
ಬೆಂಗಳೂರು, ಮೇ 24: ಕಳಪೆ ಪ್ರದರ್ಶನದಿಂದ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ಹತ್ತು ವರ್ಷ ಕಳೆದರೂ ಇದುವರೆಗೂ ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಈ ಬಾರಿಯಂತೂ ತಂಡದಲ್ಲಿ ಪ್ರಸಿದ್ಧ ಆಟಗಾರರ ದಂಡು ಇರುವುದನ್ನು ಕಂಡು ಹುರುಪುಗೊಂಡಿದ್ದ ಅಭಿಮಾನಿಗಳು ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಹೊಂದಿದ್ದರು. ಆದರೆ, ಅದನ್ನೂ ಹುಸಿಯಾಗಿಸಿ ಆರ್ಸಿಬಿ ಹೀನಾಯ ಪ್ರದರ್ಶನ ನೀಡಿತು.
ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತ ಆರ್ಸಿಬಿ ಅಭಿಮಾನಿಗಳಿಗಳಲ್ಲಿ ನಾಯಕ ಕ್ಷಮೆ ಕೋರಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು, ಹೆಚ್ಚು ಪ್ರಬಲವಾಗಿ ಪುಟಿದೇಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.
'ಈ ಆವೃತ್ತಿಯಲ್ಲಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಆವೃತ್ತಿಯಲ್ಲಿ ನಮ್ಮ ಆಟದ ಬಗ್ಗೆ ಹೆಮ್ಮೆ ಇಲ್ಲ. ನಾವು ಆಡಿದ ರೀತಿ ಕುರಿತು ನನಗೆ ತೀವ್ರ ನೋವಾಗಿದೆ. ಎಲ್ಲ ಅಭಿಮಾನಿಗಳೂ ನಮ್ಮ ಮೇಲೆ ಇಟ್ಟಿದ್ದ ನಿರೀಕ್ಷೆಯ ಮಟ್ಟಕ್ಕೆ ಆಡದೆ ಇರುವುದಕ್ಕೆ ಕ್ಷಮೆ ಕೇಳುತ್ತೇನೆ' ಎಂದು ಕೊಹ್ಲಿ ಟ್ವಿಟ್ಟರ್ನ ವಿಡಿಯೊದಲ್ಲಿ ಹೇಳಿದ್ದಾರೆ.
'ಇವೆಲ್ಲವೂ ಜೀವನದ ಒಂದು ಭಾಗ. ನೀವು ಬಯಸಿದ್ದನ್ನು ಯಾವಾಗಲೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಮುಂದಿನ ಆವೃತ್ತಿಯಲ್ಲಿ ಏನು ಮಾಡಬೇಕು ಎನ್ನುವುದನ್ನು ಆಟಗಾರರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಆವೃತ್ತಿಯ ವೇಳೆಗೆ ಎಲ್ಲ ಸನ್ನಿವೇಶವನ್ನೂ ಬದಲಿಸಲು ನಿಜಕ್ಕೂ ಬಯಸಿದ್ದೇನೆ.
ಪ್ರತಿ ಆವೃತ್ತಿಯಲ್ಲಿಯೂ ನೀವು ಏನನ್ನು ಬಯಸುತ್ತಿದ್ದೀರೋ ಎಲ್ಲವನ್ನೂ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಖಂಡಿತವಾಗಿಯೂ ಮಾಡುತ್ತೇವೆ. ನಮ್ಮ ಆಟದ ಬಗ್ಗೆ ಕಠಿಣ ಶ್ರಮ ವಹಿಸುವುದನ್ನು ಮುಂದುವರಿಸುತ್ತೇವೆ ಮತ್ತು ಒಂದು ತಂಡವಾಗಿ ಸುಧಾರಿಸಿಕೊಳ್ಳುತ್ತೇವೆ.
ನಿಮ್ಮ ಬೆಂಬಲಕ್ಕೆ ನಾವು ನಿಜಕ್ಕೂ ಕೃತಜ್ಞರಾಗಿರುತ್ತೇವೆ. ಯಾವಾಗಲೂ ಬೆಂಬಲ ನೀಡುವಂತೆ ತಂಡವನ್ನು ಮುಂದೆಯೂ ಬೆಂಬಲಿಸಿ. ನಾವು ಆರ್ಸಿಬಿಗಾಗಿ ಇದುವರೆಗೂ ಮಾಡಿದ್ದಕ್ಕಿಂತಲೂ ಮುಂದಿನ ವರ್ಷ ಹೆಚ್ಚು ಪ್ರಯತ್ನ ಹಾಗೂ ಪರಿಶ್ರಮವನ್ನು ಹಾಕುತ್ತೇವೆ ಎಂದು ಕೊಹ್ಲಿ ಭರವಸೆ ನೀಡಿದ್ದಾರೆ.