ಬೆಂಗಳೂರು, ಜನವರಿ 18: ಸಂತೋಷ್ ಟ್ರೋಫಿ ದಕ್ಷಿಣ ವಲಯ ಅರ್ಹತಾ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತನ್ನ ಅತ್ಯುತ್ತಮ ಆಟದಿಂದ ಜಯದ ಮುನ್ನುಡಿ ಬರೆದಿದೆ.
ನಿನ್ನೆ(ಜನವರಿ 17) ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್ ಬಾಲ್ ಕ್ರೀಡಾಂಗಣದಲ್ಲಿ ತೆಲಂಗಾಣ ತಂಡವನ್ನು ಎದುರಿಸಿದ ಕರ್ನಾಟಕ ತಂಡ 5-0 ಗೋಲುಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿತು.
50 ವರ್ಷಗಳ ನಂತರ ಬೆಂಗಳೂರಿನಲ್ಲಿ ಸಂತೋಷ್ ಟ್ರೋಫಿ ಪಂದ್ಯಗಳು ನಡೆಯುತ್ತಿರುವ ಕಾರಣ ತವರಿನ ಪ್ರೇಕ್ಷಕರು ಉತ್ತಮ ಸಂಖ್ಯೆಯಲ್ಲಿ ನೋಡಲು ಆಗಮಿಸಿದ್ದರು, ಅವರಿಗೆ ಬೇಸರ ಮೂಡಿಸದ ವಿಘ್ನೇಶ್ ಗುಣಶೇಖರನ್ ನಾಯಕತ್ವದ ರಾಜ್ಯ ತಂಡ ಗುಣಮಟ್ಟದ ಆಟವಾಡಿ ಗೆಲುವು ದಾಖಲಿಸಿತು.
ಪಂದ್ಯ ಆರಂಭವಾದ 7ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿದ ರಾಜ್ಯದ ತಂಡ ಆ ನಂತರ ನಿಲ್ಲಲೇ ಇಲ್ಲ, ತೆಲಂಗಾಣ ತಂಡಕ್ಕೆ ಸಾವರಿಸಿಕೊಳ್ಳುವ ಅವಕಾಶವನ್ನೂ ನೀಡದೆ ರಾಜ್ಯದ ಆಟಗಾರರು ಸತತವಾಗಿ ತೆಂಲಂಗಾಣ ಗೋಲ್ ಪೋಸ್ಟ್ ಮೇಲೆ ದಾಳಿ ಮಾಡಿದರು.
ಪಂದ್ಯದ 7ನೇ ನಿಮಿಷದಲ್ಲಿ ಮೊದಲ ಗೋಲ್, 18ನೇ ನಿಮಿಷಕ್ಕೆ ಎರಡನೇ ಗೋಲ್. 68 ಮತ್ತು 69ನೇ ನಿಮಿಷದಲ್ಲಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಗೋಲ್ ಗಳಿಸಿದ ರಾಜ್ಯ ತಂಡ ಕೊನೆಯ ಗೋಲನ್ನು 83ನೇ ನಿಮಿಷದಲ್ಲಿ ಗಳಿಸಿ ಬೀಗಿತು.
ಕರ್ನಾಟಕ ತಂಡದ ಪರ ಅತ್ಯುತ್ತಮ ಆಟ ಪ್ರದರ್ಶಿಸಿದ ಎಸ್.ರಾಜೇಶ್ ಮತ್ತು ಲಿಟನ್ ಶಿಲ್ ಅವರುಗಳು ತಲಾ ಎರಡು ಗೋಲು ಭಾರಿಸಿದರು, ಶಹಬಾದ್ದೀನ್ ಖಾನ್ ಅವರು ಒಂದು ಗೋಲು ಗಳಿಸಿದರು.
ಕರ್ನಾಟಕವು ತನ್ನ ಎರಡನೇ ಪಂದ್ಯವನ್ನು ಜನವರಿ 19ರಂದು ಪಂಡಿಚೇರಿ ವಿರುದ್ಧ ಆಡಲಿದೆ ಮೂರನೇ ಪಂದ್ಯವನ್ನು ಸರ್ವಿಸಸ್ ವಿರುದ್ಧ ಜನವರಿ 31ರಂದು ಆಡಲಿದೆ.