ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯಕ್ಕೆ ಪರಿಹಾರ ಸೂಚಿಸಿದ ಶ್ರಿಕಾಂತ್!

ಲಂಡನ್, ಜೂನ್ 28: ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ತಂಡದ ಸದಸ್ಯ ಹಾಗೂ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಕೃಷ್ಣಾಮಚಾರಿ ಶ್ರೀಕಾಂತ್, ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಬ್ಯಾಟಿಂಗ್ ಗೊಂದಲಕ್ಕೆ ಪರಿಹಾರ ಸೂಚಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸತತ ಅರ್ಧಶತಕಗಳನ್ನು ದಾಖಲಿಸುವ ಮೂಲಕ ಹಲವು ದಾಖಲೆಗಳನ್ನು ನುಚ್ಚುನೂರು ಮಾಡುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಕ್ತಕಂಠದಿಂದ ಹೊಗಳಿರುವ ಶ್ರೀಕಾಂತ್, ತಂಡದ ಉಳಿದ ಬ್ಯಾಟ್ಸ್ಮನ್ಗಳು ಕೂಡ ಕೊಹ್ಲಿ ಅವರನ್ನು ಹಿಂಬಾಲಿ ಜವಾಬ್ದಾರಿ ಹೊರಬೇಕು ಎಂದಿದ್ದಾರೆ.
ಭಾರತ ತಂಡ ಆಡಿದ 6 ಪಂದ್ಯಗಳಲ್ಲಿ 5 ಜಯ ಮತ್ತು ಒಂದು ಪಂದ್ಯದಲ್ಲಿ ಮಳೆಯಿಂದಾಗಿ ಅಂಕ ಹಂಚಿಕೊಳ್ಳುವ ಮೂಲಕ ಒಟ್ಟು 11 ಅಂಕಗಳನ್ನು ಗಳಿಸಿದ್ದು, ಸೆಮಿಫೈನಲ್ಸ್ ಹೊಸ್ತಿಲಲ್ಲಿ ನಿಂತಿದೆ. ಉಳಿದ ಮೂರು ಪಂದ್ಯಗಳಲ್ಲಿ ಭಾರತ ಒಂದು ಪಂದ್ಯ ಗೆದ್ದರೂ ಸುಲಭವಾಗಿ ಉಪಾಂತ್ಯಕ್ಕೆ ಕಾಲಿಡಲಿದೆ.
"ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ಸಾವಿರ ರನ್ಗಳನ್ನು ಅತ್ಯಂತ ವೇಗವಾಗಿ ಪೂರೈಸಿರುವುದು ಅದ್ಭುತ ಸಾಧನೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಮೂಲಕ ಆಡುವುದು ಅವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ. ನಾಯಕನಾಗಿ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ತಂಡದ ಉಳಿದ ಆಟಗಾರರಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ,'' ಎಂದು ಕೊಹ್ಲಿ ಅವರ ಬ್ಯಾಟಿಂಗ್ ಕುರಿತಾಗಿ ಶ್ರೀಕಾಂತ್ ಗುಣಗಾನ ಮಾಡಿದ್ದಾರೆ.
ಇನ್ನು ಇದೇ ವೇಳೆ ಭಾರತ ತಂಡದ ಬ್ಯಾಟಿಂಗ್ ಗೊಂದಲದ ಕುರಿತಾಗಿ ಮಾತನಾಡಿರುವ ಶ್ರೀ, ಟೀಮ್ ಇಂಡಿಯಾದ ಬ್ಯಾಟಿಂಗ್ "ಕೊಂಚ ವಿರಾಟ್ ಕೊಹ್ಲಿ ಶೋ"ನಂತಗಾಗಿದೆ. ಉಳಿದ ಬ್ಯಾಟ್ಸ್ಮನ್ಗಳು ಕೊಹ್ಲಿ ಅವರ ಬ್ಯಾಟಿಂಗ್ನಲ್ಲಿ ಶೇ.50ರಷ್ಟಾದರೂ ಆಡುವ ಕಡೆಗೆ ಗಮನ ನೀಡಿದರೆ ಬ್ಯಾಟಿಂಗ್ ಗೊಂದಲ ನಿವಾರಣೆಯಾಗುತ್ತದೆ ಎಂದಿದ್ದಾರೆ.
"ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಕಳೆದೆರಡು ಪಂದ್ಯಗಳಲ್ಲಿ ಘರ್ಜಿಸಿಲ್ಲ. ಹೀಗಾಗಿ ಕೆ.ಎಲ್ ರಾಹುಲ್ ತಮ್ಮ ಜವಾಬ್ದಾರಿ ಅರಿ ಮತ್ತಷ್ಟು ಉತ್ತಮ ಆಟವಾಡಬೇಕಿದೆ. ಅವರು ಉತ್ತಮ ಆರಂಭ ಪಡೆಯುತ್ತಿದ್ದಾರೆ. ಆದರೆ, ವಿಕೆಟ್ ಕೈಚೆಲ್ಲುತ್ತಿದ್ದಾರೆ. ಇಂತಹ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಬೇಕು ಎಂಬುದು ಎಲ್ಲರಿಗಿಂತಲೂ ಅವರಿಗೇ ಚೆನ್ನಾಗಿ ತಿಳಿದಿದೆ. ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್ ಮತ್ತು ಕೇದಾರ್ ಜಾಧವ್ ಈವರೆಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿಲ್ಲ. ಹೀಗಾಗಿ ಪ್ರತಿಯೊಬ್ಬ ಬ್ಯಾಟ್ಸ್ಮನ್ನ ಪ್ರದರ್ಶನ ಕೊಂಚ ಸುಧಾರಣೆಯಾಗಬೇಕು ಎಂದೇ ಹೇಳಬೇಕಾಗುತ್ತದೆ,'' ಎಂದು ಶ್ರೀಕಾಂತ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ನಾಲ್ಕನೇ ಕ್ರಮಾಂಕಕ್ಕೆ ಪಂತ್ ಸೂಕ್ತ
ಇನ್ನು ಬಹು ಚರ್ಚಿತ ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಕುರಿತಾಗಿ ಮಾತನಡಿರುವ ಶ್ರೀಕಾಂತ್, ಎಡಗೈ ಬ್ಯಾಟ್ಸ್ಮನ್ ರಿಷಭ್ ಪಂತ್ ಈ ಸ್ಥಾನದಲ್ಲಿ ಆಡಲು ಸೂಕ್ತ ಆಟಗಾರ ಎಂದು ಹೇಳಿದ್ದಾರೆ. "ಪಂತ್ ಅವರನ್ನು ಕರೆತರಲಾಗಿದೆ. ಅವರು ಆಡಲು ಸಜ್ಜಾಗಿದ್ದಾರೆ. ಎಲ್ಲಕ್ಕಿಂತಲೂ ಪ್ರಮುಖವಾಗಿ ಅವರಿಗೆ ಇಂಗ್ಲೆಂಡ್ನಲ್ಲಿ ಆಡಿದ ಅನುಭವವೂ ಇದೆ,'' ಎಂದು ಹೇಳಿದ್ದಾರೆ.
ಭಾರತ ತಂಡ ಇದೇ ಭಾನುವಾರ ತನ್ನ ಮುಂದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪೈಪೋಟಿ ನಡೆಸಲಿದೆ. ಇಂಗ್ಲೆಂಡ್ಗೆ ಈ ಪಂದ್ಯ ಪ್ರಿ ಕ್ವಾರ್ಟರ್ಫೈನಲ್ಸ್ ಮಹತ್ವ ಪಡೆದಿದ್ದು, ಇಲ್ಲಿ ಸೋತರೆ ಸ್ಪರ್ಧೆಯಿಂದ ಹೊರಬೀಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications