ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಸರಣಿ ಜಯ
ಪಾಕಿಸ್ತಾನದಲ್ಲಿ 2004ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಮೊದಲ ಮತ್ತು ಮೂರನೇ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಪಾಕಿಸ್ತಾನದೆದುರು ಭಾರತ ಜಯಿಸಿದ ಮೊದಲ ಟೆಸ್ಟ್ ಸರಣಿಯಿದು. ವೀರೇಂದ್ರ ಸೆಹ್ವಾಗ್, ಕನ್ನಡಿಗ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಈ ವೇಳೆ ತಂಡಕ್ಕೆ ಬ್ಯಾಟಿಂಗ್ ಬಲ ತುಂಬಿದ್ದರೆ, ಇರ್ಫಾನ್ ಪಠಾಣ್ ಮತ್ತು ಲಕ್ಷ್ಮೀಪತಿ ಬಾಲಾಜಿ ಬೌಲಿಂಗ್ ಬೆಂಬಲ ನೀಡಿದ್ದರು.
ಎಫ್-1 ನಲ್ಲಿ ನಾರಾಯಣ್ ಕಾರ್ತಿಕೇಯನ್
ಇನ್ನೊಂದು ಕ್ರೀಡಾ ಕ್ಷೇತ್ರಕ್ಕೆ ಭಾರತ ಲಗ್ಗೆಯಿಟ್ಟ ಅಪೂರ್ವ ಕ್ಷಣವಿದು. ಭಾರತದ ನಾರಾಯಣ್ ಕಾರ್ತಿಕೇಯನ್ 2005ರಲ್ಲಿ ಮೊದಲ ಬಾರಿಗೆ ಫಾರ್ಮುಲ ಒನ್ ರೇಸ್ ಕಾರಿನಲ್ಲಿ ಚಾಲಕನ ಸೀಟ್ ಅಲಂಕರಿಸಿದ್ದರು. ಭಾರತದ ಮೊದಲ ಎಫ್ ವನ್ ಡ್ರೈವರ್ ಆಗಿ ನಾರಾಯಣ್ ಗುರುತಿಸಿಕೊಂಡಿದ್ದರು.
ಬಿಲಿಯರ್ಡ್ಸ್ ಜಗತ್ತು ಭಾರತದತ್ತ ತಿರುಗಿತ್ತು
ಪಂಕಜ್ ಅಡ್ವಾಣಿ ಆಗ ಬರೀ 19ರ ಹರೆಯದವರು. ಆದರೆ ಅವರ ಆಟ ಮಾತ್ರ ಅದ್ಭುತವಾಗಿತ್ತು. ಮೆಲ್ಟಾದಲ್ಲಿ 2005 ರಲ್ಲಿ ನಡೆದಿದ್ದ ಐಬಿಎಸ್ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಪಂಕಜ್ ಅವರು ಪಾಯಿಂಟ್ಸ್ ಮತ್ತು ಕಾಲಾವಧಿ ಎರಡೂ ಮಾದರಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯನೆನಿಸಿಕೊಂಡಿದ್ದರು.
ಧೋನಿ ಬಳಗಕ್ಕೆ ವರ್ಲ್ಡ್ ಟಿ20 ಟ್ರೋಫಿ
2007ಕ್ಕೆ ಚುಟುಕು ಕ್ರಿಕೆಟ್ ಮಾದರಿ ಆಗಿನ್ನೂ ಹೊಸ ಹೊಸತು. ಭಾರತದ ಕ್ರಿಕೆಟ್ ತಂಡ ಕೂಡ ಯುವಕರದ್ದು. ನಾಯಕನ (ಧೋನಿ) ಮುಖವೂ ಹೊಸತೇ. ಆದರೆ ಟೀಮ್ ಇಂಡಿಯಾ ಪಾಕಿಸ್ತಾನದ ಎದುರು ಐಸಿಸಿ ವರ್ಲ್ಡ್ ಟಿ20 ಪಂದ್ಯ ಗೆದ್ದು ಸಂಭ್ರಮಿಸಿತ್ತು. 1983ರ ನಂತರ ಎರಡನೇ ಐಸಿಸಿ ವರ್ಲ್ಡ್ ಪ್ರಶಸ್ತಿಯಿದು.
ಚಿನ್ನಕ್ಕೆ ಗುರಿಯಿಟ್ಟ ಬಿಂದ್ರ
2008ರ ಬೀಜಿಂಗ್ ಒಲಿಂಪಿಕ್ಸ್ ನ ಶೂಟಿಂಗ್ ವೈಯಕ್ತಿಕ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟು ಭಾರತದ ಮೊಲದ ಶೂಟರ್ ಹಿರಿಮೆಗೆ ಅಭಿನವ್ ಬಿಂದ್ರಾ ಕಾರಣರಾಗಿದ್ದರು. 10 ಮೀಟರ್ ಏರ್ ರೈಫಲ್ ನಲ್ಲಿ ಬಿಂದ್ರ ಚಿನ್ನ ಗೆದ್ದಿದ್ದರು. ಇದೇ ವರ್ಷ ಒಲಿಂಪಿಕ್ಸ್ ನಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಭಾರತ ಪರ ಒಲಿಂಪಿಕ್ಸ್ ಪದಕ (ಕಂಚು) ಗೆದ್ದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದರು.
ಫುಟ್ಬಾಲ್ ತಂಡಕ್ಕೆ ನೆಹರೂ ಕಪ್, ಸಚಿನ್ ಏಕದಿನ 200
2009ರಲ್ಲಿ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಅಂತಾರಾಷ್ಟ್ರೀಯ ಟೂರ್ನಿಯಾಗಿ ನೆಹರೂ ಕಪ್ ಅನ್ನು ಅಯೋಜಿಸಿತ್ತು. ಇದರಲ್ಲಿ ಫೈನಲ್ ನಲ್ಲಿ ಭಾರತ ತಂಡ ಸಿರಿಯಾವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. 120 ನಿಮಿಷದ ಪಂದ್ಯ 1-1ರಿಂದ ಸಮಬಲಗೊಂಡಿತ್ತು. ಆಗ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯ್ತು. ಭಾರತ 5-4ರಿಂದ ಸಿರಿಯಾಕ್ಕೆ ಕಹಿಯುಣಿಸಿತು. 2010ರಲ್ಲಿ ಗ್ವಾಲಿಯಾರ್ ನಲ್ಲಿ ನಡೆದಿದ್ದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ ಸಚಿನ್ 200 ರನ್ ಬಾರಿಸಿದ್ದರು.
ಭಾರತಕ್ಕೆ ವಿಶ್ವಕಪ್
1983ರಲ್ಲಿ ಕಪಿಲ್ ದೇವ್ ಬಳಗ ವಿಶ್ವಕಪ್ ಜಯಿಸಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ತಂಡ 2011ರಲ್ಲಿ ವಿಶ್ವಕಪ್ ಪ್ರಶಸ್ತಿ ಜಯಿಸಿತ್ತು. ಮುಂಬೈಯಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ವಿಶ್ವಕಪ್ ಎತ್ತಿತ್ತು. ಧೋನಿ, ಗಂಭೀರ್ ಈ ವೇಳೆ ಅಮೋಘ ಆಟ ಪ್ರದರ್ಶಿಸಿದ್ದರು.
ಸುಶೀಲ್ ಗೆ ಎರಡು ಒಲಿಂಪಿಕ್ಸ್ ಬೆಳ್ಳಿ
2012ರಲ್ಲಿ ನಡೆದಿದ್ದ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತದ ರಸ್ಲರ್ ಸುಶೀಲ್ ಕುಮಾರ್ ಎರಡು ವೈಯಕ್ತಿಕ ಬೆಳ್ಳಿ ಪದಕಗಳನ್ನು ಜಯಿಸಿ ಗಮನ ಸೆಳೆದಿದ್ದರು. 2015ರಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ನಂಬರ್ ವನ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. 2012ರ ಒಲಿಂಪಿಕ್ಸ್ ನಲ್ಲಿ ಸೈನಾ ಕೂಡ ಕಂಚು ಜಯಿಸಿದ್ದರು.
ಒಲಿಂಪಿಕ್ಸ್ ಸಾಕ್ಷಿ ಕಂಚು, ಕ್ರಿಕೆಟ್ ನಲ್ಲಿ ಮಿಥಾಲಿ ಮಿಂಚು
2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸಾಕ್ಷಿ ಮಲಿಕ್ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕ ಗೆದ್ದ ಭಾರತ ಮೊದಲ ಮಹಿಳಾ ರಸ್ಲರ್ ಎನಿಸಿಕೊಂಡರು. 2017ರಲ್ಲಿ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿ ಗಮನ ಸೆಳೆದಿತ್ತು. ಇದರಲ್ಲಿ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋತಿತಾದರೂ ಭಾರತದ ವನಿತೆಯರು ಕ್ರಿಕೆಟ್ ನಲ್ಲಿ ಮುಂದೆ ಮಿಂಚಲು ಪ್ರೇರಣೆಯಾಯಿತು.