
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ಕ್ರಿಕೆಟ್ನಿಂತ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ರಿಷಿಕೇಶಕ್ಕೆ ಭೇಟಿ ನೀಡಿ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದಾರೆ. ರಿಷಿಕೇಶಕ್ಕೆ ಭೇಟಿ ನೀಡಿರುವ ಕೊಹ್ಲಿ, ಅನುಷ್ಕಾ ಶರ್ಮಾ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಆಶ್ರಮದಲ್ಲಿ ವಿವಿಧ ಸಾರ್ವಜನಿಕ ಧಾರ್ಮಿಕ ವಿಧಿಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾಗವಹಿಸಿದರು. ಸಾಧು ಸಂತರಿಗೆ ಭಂಡಾರ (ಧಾರ್ಮಿಕ ಔತಣಕೂಟ) ವನ್ನು ಆಯೋಜಿಸಿದ್ದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಧಾರ್ಮಿಕ ವಿಧಿ ವಿಧಾನಗಳಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವೃತ್ತಿ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು ಕಂಡ ಬಳಿಕ ಮಾನಸಿಕ ನೆಮ್ಮದಿಗಾಗಿ ವಿರಾಟ್ ಕೊಹ್ಲಿ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಅದರಲ್ಲೂ ಮೂರು ವರ್ಷಗಳ ಕಾಲ ಫಾರ್ಮ್ ಕಳೆದುಕೊಂಡ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಮರಳಿಪಡೆಯಲು ಅವರಿಗೆ ಸಹಾಯಕವಾಗಿದ್ದು, ಇದೇ ಆಧ್ಯಾತ್ಮಿಕ ಮಾರ್ಗ.
ತಮಗೆ ಸಮಯ ಸಿಕ್ಕಾಗಲೆಲ್ಲ ವಿರಾಟ್ ಕೊಹ್ಲಿ ಕುಟುಂಬದ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದನ್ನು ನೋಡಿದ್ದೇವೆ. ಕೊಹ್ಲಿ ದಂಪತಿ ಮಗಳು ವಾಮಿಕಾ ಜೊತೆ ವೃಂದಾವನ ಆಶ್ರಮದಲ್ಲಿ ಆಶೀರ್ವಾದ ಪಡೆದಿದ್ದರು.
ಸಾಧು ಸಂತರಿಂದ ಆಶೀರ್ವಾದ ಪಡೆದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಾರ್ವಜನಿಕವಾಗಿ ಹಲವು ಧಾರ್ಮಿಕ ವಿಧಾನಗಳನ್ನು ಆಚರಣೆ ಮಾಡಿದರು. ಸಾಧು ಸಂತರಿಗೆ ನಮಸ್ಕರಿಸಿದ ದಂಪತಿ, ಅವರಿಗೆ ಧಾರ್ಮಿಕ ಔತಣವನ್ನು ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸಾಧುಗಳಿಂದ ಆಶೀರ್ವಾದ ಪಡೆದರು.
ಇದಕ್ಕೂ ಮುನ್ನ ಅವರು ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮದಲ್ಲಿ ಒಂದು ಗಂಟೆಗಳ ಸಮಯ ಕಳೆದರು. ಅಲ್ಲಿ ಬಾಬಾರವರ ಸಮಾಧಿಯ ದರ್ಶನವನ್ನು ಪಡೆದಿದ್ದರು, ಜೊತೆಗೆ ಕುಟೀರದಲ್ಲಿ ಒಂದು ಧ್ಯಾನ ಮಾಡಿದರು. ಇದೇ ಸಂದರ್ಭದಲ್ಲಿ ಆಶ್ರಮಕ್ಕೆ ಬಂದಿದ್ದ ಅಭಿಮಾನಿಗಳಿಗೆ ಸೆಲ್ಫಿಗೆ ಫೋಸ್ ನೀಡಿದರು.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ನಂತರ ವಿಶ್ರಾಂತಿ ಪಡೆಯುತ್ತಿರುವ ಅವರು, ಫೆಬ್ರವರಿ 2 ರಿಂದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಸಿದ್ಧತೆ ಆರಂಭಿಸಲಿದ್ದಾರೆ.
ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ಬಿಸಿಸಿಐ ಭಾರತ ತಂಡಕ್ಕೆ ಟೆಸ್ಟ್ ಪಂದ್ಯಕ್ಕೆ ಮುನ್ನ ವಿಶೇಷ ತರಬೇತಿಯನ್ನು ಏರ್ಪಡಿಸಿದೆ. ಭಾರತ ತಂಡ ಫೆಬ್ರವರಿ 2ರಿಂದ ತರಬೇತಿಗೆ ಹಾಜರಾಗಲಿದ್ದು, ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.