ಬೆಂಗಳೂರು, ಮಾರ್ಚ್ 30: ಸಂತೋಶ್ ಟ್ರೋಫಿ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕವನ್ನು ಮಣಿಸಿದ ಪ.ಬಂಗಾಳ ತಂಡವು ಫೈನಲ್ ಪ್ರವೇಶಿಸಿದೆ.
ಕೊಲ್ಕತ್ತಾದ ಹೌರಾದಲ್ಲಿ ನಡೆದ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಕಳೆದ ಬಾರಿಯ ಚಾಂಪಿಯನ್ ಬಂಗಾಳ ತಂಡವು ಕರ್ನಾಟಕವನ್ನು 2-0 ಅಂತರದಿಂದ ಸೋಲಿಸಿದೆ. ಬಂಗಾಳ ತಂಡವು ಏಪ್ರಿಲ್ 1ಕ್ಕೆ ಕೇರಳ ತಂಡವನ್ನು ಎದುರಿಸಲಿದೆ.
ಬಂಗಾಳ ತಂಡದ ನಾಯಕ ಜಿತೇನ್ ಮುರ್ಮು ಮತ್ತು ತೀರ್ಥಂಕರ ಸರ್ಕಾರ್ ಅವರು ಕ್ರಮವಾಗಿ 57 ಮತ್ತು 92 ನೇ ನಿಮಿಷದಲ್ಲಿ ಗೋಲು ಗಳಿಸಿ ಬಂಗಾಳವನ್ನು ಗೆಲುವಿನ ದಡ ಮುಟ್ಟಿಸಿದರು.
ಕರ್ನಾಟಕ ತಂಡದ ಲೀಡ್ ಆಟಗಾರರ ಮೂರು ಅತ್ಯುತ್ತಮ ಪ್ರಯತ್ನಗಳನ್ನು ವಿಫಲಗೊಳಿಸಿದ ಗೋಲ್ ಕೀಪರ್ ರಂಜಿತ್ ಮಜುಮ್ದಾರ್ ಅವರು ಕರ್ನಾಟಕದ ಗೆಲುವಿನ ಆಸೆಗೆ ತಣ್ಣೀರೆರಿಚಿದರು.
ಕರ್ನಾಟಕ ತಂಡ ದಿಟ್ಟ ಹೋರಾಟ ಮಾಡಿತಾದರು ಗೋಲ್ ಕೀಪರ್ ರಂಜಿತ್ ಮಜುಮ್ದಾರ್ ಅವರ ಉತ್ತಮ ರಕ್ಷಣೆ ಹಾಗೂ ಅದೃಷ್ಟದ ಕೊರತೆಯಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಕರ್ನಾಟಕದ ಪರ ಸಮಂತ್ ದೊಡ್ಡ ಹಾಗೂ ರಾಜೇಶ್ ಉತ್ತಮ ಆಟ ಪ್ರದರ್ಶಿಸಿದರು.