7ನೇ ಕ್ರಮಾಂಕದಲ್ಲೇ ಧೋನಿ ಇಳಿಸೋದು ತಂಡದ ತಂತ್ರವಾಗಿತ್ತು: ರವಿ ಶಾಸ್ತ್ರಿ

ಲಂಡನ್, ಜುಲೈ 12: ಐಸಿಸಿ ವಿಶ್ವಕಪ್ 2019ರ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಇಳಿಸೋದೇ ತಂಡದ ತಂತ್ರವಾಗಿತ್ತು ಎಂದು ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಸಮರ್ಥಿಸಿಕೊಂಡಿದ್ದಾರೆ. ಧೋನಿ ಪಂದ್ಯದ ಫಿನಿಷರ್ ಅನ್ನಿಸಿಕೊಂಡಿರುವುದರಿಂದ ಅವರ ಸಾಮರ್ಥ್ಯ ಬಳಸಿಕೊಳ್ಳುವ ಯೋಜನೆ ನಮ್ಮದಾಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಅನೇಕ ಕ್ರಿಕೆಟ್ ಪರಿಣಿತರು ನಿರ್ಣಾಯಕ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಇಳಿಸಿದ್ದಕ್ಕೆ ಅಸಮಾಧಾನ ತೋರಿಕೊಂಡಿದ್ದರು. ಧೋನಿಗೆ ಸೂಕ್ತ ಬ್ಯಾಟಿಂಗ್ ಕ್ರಮಾಂಕ ನೀಡದಿದ್ದುದೇ ಸೆಮಿಫೈನಲ್ನಲ್ಲಿನ ದೊಡ್ಡ ಪ್ರಮಾದ ಎಂದು ಬಹಳಷ್ಟು ಮಂದಿ ಅಭಿಪ್ರಾಯಿಸಿದ್ದರು.
ಅಸಲಿಗೆ ನ್ಯೂಜಿಲೆಂಡ್-ಭಾರತ ಸೆಮಿಫೈನಲ್ನಲ್ಲಿ ಭಾರತದ ಯೋಜನೆ ಏನಾಗಿತ್ತು? ಹೆಚ್ಚಿನ ಪಂದ್ಯಗಳಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಳ್ಳುತ್ತಿದ್ದ ಧೋನಿ, ಅಂದು 7ನೇ ಕ್ರಮಾಂಕದಲ್ಲಿ ಬಂದಿದ್ದೇಕೆ? ತಂಡ ಎಡವಿದ್ದೆಲ್ಲಿ? ಎಂಬಿತ್ಯಾದಿ ವಿಚಾರಗಳನ್ನು ಕೋಚ್ ರವಿಶಾಸ್ತ್ರಿ ಹರವಿಕೊಂಡಿದ್ದಾರೆ.

1. ಧೋನಿ 7ನೇ ಕ್ರಮಾಂಕದಲ್ಲಿ ಬಂದಿದ್ದೇಕೆ?
'ಅದು ಇಡೀ ತಂಡದ ನಿರ್ಧಾರ. ಎಲ್ಲರೂ ಅದರಲ್ಲಿ ಪಾಲುದಾರರೆ. ಅದಲ್ಲದೆ ಅದು ತೀರಾ ಸಾದಾಸೀದಾ ಮತ್ತು ಸೂಕ್ತ ನಿರ್ಧಾರ. ಕೊನೆಯಾದಾಗಿ ಹೇಳೋದಾದ್ರೆ ಧೋನಿ ಮುಂಚಿತವಾಗೇ ಮೈದಾನಕ್ಕಿಳಿದು ಚೇಸಿಂಗ್ ಅವಕಾಶವನ್ನು ಕಳೆದುಕೊಳ್ಳೋದು ನಮಗೆ ಬೇಡವಿತ್ತು. ಅದಕ್ಕಾಗೇ ನಾವು ಧೋನಿಯ ಅನುಭವವನ್ನು ಕಡೆಯದಾಗಿ ಬಳಸಿಕೊಳ್ಳಲು ಯೋಚಿಸಿದೆವು. ಧೋನಿ ಸರ್ವಕಾಲಿಕ ಶ್ರೇಷ್ಠ ಫಿನಿಷರ್ ಅನ್ನೋದು ಇದಕ್ಕೆ ಕಾರಣವಾಗಿತ್ತು' ಎಂದು ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡುತ್ತ ಶಾಸ್ತ್ರಿ ಹೇಳಿಕೊಂಡರು.

2. ಕೂಲ್ ಕ್ಯಾಪ್ಟನ್ಗೆ ಶಾಸ್ತ್ರಿ ಶ್ಲಾಘನೆ
'ಆತ (ಧೋನಿ) ಉತ್ತಮ ಆಟಗಾರ. ಪಂದ್ಯದ ಸಂದರ್ಭಗಳನ್ನು ಹಿಡಿತದಲ್ಲಿಟ್ಟುಕೊಳ್ಳಬಲ್ಲವ. ಒಂದು ವಿಚಾರ ಹೇಳ್ತೇನೆ, ದುರದೃಷ್ಟಕರವಾಗಿ ಧೋನಿಯೇನಾದರೂ ರನ್ ಔಟ್ ಆಗದೆ ಇದ್ದರೆ, ಆತನ ತಲೆಯಲ್ಲಿ ಕೊನೇಗಳಿಗೆಯ ಲೆಕ್ಕಾಚಾರ ಇದ್ದೇಇತ್ತು. ಪಂದ್ಯಗಳ ವೇಳೆ ಯಾವ ಚೆಂಡಿಗೆ ಹೊಡೆಯಬೇಕು, ಎಷ್ಟು ದೂರ ಹೊಡೆಯಬೇಕು ಎಂಬಿತ್ಯಾದಿ ವಿಚಾರಗಳು ದೋನಿ ತಲೆಯಲ್ಲಿ ಓಡಾಡುತ್ತಿದ್ದನ್ನು ನೀವು ಈ ಹಿಂದೆ ಆತನ ಮುಖಚಹರೆಯ ಮೂಲಕವೇ ಗಮನಿಸಿರಬಹುದು' ಎಂದು ರವಿ ವಿವರಿಸಿದರು.

3. 4ನೇ ಕ್ರಮಾಂಕಕ್ಕೆ ಸ್ಥಿರ ಬ್ಯಾಟ್ಸ್ಮನ್ ಇಲ್ಲ
'ಹೌದು, ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್ಮನ್ನ ಅಗತ್ಯ ನಮಗಿದೆ. ಭವಿಷ್ಯದಲ್ಲಿ ಅದೇ ಸ್ಥಾನ ಹೆಚ್ಚು ನಿರ್ಣಾಯಕವಾಗಲಿದೆ. ಈ ಬ್ಯಾಟಿಂಗ್ ಕ್ರಮಾಂಕವೇ ನಮಗೆ ಹೆಚ್ಚು ಸಮಸ್ಯೆ ತರುತ್ತಿದೆ. ಕೆಎಲ್ ರಾಹುಲ್ನನ್ನು ಅಲ್ಲಿ ತರೋಣ ಅಂದರೆ ಶಿಖರ್ ಧವನ್ ಗಾಯಗೊಂಡಿದ್ದರು. ವಿಜಯ್ ಶಂಕರ್ ಆ ಸ್ಥಾನಕ್ಕೆ ಬಂದರು. ಅವರೂ ಗಾಯಗೊಂಡರು. ಈ ಸಮಸ್ಯೆಯನ್ನು ನಿಯಂತ್ರಿಸೋದೇ ಸಾಧ್ಯವಾಗುತ್ತಿಲ್ಲ' ಎಂದು ಶಾಸ್ತ್ರಿ ತಂಡದ ಹಿನ್ನಡೆಯ ಕಾರಣ ಬಿಡಿಸಿಟ್ಟರು.

4. ರಿಷಬ್ ಪಂತ್ ಬ್ಯಾಟಿಂಗ್
'ಆ ಪಂದ್ಯದಲ್ಲಿ ರಿಷಬ್ ಪಂತ್ ಬ್ಯಾಟ್ ಎತ್ತಿಕೊಂಡಾಗ ಕೊಂಚ ಸುರಕ್ಷಿತರಾಗಿ ಕಾಣಿಸಿದರು. ಒಂದು ವೇಳೆ ಪಂತ್ ಔಟ್ ಆಗದೆ ಇನ್ನೊಂದಿಷ್ಟು ಹೊತ್ತು ಆಡಿದ್ದರೆ ಪಂದ್ಯ ಏನಾಗುತ್ತಿತ್ತು ಎಂಬುದನ್ನು ನೀವು ಹೇಳಲಾರಿರಿ. ಆದರೆ ಇದು ಕ್ರೀಡೆ. ಇಲ್ಲಿ ನಮ್ಮೆಣಿಕೆಯಂತೆ ಕೆಲವೊಮ್ಮೆ ನಡೆಯೋಲ್ಲ. ಪಂತ್ ಸೀಮಿತ ಅವಧಿಯಲ್ಲಿ ವೇಗವಾಗಿ ಕಲಿಯುತ್ತಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ನನಗಂತೂ ಖುಷಿಯಿದೆ' ಎಂದು ರವಿ ಹೇಳಿದರು.

5. ನಿರೀಕ್ಷೆ ಹುಟ್ಟಿಸಿದ ಜಡೇಜಾ
'ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿದರು. ಆತ ನಿಜಕ್ಕೂ ಪ್ರತಿಭಾನ್ವಿತ, ಪಂದ್ಯದ ವೇಳೆ ಜಡೇಜಾ ಉತ್ತಮ ಆಟಗಾರ ಅನ್ನೋದು ಮತ್ತೊಮ್ಮೆ ಮನವರಿಕೆಯಾಗುತ್ತಲೆ ಖುಷಿ ಅನ್ನಿಸಿತು. ಆಟವನ್ನು ಜಡೇಜಾ ಅಷ್ಟರ ಮಟ್ಟಿಗೆ ಸಮತೋಲನಕ್ಕೆ ತಂದರು. ಒಮ್ಮೆ ಕಲ್ಪಿಸಿಕೊಳ್ಳಿ, ಜಡೇಜಾ ಸುಮಾರು 8 ಪಂದ್ಯಗಳಿಂದ ಹೊರಗಿದ್ದರು. ಮೈದಾನಕ್ಕಿಳಿಸಿದಾಗ ಕೈ ತಪ್ಪಸಿಕೊಂಡ ಆ ಎಲ್ಲಾ ಪಂದ್ಯಗಳ ಪ್ರದರ್ಶನವನ್ನು ಒಟ್ಟಿಗೆ ನೀಡಿದರು' ಎಂದು ಜಡೇಜಾ ಪ್ರದರ್ಶನ ಬಗ್ಗೆ ಶಾಸ್ತ್ರಿ ಹರ್ಷ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications