ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಹೆಡಿಂಗ್ಲೆಯಲ್ಲಿ ನಡೆದಿದ್ದು ಈ ಪಂದ್ಯವನ್ನು ಟೀಮ್ ಇಂಡಿಯಾ ಸೋತಿದೆ. ಇನ್ನಿಂಗ್ಸ್ ಹಾಗೂ 76 ರನ್ಗಳ ಅಂತರ ಬೃಹತ್ ಸೋಲು ಕಂಡ ಟೀಮ್ ಇಂಡಿಯಾ ಸರಣಿಯಲ್ಲಿ ಮೊದಲ ಬಾರಿಗೆ ಆಘಾತ ಅನುಭವಿಸಿದೆ. ಈ ಮೂಲಕ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ. ಹೆಡಿಂಗ್ಲೆ ಟೆಸ್ಟ್ ಪಂದ್ಯವನ್ನು ಭಾರತ ಸೋತಿದ್ದರೂ ಟೀಮ್ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್ನಲ್ಲಿ ನೀಡಿದ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸ್ವಲ್ಪ ಸಮಾಧಾನ ತಂದಿದೆ.
ಟೀಮ್ ಇಂಡಿಯಾದ ಅನುಭವಿ ಆಟಗಾರನ ಈ ಪ್ರದರ್ಶನಕ್ಕೆ ಭಾರತದ ಮಾಜಿ ಆಟಗಾರ ಕೂಡ ತಲೆದೂಗಿದ್ದಾರೆ. ಭಾರತೀಯ ಕ್ರಿಕೆಟ್ನ 'ವೆರಿ ವೆರಿ ಸ್ಪೆಶಲ್' ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಚೇತೇಶ್ವರ್ ಪೂಜಾರ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಸಾಕಷ್ಟು ಒತ್ತಡದ ಮಧ್ಯೆಯೂ ಪೂಜಾರ ಹೊಂದಿದ್ದ ಮನಸ್ಥಿತಿಯ ಬಗ್ಗೆ ಲಕ್ಷ್ಮಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ನನಗೆ ಎರಡನೇ ಇನ್ನಿಂಗ್ಸ್ನಲ್ಲಿ ಪೂಜಾರ ಮನಸ್ಥಿತಿಯ ಬಗ್ಗೆ ಮೆಚ್ಚುಗೆಯಾಯಿತು. ಯಾಕೆಂದರೆ ಚೆಂಡು ಯಾವಾಗೆಲ್ಲಾ ರನ್ಗಳಿಸಲು ಅವಕಾಶವನ್ನು ನೀಡುತ್ತಿತ್ತೋ ಆ ಸಂದರ್ಭವನ್ನು ಪೂಜಾರ ಉತ್ತಮವಾಗು ಬಳಸಿಕೊಂಡರು" ಎಂದು ಪ್ರತಿಕ್ರಿಯಿಸಿದ್ದಾರೆ ವಿವಿಎಸ್ ಲಕ್ಷ್ಮಣ್. ಇನ್ನು ಇದೇ ಸಂದರ್ಭದಲ್ಲಿ ಪೂಜಾರ ಫೂಟ್ವರ್ಕ್ ಬಗ್ಗೆಯೂ ಲಕ್ಷ್ಮಣ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಪೂಜಾರ ಪಾದದ ಚಲನೆ ತುಂಬಾ ಅದ್ಭುತವಾಗಿತ್ತು. ಈ ಕಾರಣದಿಂದಾಗಿಯೇ ಇಂಗ್ಲೆಂಡ್ ವೇಗಿಗಳು ಎಸೆದ ಎಸೆತಗಳನ್ನು ರನ್ಗಳನ್ನಾಗಿ ಪರಿವರ್ತಿಸಲು ಸುಲಭ ಸಾಧ್ಯವಾಯಿತು ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.
ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದಾದ ಟೀಮ್ ಇಂಡಿಯಾದ 3 ಆಟಗಾರರು
ಚೇತೇಶ್ವರ್ ಪೂಜಾರ ಹೆಡಿಂಗ್ಲೆ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿದ ಸಂದರ್ಭದಲ್ಲಿ ಸಾಕಷ್ಟು ಒತ್ತಡದಲ್ಲಿದ್ದರು. ಸತತವಾಗಿ ಬ್ಯಾಟಿಂಗ್ನಲ್ಲಿ ವೈಫಲ್ಯವನ್ನು ಅನುಭವಿಸಿದ್ದು ಹಾಗೂ ಒಂದೇ ಮಾದರಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದ ರೀತಿಯಿಂದಾಗಿ ಪೂಜಾರ ಮೇಲೆ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಪೂಜಾರ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ನೀಡಿ ಎಂಬ ಕೂಗು ಸಾಕಷ್ಟು ಕೇಳಿ ಬಂದಿತ್ತು. ಆದರೆ ಈ ಒತ್ತಡದ ಸಂದರ್ಭದಲ್ಲಿ ಚೇತೇಶ್ವರ್ ಪೂಜಾರ ಕಣಕ್ಕಿಳಿದು ಅದ್ಭುತವಾದ ಇನ್ನಿಂಗ್ಸ್ ಕಟ್ಟಿದರು. ಶತಕಗಳಿಸುವ ಅವಕಾಶವನ್ನು ಕೂಡ ಹೊಮದಿದ್ದರು ಪೂಜಾರ. ಆದರೆ ನಾಲ್ಕನೇ ದಿನದ ಆರಂಭದಲ್ಲಿಯೇ ಎಡವಿದ ಪೂಜಾರ ವಿಕೆಟ್ ಕಳೆದುಕೊಮಡು ನಿರಾಸೆ ಅನುಭವಿಸಿದರು. ಆದರೆ ಪೂಜಾರ ಬ್ಯಾಟಿಂಗ್ ನಡೆಸಿದ ರೀತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸ್ವಲ್ಪ ಮಟ್ಟಿಗೆ ನಿರಾಳತೆ ಮೂಡಿಸಿರುವುದು ಸುಳ್ಳಲ್ಲ.
ಚೇತೇಶ್ವರ್ ಪೂಜಾರ ವಿಕೆಟ್ ಪಡೆಯಲು ಜೇಮ್ಸ್ ಆಂಡರ್ಸನ್ ಸುಲಭ ವಿಧಾನವನ್ನು ಕಂಡುಕೊಂಡಿದ್ದರು. ನಿರಂತರವಾಗಿ ಇನ್ ಸ್ವಿಂಗ್ ಎಸೆತಗಳನ್ನು ಎಸೆದು ನಂತರ ಔಟ್ ಸ್ವಿಂಗ್ ಎಸೆಯುವ ಮೂಲಕ ವಿಕೆಟ್ ಪಡೆಯಲು ಸಫಲವಾಗಿದ್ದರು. ಇದೇ ಮಾದರಿಯಲ್ಲಿ ಪೂಜಾರ ತಮ್ಮ ವಿಕೆಟ್ ಕಳೆದುಕೊಳ್ಳುತ್ತಿರುವುದಕ್ಕೆ ಸಾಕಷ್ಟು ಟೀಕೆಗೆ ಕೂಡ ಪೂಜಾರ ಗುರಿಯಾಗಿದ್ದರು.
ಆದರೆ ಸೌರಾಷ್ಟ್ರದ ಈ ಕ್ರಿಕೆಟರ್ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು. ಸಕಾರಾತ್ಮಕ ಮನೋಸ್ಥಿತಿಯಲ್ಲಿ ಬ್ಯಾಟಿಂಗ್ ನಡೆಸಿದ ಪೂಜಾರ ಇದರಲ್ಲಿ ಯಶಸ್ಸು ಗಳಿಸಿದರು. ಮೂರನೇ ದಿನದಾಟದಲ್ಲಿ ಸಂಒಊರ್ಣವಾಗಿ ಸುಲಲಿತವಾಗಿ ಬ್ಯಾಟ್ ಬೀಸಿದ ಪೂಜಾರ ಎಲ್ಲೂ ಎಡವಿರಲಿಲ್ಲ. ಆದರೆ ನಾಲ್ಕನೇ ದಿನದಾಟದಲ್ಲಿ ಪೂಜಾರ ತಮ್ಮ ರನ್ಅನ್ನು ಮೂರಂಕಿಗೆ ತಲುಪಿಸಲು ವಿಫಲವಾಗಿದ್ದರು.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವನ್ನಾಡಲು ಈಗ ಸಜ್ಜಾಗಿವೆ. ಗುರುವಾರ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಎರಡು ತಂಡಗಳು ಕೂಡ ಸರಣಿಯಲ್ಲಿ ಮೇಲುಗೈ ಸಾಧಿಸಲು ಹರಸಾಹಸ ಪಡಲಿವೆ. ಈಗಾಗಲೇ ಸರಣಿಯನ್ನು ಎರಡು ತಂಡಗಳು ಕೂಡ ಸಮಬಲ ಮಾಡಿಕೊಂಡಿರುವ ಕಾರಣ ಪಂದ್ಯದಲ್ಲಿ ಪೈಪೋಟಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಈ ನಾಲ್ಕನೇ ಪಂದ್ಯದಲ್ಲಿ ಎರಡು ತಂಡಗಳಲ್ಲಿಯೂ ಕೆಲ ಪ್ರಮುಖ ಬದಲಾವಣೆಗಳು ಆಗುವ ಸಾಧ್ಯತೆಯಿದೆ. ಟೀಮ್ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಕನಿಷ್ಠ ಎರಡು ಬದಲಾವನೆ ಮಾಡುವ ಸಾಧ್ಯತೆಯಿದ್ದು ಆರ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ.
ಇನ್ನು ಇಂಗ್ಲೆಂಡ್ ತಂಡದಲ್ಲಿ ಜೋಸ್ ಬಟ್ಲರ್ ಅಲಭ್ಯವಾಗಲಿದ್ದಾರೆ. ಹೀಗಾಗಿ ತಂಡದ ಉಪನಾಯಕನ ಜವಾಬ್ಧಾರಿ ಮೊಯೀನ್ ಅಲಿಗೆ ಹೆಗಲಿಗೆ ಬಿದ್ದಿದೆ. ಇನ್ನು ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ಗೆ ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಈ ಮೂಲಕ ಕೆಲ ಅನಿವಾರ್ಯ ಬದಲಾವಣೆಗಳು ಎರಡು ತಂಡದಲ್ಲಿಯೂ ನಡೆಯುವುದು ನಿಶ್ಚಿತ.
ಭಾರತದ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ / ಆರ್ ಅಶ್ವಿನ್, ಇಶಾಂತ್ ಶರ್ಮಾ/ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊವ್ (ವಿಕೆಟ್ ಕೀಪರ್), ಒಲ್ಲಿ ಪೋಪ್ / ಡೇನಿಯಲ್ ಲಾರೆನ್ಸ್, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಕ್ರಿಸ್ ವೋಕ್ಸ್/ಸ್ಯಾಮ್ ಕರನ್, ಕ್ರೇಗ್ ಓವರ್ಟನ್ ಮತ್ತು ಮಾರ್ಕ್ ವುಡ್