ಕೋಲ್ಕತ್ತಾ, ನವೆಂಬರ್ 14: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಡನ್ ಗಾರ್ಡನ್ ಮೈದಾನದಲ್ಲಿ ಅಭ್ಯಾಸ ನಿರತವಾಗಿದೆ. ಈ ವೇಳೆ ಮೈದಾನದಲ್ಲಿದ್ದ ಟಿವಿ ಸಿಬ್ಬಂದಿಗೆ ಪೆಟ್ಟು ತಗುಲಿದೆ. ತಕ್ಷಣವೇ ನಾಯಕ ಕೊಹ್ಲಿ ವಿರಾಟ್ ಕೊಹ್ಲಿ ನೆರವಿಗೆ ಧಾವಿಸಿ, ಗಮನ ಸೆಳೆದಿದ್ದಾರೆ.
ಪ್ರವಾಸಿ ಶ್ರೀಲಂಕಾ ತಂಡ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾದ ಆಟಗಾರರು, ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ವಿರಾಟ್ ನೆಟ್ ಪ್ರಾಕ್ಟಿಸ್ನಲ್ಲಿ ತೊಡಗಿದ್ದಾಗ, ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಶಮಿ ಎಸೆದ ಚೆಂಡು ಆಕಸ್ಮಿಕವಾಗಿ ಅಲ್ಲಿದ್ದ ಟಿವಿ ವರದಿಗಾರರೊಬ್ಬರಿಗೆ ಬಡಿದಿದೆ.
ಕೊಹ್ಲಿ ಬ್ಯಾಟಿಂಗ್ ದೃಶ್ಯಗಳನ್ನು ಸೆರೆ ಹಿಡಿಯಲು ಬಂದಿದ್ದ ಟಿವಿ ಸಿಬ್ಬಂದಿಯ ಹಣೆಗೆ ಚೆಂಡು ತಗುಲಿದೆ. ತಕ್ಷಣವೇ ಬ್ಯಾಟಿಂಗ್ ನಿಲ್ಲಿಸಿದ ಕೊಹ್ಲಿ, ಸಿಬ್ಬಂದಿ ಬಳಿ ತೆರಳಿ ಪ್ರಥಮ ಚಿಕಿತ್ಸೆ ನೀಡಿದರು.
ಬಳಿಕ ತಂಡದ ಫಿಜಿಯೋ ಕರೆಸಿ, ನೆರವನ್ನು ನೀಡಲಾಯಿತು. ಟಿವಿ ಸಿಬ್ಬಂದಿ ಕ್ಷೇಮವನ್ನು ವಿಚಾರಿಸಿ, ಏನು ತೊಂದರೆ ಇಲ್ಲ ಎಂದು ಖಾತ್ರಿಯಾದ ಬಳಿಕ ಕೊಹ್ಲಿ, ತಮ್ಮ ಬ್ಯಾಟಿಂಗ್ ಅಭ್ಯಾಸದಲ್ಲಿ ಮುಂದುವರಿಸಿದರು,
ಇದಕ್ಕೂ ಮುನ್ನ ಕಾರ್ಪೆಂಟರ್ ರೊಬ್ಬರನ್ನು ಕರೆದು ತಮ್ಮ ಬ್ಯಾಟಿನ ಬ್ಲೇಡ್ ಕತ್ತರಿಸುವಂತೆ ಕೋಹ್ಲಿ ಸೂಚಿಸಿದರು. ಕಡಿಮೆ ಅಂತರದ ಹ್ಯಾಂಡಲ್ ಹೊಂದಲು ಕೊಹ್ಲಿ ಮುಂದಾಗಿದ್ದಾರೆ.
ಫೆಬ್ರವರಿ 9ರಂದು ಹೈದರಾಬಾದಿನಲ್ಲಿ ಬಾಂಗ್ಲಾದೇಶ ವಿರುದ್ಧ 204ರನ್ ಸಿಡಿಸಿದ್ದ ಕೊಹ್ಲಿ ಅವರು ಕಳೆದ 6 ಟೆಸ್ಟ್ ಇನ್ನಿಂಗ್ಸ್ ಗಳಲ್ಲಿ 42, 13, 3, 6, 12 ಹಾಗೂ 0 ಗಳಿಸಿದ್ದಾರೆ.(ಪಿಟಿಐ)