
ಕರಾಚಿ: ಸೆಪ್ಟೆಂಬರ್ 17ರಿಂದ ಆರಂಭವಾಗಬೇಕಿದ್ದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೀಮಿತ ಓವರ್ಗಳ ಸರಣಿ ಭಯೋತ್ಪಾದನೆ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ. ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಹೋಗಿತ್ತು. ಆದರೆ ಈ ಐತಿಹಾಸಿಕ ಸರಣಿ ಪೂರ್ಣಗೊಳ್ಳುವ ಮೊದಲೇ ಮುಂದೂಡಲ್ಪಟ್ಟಿದೆ.
ನ್ಯೂಜಿಲೆಂಡ್ ಸರ್ಕಾರ ಭದ್ರತೆಯ ಭೀತಿಯಿರುವ ಎಚ್ಚರಿಕೆ ನೀಡಿದ್ದರಿಂದ ಕಿವೀಸ್ ತಂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದೆ. ನ್ಯೂಜಿಲೆಂಡ್ ಬೋರ್ಡ್ ಸರಣಿ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೇಳಿಕೆ ನೀಡಿದೆ. ನಮಗೆ ಸರಣಿ ಮುಂದುವರೆಸಲು ಮನಸ್ಸಿತ್ತು. ಆದರೆ ನ್ಯೂಜಿಲೆಂಡ್ ಬೋರ್ಡ್ ಏಕಪಕ್ಷೀಯವಾಗಿ ಸರಣಿ ಮುಂದೂಡಲು ನಿರ್ಧಾರ ತಾಳಿತು ಎಂದು ಪಿಸಿಬಿ ಹೇಳಿದೆ.
2002ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್ಗೆ ಪ್ರವಾಸ ಹೋಗಿತ್ತು. ಆಗ ಕಿವೀಸ್ ತಂಗಿದ್ದ ಹೋಟೆಲ್ ಸಮೀಪವೇ ಬಾಂಬ್ ಬ್ಲಾಸ್ಟ್ ನಡೆದಿತ್ತು. ಅಷ್ಟೇ ಅಲ್ಲ, ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗಿದ್ದಾಗ ಲಂಕಾ ಆಟಗಾರ ಥಿಲನ್ ಸಮರವೀರ ಕಾಲಿಗೆ ಗುಂಡು ಬಿದ್ದಿತ್ತು. ಅದೇ ಸಮರವೀರ ಈಗ ಕಿವೀಸ್ಗೆ ಕೋಚ್ ಆಗಿ ತಂಡದ ಜೊತೆಗಿದ್ದಾರೆ.
"ಈ ದಿನ ಆರಂಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತಮಗೆ ಭದ್ರತೆಯ ಅಪಾಯ ಇರುವುದಾಗಿ ತಿಳಿಸಿತ್ತು. ಈಗ ಏಕಪಕ್ಷೀಯವಾಗಿ ಸರಣಿ ಮುಂದೂಡುವ ನಿರ್ಧಾರ ಪ್ರಕಟಿಸಿದೆ. ಪಿಸಿಬಿ ಮತ್ತು ಪಾಕಿಸ್ತಾನ ಸರ್ಕಾರ ಸಂಪೂರ್ಣ ಸುರಕ್ಷತೆಯ ವ್ಯವಸ್ಥೆ ಮಾಡಿದೆ. ನಾವು ಈ ವಿಚಾರದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ಗೆ ಭರವಸೆಯನ್ನೂ ನೀಡಿದ್ದೇವೆ. ನಮ್ಮ ಪ್ರಧಾನಿ ಇಮ್ರಾನ್ ಖಾನ್ ನ್ಯೂಜಿಲೆಂಡ್ ಪ್ರಧಾನಿ ಜೊತೆ ಮಾತನಾಡಿದ್ದಾರೆ. ವಿಶ್ವದಲ್ಲೇ ನಮ್ಮದು ಅತ್ಯುತ್ತಮ ಗುಪ್ತಚರ ವ್ಯವಸ್ಥೆಯಿದೆ. ಇಲ್ಲಿ ಭೀತಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ," ಎಂದು ಪಿಸಿಬಿ ತನ್ನ ಸರಣಿ ಟ್ವೀಟ್ಗಳಲ್ಲಿ ಬರೆದುಕೊಂಡಿದೆ.