
ಮ್ಯಾಂಚೆಸ್ಟರ್, ಜುಲೈ 11: ವಿಶ್ವಕಪ್ 2019ರ ಮೊದಲ ಸೆಮಿಫೈನಲ್ನಲ್ಲಿನ ಬ್ಯಾಟಿಂಗ್ಗಾಗಿ ಭಾರತದ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರನ್ನು ಟೀಕಿಸಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ಗೆ ಭಾರತದ ಮಾಜಿ ಕ್ರಿಕೆಟಿಗ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಬುಧವಾರ (ಜುಲೈ 10) ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಮುಕ್ತಾಯಗೊಂಡ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 18 ರನ್ನಿಂದ ಸೋತು ಮುಖಭಂಗ ಅನುಭವಿಸಿತು. ಪಂದ್ಯದ ಬಳಿಕ ಭಾರತದ ಬ್ಯಾಟಿಂಗ್ ಕ್ರಮಾಂಕಗಳ ಬಗ್ಗೆ ಟೀಕೆಗಳು ಶುರುವಾಗಿದ್ದವು. ಪೀಟರ್ಸನ್ ಕೂಡ ಪಂತ್ ಟೀಕಿಸಿ ಟ್ವೀಟ್ ಮಾಡಿದ್ದರು.
ಜುಲೈ 10ರ ಟ್ವೀಟ್ನಲ್ಲಿ ಕೆವಿನ್, 'ರಿಷಬ್ ಪಂತ್ ಮಾಡಿದ್ದನ್ನೇ ಮಾಡೋದನ್ನು ಏಷ್ಟುಸಾರೀಂತ ನೋಡೋದು. ಇದಕ್ಕೆ ಕಾರಣವೇನಂದರೆ ಆತನನ್ನು ಆರಂಭದಲ್ಲೇ ತಂಡದಲ್ಲಿ ಆರಿಸದಿದ್ದಿದ್ದು. ಪಂತ್ ಸ್ಥಿತಿ ನಿಜಕ್ಕೂ ಕರುಣಾಜನಕ' ಎಂದು ಬರೆದುಕೊಂಡಿದ್ದರು. ಟೂರ್ನಿಯಲ್ಲಿ ಮೂರು ಪಂದ್ಯಗಳನ್ನಾಡಿದ್ದ ಪಂತ್ ಕ್ರಮವಾಗಿ 32, 4, 32 ರನ್ ಗಳಿಸಿದ್ದರು. ಪಂತ್ ಬ್ಯಾಟಿಂಗ್ನಲ್ಲಿ ಗಣನೀಯ ಸುಧಾರಣೆ ಕಾಣಿಸುತ್ತಿಲ್ಲ ಎಂಬುದು ಪೀಟರ್ಸನ್ ಆಗ್ರಹವಾಗಿತ್ತು.
ಆದರೆ ಯುವ ಬ್ಯಾಟ್ಸ್ಮನ್ ಬೆನ್ನಿಗೆ ನಿಂತ ಮಾಜಿ ಆಲ್ ರೌಂಡರ್ ಆಟಗಾರ ಯುವಿ, 'ಆತ (ಪಂತ್) ಕೇವಲ 8 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾನೆ. ಪಂದ್ಯ ಸೋತಿದ್ದು ಆತನ ತಪ್ಪಿನಿಂದಲ್ಲ. ಪಂತ್ ಕಲಿಯುತ್ತಿದ್ದಾನೆ, ಸುಧಾರಣೆ ಕಾಣುತ್ತಿದ್ದಾನೆ ಹೊರತು ಆತನ ಸ್ಥಿತಿ ಖಂಡಿತಾ ಚಿಂತಾಜನಕವಾಗಿಲ್ಲ' ಎಂದು ಟ್ವೀಟ್ ಮೂಲಕವೇ ಪೀಟರ್ಸನ್ಗೆ ತಿರುಗೇಟು ನೀಡಿದ್ದಾರೆ.
ಮೊದಲ ಸೆಮಿಫೈನಲ್ನಲ್ಲಿ ಇನ್ನಿಂಗ್ಸ್ ಆಡಿದ್ದ ಕಿವೀಸ್ 8 ವಿಕೆಟ್ ನಷ್ಟದಲ್ಲಿ 239 ರನ್ ಮಾಡಿತ್ತು. ಭಾರತಕ್ಕೆ 240 ಗುರಿ ಏನೂ ಸವಾಲಿನದ್ದಾಗಿರಲಿಲ್ಲ. ಆದರೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ 1, ವಿರಾಟ್ ಕೊಹ್ಲಿ 1, ಕೆಎಲ್ ರಾಹುಲ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರಿಂದ ಭಾರತ ಇಕ್ಕಟ್ಟಿಗೆ ಸಿಲುಕಿತು. ಧೋನಿ, ಜಡೇಜಾ ಅರ್ಧಶತಕದ ಹೊರತಾಗಿಯೂ ಗೆಲುವಿನಂಚಿನಲ್ಲಿ ಸೋತಿತು.