಿಸಬಹುದು ಎಂದು ಒಪ್ಪಿಕೊಂಡ ಕಪಿಲ್ ದೇವ್, ಆದರೆ ಅವರು ಯಶಸ್ಸಿನ ವಿಶೇಷ ಮೂಲವೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದರು.
ಇಬ್ಬರಿಂದ ವಿಶ್ವಕಪ್ ಗೆಲ್ಲುತ್ತಾರೆಂದರೆ ಅದು ಎಂದಿಗೂ ಸಂಭವಿಸುವುದಿಲ್ಲ
ಎಬಿಪಿ ನ್ಯೂಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಮಾಜಿ ಭಾರತ ತಂಡದ ನಾಯಕ ಕಪಿಲ್ ದೇವ್, "ನೀವು ವಿಶ್ವಕಪ್ ಗೆಲ್ಲಲು ಬಯಸಿದರೆ, ಕೋಚ್, ಆಯ್ಕೆದಾರರು ಮತ್ತು ತಂಡದ ಮ್ಯಾನೇಜ್ಮೆಂಟ್ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಮತ್ತು ಅವರು ತಂಡದ ಬಗ್ಗೆ ಯೋಚಿಸಬೇಕು," ಎಂದು ಹೇಳಿದ್ದಾರೆ.
"ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ 2-3 ಆಟಗಾರರು ನಮಗೆ ವಿಶ್ವಕಪ್ ಗೆಲ್ಲುತ್ತಾರೆ ಎಂದು ನೀವು ಭಾವಿಸಿದರೆ ಅದು ಎಂದಿಗೂ ಸಂಭವಿಸುವುದಿಲ್ಲ. ಮೊದಲು ನಿಮ್ಮ ತಂಡವನ್ನು ನೀವು ನಂಬಬೇಕು. ನಮ್ಮಲ್ಲಿ ಅಂತಹ ತಂಡವಿದೆಯೇ? ಖಂಡಿತವಾಗಿ ಇಲ್ಲ. ನಾವು ಕೆಲವು ಪಂದ್ಯ ವಿಜೇತರನ್ನು ಹೊಂದಿದ್ದೇವೆಯೇ? ಹೌದು ಖಚಿತವಾಗಿ, ವಿಶ್ವಕಪ್ ಗೆಲ್ಲಬಲ್ಲ ಆಟಗಾರರು ನಮ್ಮಲ್ಲಿದ್ದಾರೆ," ಎಂದರು.
ವಿಶ್ವಕಪ್ ಗೆಲ್ಲುವ ಆಟಗಾರರ ಸಾಮರ್ಥ್ಯದ ಮೇಲೆ ನಿಂತಿದೆ
ಯುವ ಪೀಳಿಗೆಯ ಆಟಗಾರರು ನಿರ್ಣಾಯಕ ಪಂದ್ಯಗಳಲ್ಲಿ ಆಡಬೇಕಾಗುತ್ತದೆ ಎಂದು ಹೇಳಿರುವ ಕಪಿಲ್ ದೇವ್, ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆಲ್ಲುವ ಆಟಗಾರರ ಸಾಮರ್ಥ್ಯದ ಮೇಲೆ ನಿಂತಿದೆ ಹೊರತು, ಕೇವಲ ಒಬ್ಬರು ಅಥವಾ ಇಬ್ಬರು ಸ್ಟಾರ್ ಆಟಗಾರರನ್ನು ಅವಲಂಬಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
"ಭಾರತ ತಂಡಕ್ಕೆ ಆಧಾರ ಸ್ತಂಭವಾಗಲು ಯಾವಾಗಲೂ ಒಂದೆರಡು ಆಟಗಾರರು ಇರುತ್ತಾರೆ. ತಂಡವು ಕೇವಲ ಅವರ ಸುತ್ತ ಸುತ್ತುತ್ತದೆ. ಆದರೆ ನಾವು ಅದನ್ನು ಮುರಿದು ಕನಿಷ್ಠ 5-6 ಬಲಿಷ್ಠ ಆಟಗಾರರನ್ನು ನಿರ್ಮಿಸಬೇಕಾಗಿದೆ. ಅದಕ್ಕಾಗಿಯೇ ನಾನು ಹೇಳುತ್ತೇನೆ, ನೀವು ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ, ಏಕೆಂದರೆ ತಂಡ ವಿರಾಟ್ ಮತ್ತು ರೋಹಿತ್ ಅವರ ಮೇಲೆ ಅವಲಂಬಿತವಾಗಿದೆ. ತಂಡದ ಪ್ರತಿಯೊಂದು ಜವಾಬ್ದಾರಿಯನ್ನು ಪೂರೈಸುವ ಆಟಗಾರರು ಬೇಕು. ಯುವ ಆಟಗಾರರು ಮುಂದೆ ಬಂದು 'ಇದು ನಮ್ಮ ಸಮಯ' ಎಂದು ಹೇಳಬೇಕು," ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದರು.
ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳು ಮಂಗಳವಾರ (ಜನವರಿ 10), ಗುರುವಾರ (ಜನವರಿ 12) ಮತ್ತು ಭಾನುವಾರ (ಜನವರಿ 15) ರಂದು ಕ್ರಮವಾಗಿ ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರದಲ್ಲಿ ನಡೆಯಲಿವೆ.