ಚೆನ್ನೈ, ಏಪ್ರಿಲ್ 25: ಭಾರತದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಪಾಕಿಸ್ತಾನದ ಮಾಜಿ ಹಾಕಿ ನಾಯಕ ಮನ್ಸೂರ್ ಅಹ್ಮದ್ ಬಯಸಿದ್ದರು. ಅವರ ಹೃದಯ ಕಸಿಗೆ ನೆರವು ನೀಡಲು ಚೆನ್ನೈ ಹಾಕಿ ಅಸೋಸಿಯೇಶನ್ ಒಪ್ಪಿಗೆ ಸೂಚಿಸಿದೆ. ಜೊತೆಗೆ ಚೆನ್ನೈಯಲ್ಲಿರುವ ಖ್ಯಾತ ವೈದ್ಯರೊಬ್ಬರು ಮನ್ಸೂರ್ ಅವರನ್ನು ಉಪಚರಿಸಿದ ವೈದ್ಯರು ತನ್ನನ್ನು ಸಂಪರ್ಕಿಸಿರುವುದಾಗಿ ತಿಳಿಸಿದ್ದಾರೆ.
'ಮನ್ಸೂರ್ ಅಹ್ಮದ್ ಅವರನ್ನು ಉಪಚರಿಸಿದ ವೈದ್ಯರು ಅವರ ಮೆಡಿಕಲ್ ರಿಪೋರ್ಟನ್ನು ನನಗೆ ಕಳುಹಿಸಿಕೊಟ್ಟಿದ್ದಾರೆ, ಜೊತೆಗೆ ಮನ್ಸೂರ್ ಅವರಿಗೆ ಸಹಾಯ ಮಾಡುವಂತೆಯೂ ಕೇಳಿಕೊಂಡಿದ್ದಾರೆ. ಅವರಿಗೆ ನೆರವು ನೀಡುವ ನೆಲೆಯಲ್ಲಿ ನಾವು ಯೋಚಿಸುತ್ತಿದ್ದೇವೆ' ಎಂದು ಚೆನ್ನೈ ಮೂಲದ ಹಿರಿಯ ಹೃದಯ ಕಸಿ ಸರ್ಜನ್ ಡಾ. ಕೆ. ಆರ್. ಬಾಲಕೃಷ್ಣನ್ ಮಂಗಳವಾರ ತಿಳಿಸಿದ್ದಾರೆ.
ಸದ್ಯ ಪ್ಯಾಲೆಸ್ತೈನ್ ನಲ್ಲಿ ನೆಲೆಸಿರುವ ರಾಧಾಕೃಷ್ಣನ್ ಮಕ್ಕಳ ಹೃದಯ ಚಿಕಿತ್ಸೆಗೆ ಸಂಬಂಧಿಸಿ ಅಲ್ಲಿನ ವೈದ್ಯರಿಗೆ ಸಹಾಯ ನೀಡುತ್ತಿದ್ದಾರೆ.
ದಶಕಗಳ ಹಿಂದೆಯಿಂದಲೇ ಹೃದಯದ ತೊಂದರೆ ಅನುಭವಿಸುತ್ತಿರುವ ಮನ್ಸೂರ್ ಅವರು ವೈದ್ಯರ ಎಚ್ಚರಿಕೆ ಮೇರೆಗೆ ಈಗ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಬಯಸಿದ್ದಾರೆ. ಆದರೆ ಅವರಿಗೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಸಾಕಷ್ಟು ಸವಾಲುಗಳೂ ಇವೆ.
ಈ ಹಿಂದೆ ಕರಾಚಿಯ ಪೋಸ್ಟ್ ಗ್ರ್ಯಾಜ್ಯುಯೇಟ್ ಮೆಡಿಕಲ್ ಸೆಂಟರ್ ನಲ್ಲಿ ಡಾ. ಫರ್ವೇಜ್ ಚೌಧರಿ ಅವರಿಂದ ಚಿಕಿತ್ಸೆ ಪಡೆದಿದ್ದ ಮನ್ಸೂರ್, ಫರ್ವೇಜ್ ಸೂಚನೆ ಮೇರೆಗೆ ಹೃದಯ ಚಿಕಿತ್ಸೆಗೆ ಭಾರತದತ್ತ ದೃಷ್ಟಿ ನೆಟ್ಟಿದ್ದಾರೆ.
ವಿದೇಶಿಗರಿಗೆ ಕಠಿಣ ಹೃದಯ ಚಿಕಿತ್ಸೆ ನಿಯಮ
ಭಾರತವು ಮನ್ಸೂರ್ ಅವರ ಕೋರಿಕೆಯನ್ನು ಪರಿಗಣಿಸಿದರೂ ಚಿಕಿತ್ಸೆ ನಡೆಯಲು ಬಹಳ ಸಮಯ ಅಂದರೆ ಸುಮಾರು 4-6 ತಿಂಗಳವರೆಗೂ ಮನ್ಸೂರ್ ಕಾಯಬೇಕಾಗಬಹುದು. ದೇಶವೊಂದರಲ್ಲಿ ವಿದೇಶಿಗನೊಬ್ಬ ಹೃದಯ ಕಸಿ ಮಾಡಿಸಿಕೊಳ್ಳಬೇಕಾದರೆ ಅಲ್ಲಿರುವ ಕೆಲವು ಕಠಿಣ ನಿಯಮಗಳು ಅಡ್ಡಿಯಾಗುವುದೇ ಚಿಕಿತ್ಸೆ ವಿಳಂಬವಾಗುವುದಕ್ಕೆ ಕಾರಣ.
ನಿಯಮಗಳ ಪ್ರಕಾರ ವಿದೇಶಿಗನೊಬ್ಬನಿಗೆ ಹೃದಯ ಕಸಿ ಮಾಡಿಸಬೇಕಾದರೆ ಭಾರತದಲ್ಲಿ ಹೃದಯ ಕಸಿ ಬಯಸಿರುವ ರೋಗಿ ಇರಬಾರದು. ಒಂದು ವೇಳೆ ಇದ್ದರೆ ಭಾರತೀಯನ ಕೋರಿಕೆಯನ್ನು ಮೊದಲು ಪರಿಗಣಿಸಬೇಕು. ಹೊಸ ನಿಯಮದ ಪ್ರಕಾರ ವಿದೇಶಿಗನಿಗೆ ಹೃದಯ ಕಸಿ ಮಾಡಬೇಕಾದರೆ ಹೃದಯ ಬಯಸಿರುವ ಭಾರತೀಯ ರೋಗಿ ಬೇರೆ ಯಾರೂ ಇಲ್ಲ ಎಂಬ ಜವಾಬ್ದಾರಿ ಹೊರಲು ಆ ಆಸ್ಪತ್ರೆ ತಯಾರಿರಬೇಕು.
ಭಾರತದಲ್ಲಿ ಹೃದಯ ಚಿಕಿತ್ಸೆಗೆ ಒಳಗಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದ ಅಹ್ಮದ್, ಈ ಹಿಂದೆ ಭಾರತೀಯರನ್ನು ಉದ್ದೇಶಿಸಿ, 'ಹಾಕಿ ಮೈದಾನದಲ್ಲಿ ಹಣಾಹಣಿಗಿಳಿದಿರುವಾಗ ನಾನು ಭಾರತೀಯ ಅಭಿಮಾನಿಗಳಿಗೆ ನೋವನ್ನುಂಟು ಮಾಡಿರಬಹುದು. ಆದರೆ ಅದು ಬರೀ ಆಟವಷ್ಟೇ. ನನಗೀಗ ಹೃದಯ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಅದಕ್ಕಾಗಿ ಭಾರತ ಸರ್ಕಾರದ ನೆರವನ್ನು ನಿರೀಕ್ಷಿಸುತ್ತಿದ್ದೇನೆ' ಎಂದಿದ್ದರು.
ಮನ್ಸೂರ್ ಅಹ್ಮದ್ ಅವರು 1990ರಲ್ಲಿ ಪಾಕಿಸ್ತಾನ ಹಾಕಿ ತಂಡಕ್ಕೆ ನಾಯಕನಾಗಿ ಸೇರಿಕೊಂಡಿದ್ದರು. ಇವರ ಮುಂದಾಳತ್ವದ ಪಾಕ್ ತಂಡ 1994ರಲ್ಲಿ ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ಜಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.