
ಬೆಂಗಳೂರು, ಮಾರ್ಚ್ 07: ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರ ರಾಜ್ಯದ ಗೋಪಿ ವಿದೇಶಿ ಪ್ರಜೆಯ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗೋಪಿ ಅವರು ಕಳೆದ ಶುಕ್ರವಾರ (ಮಾರ್ಚ್ 02)ರಂದುನಗರದ ಗರುಡಾಮಾಲ್ ಬಳಿ ವಿದೇಶಿ ಪ್ರಜೆಯೊಬ್ಬನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದರು. ಗೋಪಿ ಸತತವಾಗಿ 7 ಬಾರಿ ಸಂತೋಷ್ ಟ್ರೋಫಿ ಗೆದ್ದ ತಂಡದ ಸದಸ್ಯರಾಗಿದ್ದರು.
ಗರುಡಾಮಾಲ್ ಬಳಿ ಫುಟ್ಪಾತ್ ಮೇಲೆ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಗೋಪಿಯನ್ನು ವಿದೇಶಿ ಪ್ರಜೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ ಕೊನೆಗೆ ಸಿಟ್ಟಿಗೆದ್ದ ಗೋಪಿ ವಿದೇಶಿ ಪ್ರಜೆ ಮೇಲೆ ಹಲ್ಲೆ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಶೋಕ್ ನಗರ ಹೊಯ್ಸಳ ಪೊಲೀಸರು ಗೋಪಿಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಪ್ರಕರಣದಿಂದ ಗೋಪಿ ಜಾಮೀನು ಪಡೆದಿದ್ದಾರೆ.