
ಮಾಲೆ: ಮಾಲ್ಡೀವ್ಸ್ನ ಮಾಲೆಯಲ್ಲಿ ಬುಧವಾರ (ಆಗಸ್ಟ್ 18) ನಡೆದ ಎಎಫ್ಸಿ ಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಎಟಿಕೆ ಮೋಹನ್ ಬಗಾನ್ 2-0ಯ ಜಯ ಗಳಿಸಿದೆ. ಗ್ರೂಪ್ 'ಡಿ'ಯಲ್ಲಿದ್ದ ಬೆಂಗಳೂರು ತಂಡ ಅದೇ ತಂಡದಲ್ಲಿದ್ದ ಮತ್ತೊಂದು ಭಾರತೀಯ ತಂಡದ ವಿರುದ್ಧ ಶರಣಾಗಿದೆ.
ಎಟಿಕೆ ಮೋಹನ್ ಬಗಾನ್ ತಂಡದ ನಾಯಕ ರಾಯ್ ಕೃಷ್ಣ 39ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, 46ನೇ ನಿಮಿಷದಲ್ಲಿ ಸುಭಾಶಿಷ್ ಬೋಸ್ ಎರಡನೇ ಗೋಲ್ ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಕೊಟ್ಟರು. ಕೋಲ್ಕತ್ತಾ ಮೂಲದ ತಂಡದ ವಿರುದ್ಧ ಬೆಂಗಳೂರು ತಂಡ ಒಂದೂ ಗೋಲ್ ಬಾರಿಸಲಾಗದೆ ಸೋಲೊಪ್ಪಿಕೊಂಡಿತು.
ಎಟಿಕೆ ಮೋಹನ್ ಬಗಾನ್ ವಿರುದ್ಧದ ಈ ಪಂದ್ಯದಲ್ಲಿ ಎಂಗಳೂರು ಎಫ್ಸಿ ಏನೂ ಗಮನ ಸೆಳೆಯಲಿಲ್ಲ. ಯಾಕೆಂದರೆ ಮೋಹನ್ ಬಗಾನ್ ಮಾಡಿದ ಐದು ಪ್ರಯತ್ನಗಳಲ್ಲಿ ಎರಡು ಗೋಲ್ಗಳನ್ನು ದಾಖಲಿಸಿದರೆ, ಬೆಂಗಳೂರು ಎಫ್ಸಿ ಮೂರು ಪ್ರಯತ್ನಗಳಲ್ಲಿ ಒಂದೂ ಗೋಲ್ ದಾಖಲಿಸಲಿಲ್ಲ.
ಈ ಪಂದ್ಯದ ಸೋಲಿನೊಂದಿಗೆ ಸುನಿಲ್ ಛೆಟ್ರಿ ಮುಂದಾಳತ್ವದ ಬೆಂಗಳೂರು ಎಫ್ಸಿ ತಂಡ ಕೆಟ್ಟ ದಾಖಲೆಗೂ ಗಮನ ಸೆಳೆದಿದೆ. ಅದೇನೆಂದರೆ 2019ರ ಇಂಡಿಯನ್ ಸೂಪರ್ ಲೀಗ್ ಸೀಸನ್ನಿಂದ ಇಲ್ಲೀವರೆಗೂ ಬೆಂಗಳೂರು ಎಫ್ಸಿ ತಂಡಕ್ಕೆ ತನ್ನ ಎದುರಾಳಿ ಮೋಹನ್ ಬಾಗನ್ ತಂಡವನ್ನು ಸೋಲಿಸಲಾಗಿಲ್ಲ.