ಮಾರ್ಗೋವಾ, ಆ.26: ಹಾರುವ ಸಿಖ್ ಎಂದೇ ಖ್ಯಾತರಾಗಿರುವ ಭಾರತದ ಹೆಮ್ಮೆಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರು ಗೋವಾದ ಸಂವಾದ ಕಾರ್ಯಕ್ರಮದಲ್ಲಿ ಕ್ರೀಡಾ ಪ್ರಶಸ್ತಿ ಆಯ್ಕೆ ಬಗ್ಗೆ ಕಿಡಿಕಾರಿದ್ದಾರೆ.
ಭಾರತೀಯ ಕ್ರೀಡಾಪಟುಗಳ ಶ್ರೇಷ್ಠ ಸಾಧನೆ ಪರಿಗಣಿಸಿ ನೀಡಲಾಗುವ ಅರ್ಜುನ ಪ್ರಶಸ್ತಿ ಈಗ ಬೆಲೆ ಇಲ್ಲದ್ದಂತಾಗಿದೆ. ಅರ್ಜುನ ಪ್ರಶಸ್ತಿಯಲ್ಲಿ ದೇಗುಲದಲ್ಲಿ ಪ್ರಸಾದ ಹಂಚಿದಂತೆ ಹಂಚಲಾಗುತ್ತಿದೆ ಎಂದು ಮಿಲ್ಕಾ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಗೋವಾದ ಚೌಗುಲೆ ಕಾಲೇಜಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ 'ವಿದ್ಯಾರ್ಥಿಗಳೊಡನೆ ಮಿಲ್ಕಾಸಿಂಗ್ ಸಂವಾದ' ಎಂಬ ಕಾರ್ಯಕ್ರಮದಲ್ಲಿ ಮಿಲ್ಕಾಸಿಂಗ್ ಮಾತನಾಡಿದರು.
ಮಿಲ್ಕಾ ಸಿಂಗ್ ಅವರ ಜೀವನಗಾಥೆ ಬಗ್ಗೆ ಓದಿ, ತಿಳಿದು ಹಾಗೂ ಭಾಗ್ ಮಿಲ್ಕಾ ಭಾಗ್ ಚಿತ್ರವನ್ನು ನೋಡಿ ಸ್ಫೂರ್ತಿ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ['ಸಚಿನ್ ಗೆ ಭಾರತ ರತ್ನ ದೊಡ್ಡ ಜೋಕು']
ಅರ್ಜುನ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಯಾವ ಮಾನದಂಡ ಅನುಸರಿಸಲಾಗುತ್ತಿದೆ? ಕ್ರೀಡಾಳುಗಳ ಸಾಧನೆಯ ಗುಣಮಟ್ಟ ಅಳೆಯಲು ಯಾವ ಮಾಪಕ ಬಳಸುತ್ತಿದ್ದಾರೆ. ಲಾಟರಿ ಎತ್ತಿ ಪ್ರಶಸ್ತಿ ನೀಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
'ನನಗೆ ಅರ್ಜುನ ಪ್ರಶಸ್ತಿಯನ್ನು ನಿರಾಕರಿಸಲಾಗಿತ್ತು. ಪದ್ಮಶ್ರೀ ಪ್ರಶಸ್ತಿ ನೀಡಿದ ಮೇಲೆ ಅರ್ಜುನ ಪ್ರಶಸ್ತಿ ಸ್ವೀಕರಿಸಿದೆ. ಇದು ಹೇಗೆ ಗೊತ್ತಾ? ನನ್ನ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದ ಮೇಲೆ ಎಸ್ ಎಸ್ ಸಿ ಪ್ರಮಾಣಪತ್ರ ಪಡೆದ ಹಾಗೆ ಆಯ್ತು ಎಂದು ಮಿಲ್ಕಾ ಸಿಂಗ್ ಹೇಳಿದ್ದಾರೆ.
ಮೂರು ಬಾರಿ ಒಲಿಂಪಿಯನ್ ಮಿಲ್ಕಾ ಸಿಂಗ್ ಅವರು ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಹಾಗೂ ಸರ್ಕಾರ ಕ್ರೀಡಾಪಟುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಕಿಡಿಕಾರಿದರು.[ಅರ್ಜುನ ಪ್ರಶಸ್ತಿಗೆ ಗಿರೀಶ್, ಮಮತಾ ಹೆಸರು ಶಿಫಾರಸು]
ಮಿಲ್ಕಾ ಸಿಂಗ್ ಅವರು ಮಾತು ಮುಂದುವರೆಸಿ, 'ನಮ್ಮ ಅಥ್ಲೀಟ್ ಗಳಿಗೆ ಮೂಲ ಸೌಕರ್ಯ ಕೊರತೆ, ಆರ್ಥಿಕ ಪ್ರೋತ್ಸಾಹ ಕೊರತೆ ಇದೆ ನಿಜ. ಅದರೆ, ಇಂದಿನ ಅಥ್ಲೀಟ್ ಗಳಲ್ಲಿ ಸಂಕಲ್ಪ ಶಕ್ತಿ ಇಲ್ಲ. ಸಾಧಿಸುವ ಚಲ ಹಾಗೂ ಕಠಿಣ ಪರಿಶ್ರಮದ ಹಾದಿಯ ಕಲ್ಪನೆಯೂ ಇಲ್ಲ. ಭಾಗ್ ಮಿಲ್ಕಾ ಭಾಗ್ ಚಿತ್ರ ನೋಡಿದ ಮೇಲೆ ಅನೇಕ ಮಕ್ಕಳು ನಿಮ್ಮಂತೆ ನಾವು ಅಥ್ಲೀಟ್ ಆಗುವ ಆಸೆ ಎಂದಿದ್ದಾರೆ. ಅದರೆ, ಇದೆಲ್ಲವೂ ಆರಂಭಿಕ ಉತ್ಸಾಹ ಮಾತ್ರ. ಕೆಲವು ದಿನಗಳ ಕಠಿಣ ತಾಲೀಮಿನ ನಂತರ ಆಸೆ ಕರಗಿ ಬಿಡುತ್ತದೆ.
ಸುಮಾರು 12 ವರ್ಷಗಳ ಕಠಿಣ ಪರಿಶ್ರಮದ ನಂತರ ನನಗೆ ಗೆಲುವಿನ ಸಂಭ್ರಮ ಕಾಣಿಸಿತು. ಸುಮಾರು 80ಕ್ಕೂ ಅಧಿಕ ಅಂತಾರಾಷ್ಟ್ರೀಯ ರೇಸ್ ಗಳಲ್ಲಿ ಸ್ಪರ್ಧಿಸಿದ್ದೆ. ಈಗಿನ ಅಥ್ಲೀಟ್ ಗಳಿಗೆ ಇದು ಸಾಧ್ಯವೆ? ಎಂದು ಮಿಲ್ಕಾ ಸಿಂಗ್ ಪ್ರಶ್ನಿಸಿದ್ದಾರೆ.